* ಐದು ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡ ಗುರು-ಶಿಷ್ಯ* ಎಚ್‌ಡಿಕೆ-ರಮೇಶ್ ಬಂಡಿಸಿದ್ದೇಗೌಡ ಸಮಾಗಮ..!* ಜೆಡಿಎಸ್ ಮುಖಂಡರೊಬ್ಬರ ಶ್ರದ್ಧಾಂಜಲಿ ಸಭೆಯಲ್ಲಿ ಆತ್ಮೀಯ ಮಾತುಕತೆ

ಮಂಡ್ಯ, 14): ಐದು ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡ ಗುರು-ಶಿಷ್ಯ. ಜೆಡಿಎಸ್ ಮುಖಂಡರೊಬ್ಬರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿಆತ್ಮೀಯ ಮಾತುಕತೆ.

Add Asianetnews Kannada as a Preferred SourcegooglePreferred

ಹೌದು... ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಮತ್ತು ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ(Ramesh Bandisiddegowda ) ಸುಮಾರು ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

Karnataka Politics ಒಂದೇ ಫೋನ್‌ ಕಾಲ್, ಸಿಎಂ ಇಬ್ರಾಹಿಂ ಯುಟರ್ನ್, ಜೆಡಿಎಸ್‌ಗೆ ಬಿಗ್ ಶಾಕ್

ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯ ಜೆಡಿಎಸ್ ಮುಖಂಡ ವೆಂಕಟೇಶ್ ಎಂಬುವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗುರು-ಶಿಷ್ಯ ಇಬ್ಬರೂ ಅಕ್ಕ-ಪಕ್ಕ ಕುಳಿತು ಆತ್ಮೀಯ ಮಾತುಕತೆ ನಡೆಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಶಿಷ್ಯನೊಂದಿಗೆ ನಡೆಸಿರುವ ಮಾತುಕತೆ ರಾಜಕೀಯವಾಗಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯ ಜೆಡಿಎಸ್ ಮುಖಂಡ ವೆಂಕಟೇಶ್ ಇತ್ತೀಚೆಗೆ ನಿಧನ ಹೊಂದಿದ್ದರಿಂದ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಜನತಾ ಪರಿವಾರದಿಂದಲೂ ಪಕ್ಷದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ ವೆಂಕಟೇಶ್ ವರಿಷ್ಠರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಇದೇ ಕಾರಣಕ್ಕೆ ಶ್ರದ್ಧಾಂಜಲಿ ಸಭೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕ ರವೀಂದ್ರ ಶ್ರೀಕಂಠಯ್ಯ ಜೊತೆ ಆಗಮಿಸಿದ್ದರು.

ಈ ಶ್ರದ್ಧಾಂಜಲಿ ಸಭೆಗೆ ರಮೇಶ್ ಬಂಡಿಸಿದ್ದೇಗೌಡರು ಆಗಮಿಸಿದ್ದರು. ಕುಮಾರಸ್ವಾಮಿ ಅವರು ವೇದಿಕೆ ಏರುತ್ತಿದ್ದಂತೆಯೇ ಅವರಿಗೆ ರಮೇಶ್ ನಮಸ್ಕರಿಸಿದರು. ಇಬ್ಬರೂ ಪರಸ್ಪರ ಕೈಕುಲುಕಿ ನಗುಮೊಗದಿಂದಲೇ ಅಕ್ಕ-ಪಕ್ಕ ಕುಳಿತುಕೊಂಡರು. ಒಂದೆರಡು 
ಲೋಕಾಭಿರಾಮವಾಗಿ ಉಭಯ ಕುಶಲೋಪರಿ ವಿಚಾರಿಸಿದರು. 

ಈ ಹಿಂದೆ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದರೆಂಬ ಆರೋಪ ಹೊತ್ತು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜೆಡಿಎಸ್‌ನಿಂದ ಉಚ್ಛಾಟನೆಗೊಳಗಾದವರಲ್ಲಿ ರಮೇಶ್ ಬಂಡಿಸಿದ್ದೇಗೌಡರೂ ಒಬ್ಬರಾಗಿದ್ದರು. 
ತದನಂತರದಲ್ಲಿ ಚಲುವರಾಯಸ್ವಾಮಿ ಅವರೊಂದಿಗೆ ರಮೇಶ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ರಮೇಶ್ ಅಂತರವನ್ನೇ ಕಾಪಾಡಿಕೊಂಡಿದ್ದರು. ಜೆಡಿಎಸ್ ತ್ಯಜಿಸಿದ ಬಳಿಕ ರಮೇಶ್ ಬಂಡಿಸಿದ್ದೇಗೌಡರು ಒಮ್ಮೆಯೂ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡದೆ, ಟೀಕಿಸುವ ಗೋಜಿಗೂ ಹೋಗದೆ ಮೌನ ವಹಿಸಿದ್ದರು.

ಇದೀಗ ಈ ಬೆಳವಣಿಗೆಯ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಬಿರುಸಿನಿಂದ ಶುರುವಾಗಿದೆ. ಮತ್ತೆ ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ರ ರಮೇಶ್ ಬಂಡಿಸಿದ್ದೇಗೌಡ? ಮಾತೃಪಕ್ಷ ಸೇರ್ತಾರ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ? ಹಳೇ ಸ್ನೇಹಿತನನ್ನ ಬರಮಾಡಿಕೊಳ್ತಾರ ಮಾಜಿ ಸಿಎಂ? ಹೀಗೆ ನಾನಾ ರೀತಿಯಲ್ಲಿ ಚರ್ಚೆ, ವಿಶ್ಲೇಷಣೆಗಳು ನಡೆದಿವೆ.