'ನಾನು ಅಧಿಕಾರ ತ್ಯಾಗ ಮಾಡಿ ಬಂದಿದ್ದೇನೆ, ನನ್ನ ತ್ಯಾಗಕ್ಕೂ ಬೆಲೆ ಬೇಕು'
- ನಾನು ಅಧಿಕಾರ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದೇನೆ. ನನ್ನ ತ್ಯಾಗಕ್ಕೆ ಬೆಲೆ ಕೊಡಬೇಕು
- ಸಚಿವ ಸ್ಥಾನ ಕಳೆದುಕೊಂಡಿರುವ ಆರ್.ಶಂಕರ್ ಮಾರ್ಮಿಕವಾಗಿ ಹೇಳಿಕೆ
ಬೆಂಗಳೂರು (ಆ.12): ನಾನು ಅಧಿಕಾರ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದೇನೆ. ನನ್ನ ತ್ಯಾಗಕ್ಕೆ ಬೆಲೆ ಕೊಡಬೇಕು ಎಂದು ಸಚಿವ ಸ್ಥಾನ ಕಳೆದುಕೊಂಡಿರುವ ಆರ್.ಶಂಕರ್ ಮಾರ್ಮಿಕವಾಗಿ ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ನೋವನ್ನು ಹೇಳಿಕೊಂಡಿದ್ದೇನೆ. ಇನ್ನೂ ನಾಲ್ಕು ಖಾತೆ ಇದೆ. ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇನೆ. ವರಿಷ್ಠರ ಜತೆ ಚರ್ಚಿಸಿ ತಿಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಮಾಜಿ ಸಚಿವ ಶಂಕರ್ ವಿರುದ್ಧ ಕಿಡಿಕಾರಿದ್ದ ರೈತನ ವಿರುದ್ಧ ಕೇಸ್..!
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನಾನು ಕೂಡ ಕಾರಣ. ನನಗೂ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ವಿಳಂಬ ಮಾಡಬೇಡಿ ಎಂದೂ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ಅನ್ಯ ಪಕ್ಷದಿಂದ ಬಂದ ನಮ್ಮಲ್ಲಿ ಒಗ್ಗಟ್ಟು ಇದೆಯೋ ಇಲ್ಲವೋ ಎನ್ನುವುದು ಬೇರೆ. ನಾನು ಅಂದು ಪಕ್ಷೇತರ ಆಗಿದ್ದೆ. ಈಗಲೂ ಪ್ರತ್ಯೇಕವಾಗಿಯೇ ಇದ್ದೇನೆ. ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದರೂ ಅಸಮಾಧಾನ ತೋರುತ್ತಿದ್ದಾರೆ. ಆದರೆ, ನನಗೆ ಸಚಿವ ಸ್ಥಾನವೇ ಸಿಕ್ಕಿಲ್ಲ ಎಂದು ಬೇಸರದಿಂದ ಹೇಳಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಶಂಕರ್, ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.