ಮೋದಿ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ: ಸಿದ್ದರಾಮಯ್ಯ ಕಿಡಿ
ಜನಾಕ್ರೋಶಕ್ಕೆ ಮಣಿದು ರೋಡ್ ಶೋವನ್ನು ರದ್ದುಗೊಳಿಸುವುದು ಬಿಟ್ಟು, ಅದನ್ನು ಸಮರ್ಥಿಸಿಕೊಂಡು, ವಿರೋಧಿಸುವವರ ಮೇಲೆ ಎರಗುತ್ತಿದ್ದಾರೆ ಬಿಜೆಪಿ ನಾಯಕರು. ನಾಯಕರ ತಲೆಗೇರಿರುವ ಅಧಿಕಾರದ ಮದವನ್ನು ತೋರಿಸುತ್ತದೆ: ಸಿದ್ದರಾಮಯ್ಯ
ಬೆಂಗಳೂರು(ಮೇ.06): ಪ್ರಧಾನಿ ನರೇಂದ್ರ ಮೋದಿಯವರು ನಾಳೆ(ಭಾನುವಾರ) ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆಯಾಗಿದೆ. ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಮೋದಿ ಧಿಕ್ಕರಿಸಿದ್ದಾರೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ?. ಮೋದಿ ಅವರು ರೋಡ್ ಶೋವನ್ನು ಒಂದು ದಿನ ಮುಂದಕ್ಕೆ ಹಾಕಬಹುದು. ಆದರೆ ವಿದ್ಯಾರ್ಥಿಗಳು ಪರೀಕ್ಷೆ ನಾಳೆ ಬರೆಯುತ್ತೇನೆ ಎಂದರೆ ಆಗುತ್ತಾ?. ವಿನಾಶಕಾಲೇ ವಿಪರೀತ ಬುದ್ದಿ ಎನ್ನುವ ಹಾಗಿದೆ ಬಿಜೆಪಿ ಹಠಮಾರಿತನ ಅಂತ ಕೆಂಡಕಾರಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಅವರ ಅಧಿಕೃತನ ಟ್ಟಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಬ್ಬರಿಗೆ ದೇವರು, ಇನ್ನೊಬ್ಬರಿಗೆ ಗುರು.. ಮತ್ತೊಬ್ಬನಿಗೆ ಮಹಾತ್ಮ.. ಅವರವರ ಭಾವಕ್ಕೆ ಮೋದಿ ಕಂಡು ಧನ್ಯರಾದರು!
ಜನಾಕ್ರೋಶಕ್ಕೆ ಮಣಿದು ರೋಡ್ ಶೋವನ್ನು ರದ್ದುಗೊಳಿಸುವುದು ಬಿಟ್ಟು, ಅದನ್ನು ಸಮರ್ಥಿಸಿಕೊಂಡು, ವಿರೋಧಿಸುವವರ ಮೇಲೆ ಎರಗುತ್ತಿದ್ದಾರೆ ಬಿಜೆಪಿ ನಾಯಕರು. ನಾಯಕರ ತಲೆಗೇರಿರುವ ಅಧಿಕಾರದ ಮದವನ್ನು ತೋರಿಸುತ್ತದೆ ಅಂತ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರೋಡ್ ಶೋದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿದ್ದರೆ ಅವರು ಮುಂಚಿತವಾಗಿ ಹೋಗಿ ಉಳಿದುಕೊಳ್ಳಲಿ ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಅತ್ಯಂತ ಹೊಣೆಗೇಡಿತನ ಮತ್ತು ದುರಹಂಕಾರದ್ದಾಗಿದೆ. ಬಡ ವಿದ್ಯಾರ್ಥಿಗಳಿಗೆ ಇದು ಆಗುತ್ತಾ?. ವಿದ್ಯಾರ್ಥಿಗಳು ಅನುಭವಿಸಬೇಕಾಗಿರುವ ಕಷ್ಟಗಳನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ರೋಡ್ ಶೋ ರದ್ದು ಮಾಡಬೇಕಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರೋಡ್ ಶೋವನ್ನು ಸಮರ್ಥಿಸುತ್ತಿರುವುದು ಸಚಿವರ ಗುಲಾಮಗಿರಿ ಮನಸ್ಥಿತಿಗೆ ಒಂದು ಉದಾಹರಣೆಯಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ನಾಯಕನಿಗೆ ಸರಿಯಾದ ಸಲಹೆ ಕೊಡುವ ಧೈರ್ಯವಿಲ್ಲ. ಇದರ ಬದಲಾಗಿ ಅವರು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲು ಹೊರಟಿದ್ದಾರೆ. ಇದು ಖಂಡನೀಯ ಅಂತ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ರೋಡ್ ಶೋ ಕಾರಣಕ್ಕೆ ನನ್ನ ಸಂಚಾರಕ್ಕೂ ಪೊಲೀಸರು ನಿರ್ಬಂಧ ಹಾಕಿದ್ದರು. ಮೋದಿ ಅವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ, ಮೋದಿ ಅವರು ಹೋಗುತ್ತಿರುವ ಕಾರಣಕ್ಕೆ ನನಗೆ ಗಂಗಾವತಿ ಹೋಗಲು ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ಹೀಗಾದರೆ, ಸಾಮಾನ್ಯ ಜನರ ಗತಿಯೇನು ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.