ಉಗ್ರರಿಗೆ ತಕ್ಕ ಉತ್ತರ ಕೊಡುವ ಶಕ್ತಿ ಪ್ರಧಾನಿ ಮೋದಿಗಿದೆ: ವಿಜಯೇಂದ್ರ

Synopsis
ಜಮ್ಮು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರಗಾಮಿಗಳ ಗುಂಡಿಗೆ 28ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ದುರ್ಘಟನೆ ಖಂಡನೀಯ, ಉಗ್ರಗಾಮಿಗಳು ಗುಂಡು ಹಾಕುವ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಅಂತ ಹುಡುಕುವ ಕೆಲಸ ಮಾಡಿದ್ದಾರೆ.
ಯಾದಗಿರಿ (ಏ.25): ಜಮ್ಮು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರಗಾಮಿಗಳ ಗುಂಡಿಗೆ 28ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ದುರ್ಘಟನೆ ಖಂಡನೀಯ, ಉಗ್ರಗಾಮಿಗಳು ಗುಂಡು ಹಾಕುವ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಅಂತ ಹುಡುಕುವ ಕೆಲಸ ಮಾಡಿದ್ದಾರೆ. ಹಿಂದೂ ಅಂತ ಗೊತ್ತಾದ ಮೇಲೆ ಗುಂಡು ಹಾರಿಸಿ ಅಮಾಯಕ ಪ್ರವಾಸಿಗರ ಕೊಲೆ ಮಾಡಿರುವುದು ದುರಂತ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಹಿಂದೂಗಳೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ, ಯಾದಗಿರಿ ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾಕಿಸ್ತಾನದಿಂದ ನುಸುಳಿ ಬಂದು ಉಗ್ರಗಾಮಿಗಳು ಪ್ರವಾಸಿಗರ ಮೇಲೆ ಭೀಕರ ಗುಂಡಿನ ದಾಳಿ ನಡೆಸಿದ್ದಾರೆ. 28ಕ್ಕೂ ಹೆಚ್ಚು ಭಾರತೀಯರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ, ಇದಕ್ಕೆಲ್ಲಕ್ಕೂ ತಕ್ಕ ಉತ್ತರ ಕೊಡುವ ಶಕ್ತಿ ನಮ್ಮ ಪ್ರಧಾನಿ ಮೋದಿ ಅವರಿಗಿದೆ ಎಂದು ಉಗ್ರ ಕೃತ್ಯದ ವಿರುದ್ಧ ಕಿಡಿ ಕಾರಿದರು. ಜಮ್ಮು-ಕಾಶ್ಮೀರ ಹಲವು ದಶಕಗಳ ಹಿಂದೆ ಉಗ್ರಗಾಮಿಗಳಿಗೆ ಸ್ವರ್ಗವಾಗಿತ್ತು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂದ ಮೇಲೆ ಉಗ್ರಗಾಮಿಗಳಿಗೆ ಸ್ವರ್ಗವಾಗಿದ್ದ 370 ವಿಧಿಯನ್ನು ಬುಡಸಮೇತ ಕಿತ್ತು ಹಾಕಲಾಗಿದೆ. ಸಾವಿರಾರು ಯೋಧರ ಹತ್ಯೆಗೆ ಕಾರಣಾವಾಗಿದ್ದ 370 ವಿಧಿಯನ್ನು ತೆಗೆದ ಹಾಕಿದ ಮೇಲೆ ನಿಧಾನವಾಗಿ ಅಲ್ಲಿನ ಪರಿಸ್ಥಿತಿ ಸುಧಾರಣೆ ಆಗುತ್ತಿದ್ದಾಗ, ಅಭಿವೃದ್ಧಿ ಕಾಮಗಾರಿಗಳು ಆಗಬಾರದು, ಪ್ರವಾಸಿಗಳು ಬರಬಾರದು ಅಂತ ಗುಂಡಿನ ಸುರಿಮಳೆ ಆಗಿದೆ. ಇಂತಹ ಕೃತ್ಯಗಳು ಉಗ್ರರ ಅಸಹನೆಗೆ ಸಾಕ್ಷಿಯಂತಾಗಿದೆ ಎಂದರು.
ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಕ್ತದೋಕುಳಿ ಆಡಿದ ಉಗ್ರಗಾಮಿಗಳು ಎಲ್ಲೇ ಇದ್ದರೂ ಹುಡುಕಿ ಬುಡಸಮೇತ ಕಿತ್ತು ಹಾಕುತ್ತಾರೆ. ಅಂತಹ ಸಂಘಟನೆಗಳನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸ ನಮ್ಮ ನಾಯಕರು ಮಾಡುತ್ತಾರೆ ಎಂದರು. ಶಿವಮೊಗ್ಗ ಜಿಲ್ಲೆಯಿಂದ ಮಂಜುನಾಥ ದಂಪತಿ ಹಾಗೂ ಬೆಂಗಳೂರಿನಿಂದ ಭರತ್ ಭೂಷಣ್ ದಂಪತಿ ಅಲ್ಲಿನ ಪಹಲ್ಗಾಮ್ ಕಣಿವೆಗೆ ಹೋಗಿದ್ದರು. ಅಲ್ಲಿ ಅವರ ಪ್ರಾಣತ್ಯಾಗ ಆಗಿದೆ ಎಂದು ಸಂತಾಪ ವ್ಯಕ್ತಪಡಿಸಿದ ಅವರು, ಇವತ್ತು ಜನಾಕ್ರೋಶ ಯಾತ್ರೆಯಲ್ಲಿ ಮೆರವಣಿಗೆ, ಪಟಾಕಿ ಸಿಡಿಸದಂತೆ ಕಾರ್ಯಕರ್ತರು ಮುಖಂಡರಿಗೆ ಸೂಚಿಸಿದ್ದೆ ಎಂದ ವಿಜಯೇಂದ್ರ ತಿಳಿಸಿದರು.
ಬೆಲೆಯೇರಿಕೆಯೇ ಸಿದ್ದರಾಮಯ್ಯ ಸರ್ಕಾರದ 6ನೇ ಗ್ಯಾರಂಟಿ: ವಿಜಯೇಂದ್ರ
ಕಾಶ್ಮೀರದಲ್ಲಿ ಹಿಂದೂ ಪಂಡಿತರಿಗೆ ಅವಮಾನ ಮಾಡಿದ, ಸೈನಿಕರ ಸಾವಿಗೆ ಕಾರಣವಾದ 370ನೇ ವಿಧಿಯನ್ನು ಬಿಜೆಪಿ ಸರಕಾರ ರದ್ದು ಮಾಡಿದೆ. ಭಯೋತ್ಪಾದಕರ ದಾಳಿ ಘಟನೆಯ ಮಾಹಿತಿ ತಿಳಿದ ಪ್ರಧಾನಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾದಿಂದ ಧಾವಿಸಿ ಬಂದಿದ್ದಾರೆ. ಹಿಂದೂಗಳ ಮಾರಣಹೋಮದ ವಿಚಾರ ತಿಳಿದಾಕ್ಷಣ ಅಮಿತ್ ಶಾ, ಅಧಿಕಾರಿಗಳನ್ನು ಕಳುಹಿಸಿದ್ದಾರೆ. ನಾವೆಲ್ಲರೂ ಹಿಂದೂಗಳು ಮೊದಲು, ಆ ಜಾತಿ- ಈ ಜಾತಿ ಅಲ್ಲ. 28 ಜನರ ಹತ್ಯೆಗೆ ಪಾಕಿಸ್ತಾನ ಬೆಲೆ ತೆರಲೇಬೇಕು. ಉಗ್ರರ ವಿರುದ್ಧ ಪ್ರಧಾನಿಯವರು ದಿಟ್ಟ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.