ಪ್ರಿಯಾಂಕ್‌ ಖರ್ಗೆ ಅವರು ಬರೀ ಪ್ರಚಾರದ ಹಿಂದೆ ಬಿದ್ದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರ ಲಂಚ ಎಂದು ಪ್ರಿಯಾಂಕ್ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದರು. 

ರಾಯಚೂರು (ಆ.14) : ಪ್ರಿಯಾಂಕ್‌ ಖರ್ಗೆ ಅವರು ಬರೀ ಪ್ರಚಾರದ ಹಿಂದೆ ಬಿದ್ದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 351 ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಯಲ್ಲಿ ಭಾಗವಹಿಸಿದ್ದ ಸಚಿವರು, ಶಾಸಕ ಪ್ರಿಯಾಂಕ್‌ ಖರ್ಗೆ ಲಂಚ-ಮಂಚದ ಆರೋಪಕ್ಕೆ ಶನಿವಾರ ಪ್ರತಿಕ್ರಿಯಿಸಿ, ಪ್ರಿಯಾಂಕ್‌ ಖರ್ಗೆ ಅವರು ಪ್ರಚಾರಕ್ಕಾಗಿ ಏನೇನೋ ಮಾತನಾಡುತ್ತಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಏನೇನೋ ಇವೆ ಎಂದು ಹೇಳಿದ್ದರು, ಆ ದಾಖಲೆಗಳನ್ನು ಕೇಳಿದರೆ ಓಡಿಹೋಗಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಿಯಾಂಕ್‌ ಖರ್ಗೆ ‘ಲಂಚ ಮಂಚ’ ಹೇಳಿಕೆಗೆ ಬಿಜೆಪಿ ಕೆಂಡ

ಎಲ್ಲದರ ಬಗ್ಗೆ ನಿಕೃಷ್ಟವಾಗಿ ಮಾತನಾಡುವ ಚಾಳಿ ಸಿದ್ದರಾಮಯ್ಯ(Siddaramaiah) ಅವರದ್ದಾಗಿದೆ, ಅವರಿಗೆ ನಾಡಿನ, ರಾಷ್ಟ್ರದ ಪ್ರಜ್ಞೆ ಇಲ್ಲ.ಇಂತಹ ಕಾಂಗ್ರೆಸ್‌(Congress) ಹಾಗೂ ಸಿದ್ದರಾಮಯ್ಯ ಅವರಿಂದ ಆರ್‌ಎಸ್‌ಎಸ್‌(RSS) ಪಾಠಕಲಿಯಬೇಕಾಗಿಲ್ಲ. ಆರ್‌ಎಸ್‌ಎಸ್‌ ಶಾಖೆಯಲ್ಲೇ ನಮಗೆ​ಲ್ಲಾ ಸಂಸ್ಕಾರ ತುಂಬಿ ದೇಶ ಸೇವೆಗೆ ಬಿಟ್ಟಿದ್ದಾರೆ. ಕಾಂಗ್ರೆಸ್‌ ಧರ್ಮದ ಆಧಾರದ ಮೇಲೆ ದೇಶ ಒಡೆದು ಆಡಳಿತ ನಡೆಸಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಹೃದಯಲ್ಲಿ ರಾಷ್ಟಾ್ರಭಿಮಾನ, ಧ್ವಜದ ಮೇಲೆ ಗೌರವ ಮೂಡಿಸಲು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರನ್ನು ನೆನಪಿಸಿಕೊಳ್ಳಲು ಉದ್ದೇಶದಿಂದ ಹರ್‌ ಘರ್‌ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರು ಹೆಮ್ಮೆಯ ಪ್ರಜೆಗಳಾಗಲಿದ್ದಾರೆ ಎಂದರು.

ಮಂಗಳೂರು ಗಲಾಟೆಯ ಹಿಂದಿರುವ ಮತಾಂಧ ಸಂಘಟನೆಗಳನ್ನ ಎನ್‌ಐಎ ವಿಚಾರಣೆ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈದ್ಗಾ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಅವರು ಹೇಳಿಕೆಯಂತೆ ಪೊಲೀಸ್‌ ಇಲಾಖೆಯಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಬೇಕೆಂದರೆ ಮಹಿಳೆಯರು ಮಂಚ ಹತ್ತಬೇಕು: ಪ್ರಿಯಾಂಕ ಖರ್ಗೆ ವಾಗ್ದಾಳಿ

ಬಿ.ಎಸ್‌. ಯಡಿಯೂರಪ್ಪ(B.S.Yadiyurappa) ಅವರು ಇಳಿವಯಸ್ಸಿನಲ್ಲಿಯೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವನ್ನು ಮಾಡಿದ್ದು, ರಾಜ್ಯದಾದ್ಯಂತ ಪ್ರವಾಸ ಮಾಡೋಣ ಎಂದು ಸೂಚಿಸಿದ್ದು ಅದಕ್ಕೆ ನಾವು ಸಿದ್ಧವಿರುವುದಾಗಿ ತಿಳಿಸಿದರು. ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರಗಳ ಆಡಳಿತವನ್ನು ತುಲನೆ ಮಾಡಿದರೆ ಸಾಕು ಯಾರ ಕಾಲದಲ್ಲಿ ಹೆಚ್ಚು ಹತ್ಯೆ-ಗಲಭೆಗಳು, ಕಾನೂನು ಶಾಂತಿ ಸುವ್ಯವಸ್ಥೆ ಹಾಳಾಗಿದೆ ಎನ್ನುವುದು ತಿಳಿಯುತ್ತದೆ. ಕಾಂಗ್ರೆಸ್‌ ಆಡಳಿತದಲ್ಲಿ ಮತ್ತು ಸಿದ್ದರಾಮಯ್ಯ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು, ಡಾ.ರಾಜ್‌ ಕುಮಾರ ಅವರ ಅಂತಿಮ ಸಂಸ್ಕಾರದ ವೇಳೆ ಹಿಂಸೆ ಉಂಟಾಗಿತ್ತು. ಟಿಪ್ಪು ಜಯಂತಿ ಆಚರಿಸಿ ನಾಡಿನಲ್ಲಿ ರಕ್ತ ಹರಿಸಿದರು, ಅವರ ಇಬ್ಬರು ಗೃಹ ಸಚಿವರು ಡಮ್ಮಿಯಾಗಿದ್ದರು. ಬಿಜೆಪಿ ಆಡಳಿತದಲ್ಲಿ ಪುನೀತ್‌ ಅವರ ಅಂತಿಮಸಂಸ್ಕಾರವನ್ನು ಸರ್ಕಾರವೇ ಪಕ್ಕದಲ್ಲಿದ್ದು ಯಾವುದೇ ಅಹಿತಕರ ಘಟನೆಯಾಗದಂತೆ ನೆರವೇರಿಸಲಾಯಿತು, ಹುಬ್ಬಳ್ಳಿ ಗಲಭೆ, ಶಿವಮೊಗ್ಗ ಹತ್ಯೆ, ಮಂಗಳೂರು ಹಿಂಸೆ, ಹಿಜಾಬ್‌ ಸೇರಿ ಮತ್ತಿತರ ಘಟನೆಗಳು ನಡೆದಾಗ ಸರ್ಕಾರ ಹಾಗೂ ಗೃಹ ಇಲಾಖೆ, ಪೊಲೀಸರು ಅತ್ಯಂತ ಸಮರ್ಥವಾಗಿ ಎದುರಿಸಿರುವುದಷ್ಟೇ ಅಲ್ಲದೇ ಕಡಿಮೆ ಅವಧಿಯಲ್ಲಿಯೇ ಆರೋಪಿಗಳನ್ನು ಸಹ ಪತ್ತೆ ಹಚ್ಚಿದ್ದೇವೆ ಎಂದರು.