ಮತ್ತೆ ಹೊಸ ಹಾದಿ ಹಿಡಿದ ಪೈಲಟ್, ಗಾಂಧಿ ಕುಟುಂಬಸ್ಥರನ್ನು ಸಂಪರ್ಕಿಸಲು ಯತ್ನ!
ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ| ಮತ್ತೆ ಕಾಂಗ್ರೆಸ್ನತ್ತ ಮುಖ ಮಾಡಿದ ಸಚಿನ್| ಟ್ವೀಟ್ ಬೆನ್ನಲ್ಲೇ ಮಹತ್ವದ ಹೇಳಿಕೆ
ಜೈಪುರ(ಜು.15): ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ಮತ್ತೆ ಮುಂದುವರೆದಿದೆ. ಮಂಗಳವಾರ ಕಾಂಗ್ರೆಸ್ ಪಕ್ಷ ಡಿಸಿಎಂ ಹಾಗೂ ರಾಜ್ಯ ಅಧ್ಯಕ್ಷ ಸ್ಥಾನದಿಂದ ಪೈಲಟ್ರನ್ನು ಕೆಳಗಿಳಿಸಿತ್ತು, ಹೀಗಿರುವಾಗ ಸಚಿನ್ ಪೈಲಟ್ ಮುಂದಿನ ನಡೆ ಏನಾಗಿರಬಹುದೆಂಬ ವಿಚಾರ ಭಾರೀ ಕುತೂಹಲ ಮೂಡಿಸಿತ್ತು. ಹೀಗಿರುವಾಗಲೇ ಪೈಲಟ್ ಬುಧವಾರ ಬೆಳಗ್ಗೆ ನಾನು ಇವತ್ತಿಗೂ ಕಾಂಗ್ರೆಸ್ಸಿಗ ಎಂದ ನುಡಿದಿದ್ದಾರೆ. ಅವರ ಈ ಮಾತುಗಳಿಂದ ಅವರಿನ್ನೂ ಗಾಂಧೀ ಕುಟುಂಬ ಸದಸ್ಯರನ್ನು ಭೇಟಿಯಾಗಲು ಯತ್ನಿಸುತ್ತಿದ್ದಾರೆ ಹಾಗೂ ಬಿಜೆಪಿಗೆ ಸೇರ್ಪಡೆಯಾಗುವ ವದಂತಿ ಗಾಂಧೀ ಕುಟುಂಬದಿಂದ ಅವರನ್ನು ದೂರ ಮಾಡಲು ಹೆಣೆದ ಕುತಂತ್ರ ಎಂಬ ಅನುಮಾನ ಹುಟ್ಟಿಸಿದೆ.
'ಸಚಿನ್ ಪೈಲಟ್ ಗೆ ವೆಲ್ ಕಮ್' ಬಿಜೆಪಿ ಅಗ್ರ ನಾಯಕನ ಬಹಿರಂಗ ಆಹ್ವಾನ
ಇನ್ನು ಬುಧವಾರ ಬೆಳಗ್ಗೆ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಪೈಲಟ್ 'ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ. ಹೈಕಮಾಂಡ್ ನಾಯಕರಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಹುಟ್ಟಿ ಹಾಕಲು ಇದು ಹೆಣೆದಿರುವ ಷಡ್ಯಂತ್ರ' ಎಂದಿದ್ದಾರೆ. ಮುಂದೆ ಪೈಲಟ್ ಹಿರಿಯ ನಾಯಕರನ್ನು ಭೇಟಿಯಾಗಿ ಭಿನ್ನಾಭಿಪ್ರಾಯ ಶಮನಗೊಳಿಸುವ ಯತ್ನ ನಡೆಸುತ್ತಾರಾ ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ.
ಇನ್ನು ಮಂಗಳವಾರ ತನ್ನನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಡಿಸಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಪೈಲಟ್ ಟ್ವೀಟ್ ಒಂದನ್ನು ಮಾಡುತ್ತಾ ಸತ್ಯವನ್ನು ಗೊಂದಲದಲ್ಲಿಡಬಹುದೇ ಹೊರತು ಸೋಲಿಸಲಾಗದು ಎಂದು ಹೇಳಿದ್ದರು. ಇದಾದ ಮರುದಿನವೇ ಪೈಲಟ್ ಕಾಂಗ್ರೆಸ್ ನಾಯಕರ ದೃಷ್ಟಿಯಲ್ಲಿ ತನ್ನನ್ನು ಕೆಟ್ವನಾಗಿ ಬಿಂಬಿಸಲು ಹೂಡಿದ ಷಡ್ಯಂತ್ರ ಎಂದು ಹೇಳಿರುವುದು ಅವರು ಕಾಂಗ್ರೆಸ್ನಲ್ಲೇ ಉಳಿದುಕೊಳ್ಳುವ ಸುಳಿವು ನೀಡಿದೆ.