ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ಟಿಕೆಟ್‌ ನೀಡದಿರುವ ಬಗ್ಗೆ ಶಾಸಕ ರಮೇಶ್‌ಕುಮಾರ್‌ ಮುನಿಸಿಕೊಂಡಿಲ್ಲ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಿಳಿಸಿದರು. 

ಶ್ರೀನಿವಾಸಪುರ (ಏ.16): ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ಟಿಕೆಟ್‌ ನೀಡದಿರುವ ಬಗ್ಗೆ ಶಾಸಕ ರಮೇಶ್‌ಕುಮಾರ್‌ ಮುನಿಸಿಕೊಂಡಿಲ್ಲ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಿಳಿಸಿದರು. ಅವರು ಶನಿವಾರ ಶಾಸಕ ರಮೇಶ್‌ಕುಮಾರ್‌ ಅವರ ಅಡ್ಡಗಲ್‌ ಗ್ರಾಮದಲ್ಲಿ ರಮೇಶ್‌ಕುಮಾರ್‌ರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಭಾನುವಾರ ಕೋಲಾರದಲ್ಲಿ ನಡೆಯಲಿರುವ ಜೈ ಭಾರತ್‌ ಕಾರ್ಯಕ್ರಮದ ಕುರಿತು ಚರ್ಚೆ ಮಾಡಲು ಬಂದಿದ್ದೆ ಎಂದರು. ಸಿದ್ದರಾಮಯ್ಯ ನವರಿಗೆ ಕೋಲಾರ ಟಿಕೆಟ್‌ ಸಿಗದಿರುವ ವಿಷಯದಲ್ಲಿ ರಮೇಶ್‌ಕುಮಾರ್‌ ಮುನಿಸಿಕೊಂಡಿಲ್ಲ. ಅವರು ನಮ್ಮ ಹಿರಿಯರು, ಕೆಲವೊಮ್ಮೆ ನನ್ನ ಮೇಲೆಯೂ ರೇಗಾಡುತ್ತಾರೆ. ಅವರು ನಮ್ಮ ತಂದೆ ತಾಯಿ ಇದ್ದಹಾಗೆ. ಯಾವುದೇ ದ್ವೇಷವಿಲ್ಲ, ಅವರನ್ನು ಸಮಾಧಾನ ಮಾಡಲು ನಾನು ಬಂದಿಲ್ಲ ಎಂದರು.

Add Asianetnews Kannada as a Preferred SourcegooglePreferred

ಮೀಸಲಾತಿ ಹೆಸರಿನಲ್ಲಿ ಜನತೆಗೆ ಮೋಸ: ಬಿಜೆಪಿಯಂತೆ ಕಾಂಗ್ರೆಸ್‌ ಒಡೆದ ಮನೆಯಲ್ಲ. 70ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ಬರುತಿದ್ದಾರೆ. ಬಿಜೆಪಿ ಮುಳಗುತ್ತಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ಮೀಸಲಾತಿ ಹೆಸರಿನಲ್ಲಿ ಒಕ್ಕಲಿಗ, ಲಿಂಗಾಯಿತ, ಮುಸ್ಲಿಂರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ

ರಮೇಶ್‌ಕುಮಾರ್‌ ಜತೆ ಸಮಾಲೋಚನೆ: ಬೈರತಿ ಸುರೇಶ್‌ ಜತೆ ಹೆಲಿಕಾಪ್ಟರ್‌ ಮೂಲಕ ಅಡ್ಡಗಲ್‌ ಗ್ರಾಮಕ್ಕೆ ಆಗಮಿಸಿದ ಸುರ್ಜೇವಾಲ ಅವರು ರಮೇಶ್‌ಕುಮಾರ್‌ ನಿವಾಸದಲ್ಲಿ ಉಪಹಾರ ಸೇವಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರಾದರೂ ಆ ಸಂದರ್ಭದಲ್ಲಿ ಯಾರನ್ನೂ ಒಳಗಡೆ ಆಹ್ವಾನಿಸಿರಲಿಲ್ಲ. ಮಾತುಕತೆ ವಿವರ ಬಹಿರಂಗಗೊಳಿಸಲಿಲ್ಲ. ಇಲ್ಲಿಗೆ ರಾಹುಲ್‌ಗಾಂಧಿ ಕಾರ್ಯಕ್ರಮ ಚರ್ಚಿಸಲು ಬಂದಿದ್ದೇನೆಯೇ ಹೊರತು ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಬಂದಿಲ್ಲ ಎಂದು ಸುರ್ಜೇವಾಲ ಹೇಳಿದರು.

ಕಾಂಗ್ರೆಸ್ ಟಿಕೆಟ್ ತಪ್ಪಿದ್ದಕ್ಕೆ ಗಳಗಳನೆ ಅತ್ತ ಗೋಪಿಕೃಷ್ಣ: ಕಾರ್ಯಕರ್ತರಿಂದ ಭುಗಿಲೆದ್ದ ಆಕ್ರೋಶ

ಕೋಲಾರಕ್ಕೆ ಬಾರದ ಸುರ್ಜೇವಾಲ: ರಮೇಶ್‌ಕುಮಾರ್‌ ಅವರೂ ಸಹ ಸುಮಾರು ಒಂದು ಗಂಟೆ ಕಾಲ ನಡೆದ ಮಾತುಕತೆ ವಿವರವನ್ನು ಬಹಿರಂಗಪಡಿಸಲಿಲ್ಲ, ಮಧ್ಯಾಹ್ನದ ತನಕ ಸುರ್ಜೇವಾಲ ಅಡ್ಡಗಲ್‌ನಲ್ಲೇ ಇದ್ದರು, ಮಧ್ಯಾಹ್ನ 1 ಗಂಟೆಗೆ ಡಿ.ಕೆ.ಶಿವಕುಮಾರ್‌ ಕೋಲಾರದ ಸಮಾವೇಶದ ಸ್ಥಳ ಪರಿಶೀಲನೆಗೆ ಬಂದಾಗಲೂ ಸುರ್ಜೇವಾಲ ಕೋಲಾರದ ಕಡೆ ಬರಲಿಲ್ಲ. ಶುಕ್ರವಾರ ರಾತ್ರಿ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಯಿಲ್ಲ ಎಂದು ತಿಳಿದ ನಂತರ ರಮೇಶ್‌ಕುಮಾರ್‌ ಸಿದ್ದರಾಮಯ್ಯ ಇಲ್ಲವೆಂದರೆ ನಾನು ಸ್ಪರ್ಧೆ ಮಾಡುವುದಿಲ್ಲವೆಂದು ಸಂದೇಶ ರವಾನಿಸಿದ್ದಾರೆ. ಆದ ಕಾರಣ ರಮೇಶ್‌ಕುಮಾರ್‌ ಅವರನ್ನು ಸಮಾಧಾನಪಡಿಸಲು ಸುರ್ಜೇವಾಲ ಆಗಮಿಸಿದ್ದಾರೆಂಬ ಸುದ್ದಿ ದಟ್ಟವಾಗಿ ಹರಡಿದ್ದು, ಅದನ್ನು ಸುರ್ಜೇವಾಲ ನಿರಾಕರಿಸಿದ್ದಾರೆ.