ಧರ್ಮಸ್ಥಳ ಗ್ರಾಮ ಕೇಸ್‌ನಲ್ಲಿ ಷಡ್ಯಂತರಿಗಳ ಹೆಸರು ಬಹಿರಂಗಪಡಿಸಬೇಕು ಮತ್ತು ಸರ್ಕಾರದ ನಡೆ ಬಗ್ಗೆ ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ನವದೆಹಲಿ (ಆ.19): ಧರ್ಮಸ್ಥಳ ಗ್ರಾಮ ಕೇಸ್‌ನಲ್ಲಿ ಷಡ್ಯಂತರಿಗಳ ಹೆಸರು ಬಹಿರಂಗಪಡಿಸಬೇಕು ಮತ್ತು ಸರ್ಕಾರದ ನಡೆ ಬಗ್ಗೆ ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೆಲ ನಿರ್ದೇಶನಗಳ ಮೇಲೆ ಕಾರ್ಯ ನಿರ್ವಹಿಸಿದೆ ಎಂದು ಸ್ವತಃ ಮುಸುಕುಧಾರಿಯೇ ಈಗ ಹೇಳಿಕೆ ನೀಡಿದ್ದಾನೆ. ಆರಂಭದಲ್ಲೇ ಈ ಅನಾಮಿಕನ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೇ ಸರ್ಕಾರ ಬೇಜವಾಬ್ದಾರಿತನ ಪ್ರದರ್ಶಿಸಿದೆ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಅನಾಮಿಕ ಮುಸುಕುಧಾರಿ ಕೊಲೆ-ಅತ್ಯಾಚಾರಕ್ಕೆ ಒಳಗಾದ ನೂರಾರು ಜನರ ಶವ ಹೂತಿದ್ದೇನೆ ಎಂದಾಗಲೇ ಸರಿಯಾಗಿ ಆತನ ವಿಚಾರಣೆ ನಡೆಸಬೇಕಿತ್ತು. ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅದ್ಯಾವುದನ್ನೂ ಮಾಡದೇ ಆತನ ತಾಳಕ್ಕೆ ಕುಣಿದಿದೆ ಎಂದು ಅವರು ಆರೋಪಿಸಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ಮುಸುಕುಧಾರಿ ಬೆರಳು ತೋರಿದಲ್ಲೆಲ್ಲಾ ಅಗೆದು ಏನೂ ಸಿಗದಿದ್ದಾಗ ಸರ್ಕಾರ ಈಗ ‘ಷಡ್ಯಂತರʼ ರಾಗ ಎಳೆಯುತ್ತಿದೆ. ಜನರ ನಂಬಿಕೆಯ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದರು.

ಉತ್ಪಾದನಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಆದ್ಯತೆ: ಜಗತ್ತಿನಲ್ಲಿ ಅತ್ಯಂತ ಯುವ ಜನಾಂಗ ಹೊಂದಿದ ಭಾರತಕ್ಕೆ ಮುಂಬರುವ ದಿನಗಳಲ್ಲಿ ಉಜ್ವಲ ಅವಕಾಶಗಳಿವೆ ಎಂದು ಹೇಳಿದರು. ಸೆಮಿಕಂಡಕ್ಟರ್, ಚಿಪ್ ಸೇರಿದಂತೆ ಉತ್ಪಾದನಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಇದರಿಂದ ಉತ್ತಮ ಅವಕಾಶಗಳು ಲಭಿಸಲಿವೆ ಎಂದರು. ವರೂರಿನ ಗುಣಧರನಂದಿ ಮಹಾರಾಜರು 2004ರಲ್ಲಿ ಎಜಿಎಂ ಶಿಕ್ಷಣ ಸಂಸ್ಥೆ ಆರಂಭಿಸಿದರು. ಹಲವು ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದಾರೆ. ವಿವಿಧೆಡೆಯಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನೂ ಹೆಚ್ಚೆಚ್ಚು ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಲಿ ಎಂದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸ್ವಾಮೀಜಿ ತಮ್ಮದೆ ಆದ ಸಾಮ್ರಾಜ್ಯ ನಿರ್ಮಿಸಿದ್ದಾರೆ. ಇಲ್ಲಿ 8ರಿಂದ 10 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಶ್ರೀಗಳು ಮಾನವ ಧರ್ಮ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ಸ್ವಾಮೀಜಿಗಳು ತಾಂತ್ರಿಕ ಕಾಲೇಜಿನ ಮೂಲಕ ವಿದ್ಯೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಅನ್ನದಾನಕ್ಕಿಂತ ವಿದ್ಯೆ ಬಹಳ ಮುಖ್ಯ. ಹಿಂದೆ ಆಸ್ತಿ ಬಗ್ಗೆ ಹೇಳುತ್ತಿದ್ದರು. ಈಗ ಮಕ್ಕಳ ವಿದ್ಯೆ ಬಹಳ ಮುಖ್ಯ. ಹೀಗಾಗಿ, ಶಿಕ್ಷಣಕ್ಕೆ ಒತ್ತು ನೀಡುವಂತೆ ಹೇಳಿದ ಅವರು, ಎಲ್ಲ ಕ್ಷೇತ್ರದಲ್ಲಿ ಭಾರತ ವಿಶ್ವಮಟ್ಟದತ್ತ ಬೆಳೆಯುತ್ತಿದೆ ಎಂದರು.

ವರೂರ ಕ್ಷೇತ್ರದ ಗುಣಧರನಂದಿ ಮಹಾರಾಜರು ಮಾತನಾಡಿ, ಋಷಿಮುನಿಗಳ ನಾಡು ಭಾರತ. ರಾಜ್ಯದಲ್ಲಿ ಯಾರೂ ಅನಕ್ಷರಾಗದೆ ಅಕ್ಷರಸ್ಥರಾಗಬೇಕು ಎಂದು ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ನನ್ನದು ವಾಣಿಜ್ಯೀಕರಣದ ಶಿಕ್ಷಣವಲ್ಲ. ಬಡವರು, ದೀನದಲಿತರು, ಅನಾಥರಿಗೆ ಶಿಕ್ಷಣ ಕೊಡಿಸುವುದೆ ನನ್ನ ಉದ್ದೇಶ. ವರೂರಿನಲ್ಲಿ ವಿಶ್ವದರ್ಜೆ ಶಿಕ್ಷಣ ನೀಡುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಮುಂಬಯಿ ಮತ್ತು ದೆಹಲಿಯವರು ಇಲ್ಲಿಗೆ ಬಂದು ಶಿಕ್ಷಣ ಪಡೆಯುವಂತಾಗಬೇಕು. ಒಳ್ಳೆಯ ಶಿಕ್ಷಣ ಕೊಟ್ಟರೆ ಅವರ ಜೀವನ ಉತ್ತಮವಾಗುತ್ತದೆ ಎಂದರು.