ರಾಹುಲ್ ಗಾಂಧಿ ತೀರ್ಪು ಗದ್ದಲ, ಅಧಿವೇಶನ ಮುಂದೂಡಿದ ಬಳಿಕ ಸ್ಪೀಕರ್ ಭೇಟಿಯಾದ ಪ್ರಧಾನಿ ಮೋದಿ!
ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸಂಸತ್ ಅಧಿವೇಶನದಲ್ಲಿ ಗದ್ದಲದಲ್ಲಿ ಮುಳುಗಿತ್ತು. ಹೀಗಾಗಿ ಅಧಿವೇಶನ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಹಾಗೂ ಹಿರಿಯ ಸಚಿವರು ಸ್ಪೀಕರ್ ಭೇಟಿಯಾಗಿದ್ದಾರೆ.
ನವದೆಹಲಿ(ಮಾ.23): ಕೋಲಾರದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ಕಾಂಗ್ರೆಸ್ಗೆ ತಲೆನೋವಾಗಿದೆ. ಮೋದಿ ಸರ್ನೇಮ್ ಇರುವ ಎಲ್ಲರು ಕಳ್ಳರು ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಧೋಷಿ ಎಂದು ಸೂರತ್ ಕೋರ್ಟ್ ತೀರ್ಪ ನೀಡಿದೆ. ಇಷ್ಟೇ ಅಲ್ಲ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜಾಮೀನಿನ ಮೇಲೆ ಹೊರಬಂದಿರುವ ರಾಹುಲ್ ಗಾಂಧಿ ವಿಚಾರ ಸಂಸತ್ತಿನಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಹೀಗಾಗಿ ಅಧಿವೇಶನ ಮುಂದೂಡಲಾಗಿದೆ. ಇದರ ಬೆನ್ನಲ್ಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಸಚಿವರು ಸ್ಪೀಕರ್ ಓಂ ಬಿರ್ಲಾ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೋದಿ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ, ಕಿರಿಣ್ ರಿಜಿಜು ಸೇರಿದಂತೆ ಹಲವು ನಾಯಕರು ಓಂ ಬಿರ್ಲಾ ಭೇಟಿಯಾಗಿದ್ದಾರೆ.
ರಾಹುಲ್ ಗಾಂಧಿ ಸಂಸದ ಸ್ಥಾನ ಅರ್ಹತೆ ಕುರಿತು ತೀವ್ರ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಸ್ಪೀಕರ್ ಭೇಟಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣಾಗಿದೆ. ಹಲವು ಬಿಜೆಪಿ ನಾಯಕರು ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ಬಿಜೆಪಿ ಸತ್ಯ ಹೇಳುವ ನಾಯಕರನ್ನು ಜೈಲಿಗಟ್ಟುವ ಮೂಲಕ ದೇಶದಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹರಣ ಮಾಡಿದೆ ಎಂದು ಸಂಸತ್ತಿನಲ್ಲಿ ಕಾಂಗ್ರೆಸ್ ಭಾರಿ ಗದ್ದಲ ಎಬ್ಬಿಸಿದೆ.
ರಾಗಾಗೆ ಶಿಕ್ಷೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ತಳಮಳ, ಸಂಸದ ಸ್ಥಾನ ಕಳೆದುಕೊಳ್ತಾರಾ ರಾಹುಲ್ ಗಾಂಧಿ?
ಕಳೆದ ವಾರ ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಗದ್ದಲದಿಂದ ಅಧಿವೇಶನ ಮುಂದೂಡಲಾಗಿಲ್ಲ. ಈ ವಾರ ರಾಹುಲ್ ಗಾಂಧಿ ವಿಚಾರದಲ್ಲಿ ಅಧಿವೇಶನ ಮುಂದೂಡಲಾಗಿದೆ. ಕಾಂಗ್ರೆಸ್ ಈ ಪ್ರಕರಣವನ್ನು ಮೋದಿ ಹಾಗೂ ಬಿಜೆಪಿ ಎಂದು ಬಿಂಬಿಸಿದರೆ, ಬಿಜೆಪಿ ಈ ಪ್ರಕರಣ ರಾಜಕೀಯವಲ್ಲ, ಕೋರ್ಟ್ ನೀಡಿದ ತೀರ್ಪು ಎಂದಿದೆ.
ರಾಹುಲ್ ಗಾಂಧಿ ಮೋದಿ ಸಮುದಾಯವನ್ನು ನಿಂದಿಸಿದ್ದಾರೆ. ಮೋದಿ ಸಮುದಾಯದವರೆಲ್ಲರು ಕಳ್ಳರು ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಕೋರ್ಟ್ ಹೇಳಿದೆ. ಜಾಮೀನು ಮಂಜೂರು ಮಾಡಿರುವ ಕೋರ್ಟ್ 30 ದಿನಗಳ ಕಾಲವಕಾಶ ನೀಡಿದೆ. ಇದೀಗ ರಾಹುಲ್ ಗಾಂಧಿ ಕಾನೂನಾತ್ಮಕ ದಾರಿಯಲ್ಲಿ ಮುನ್ನಡೆಯಲು ಸಾಧ್ಯವಿದೆ. ಆದರೆ ರಾಹುಲ್ ಗಾಂಧಿ ಆಡಿರುವ ಮಾತು ಸಮುದಾಯಕ್ಕೆ ನೋವಾಗಿದೆ ಅನ್ನೋದು ಸತ್ಯ. ಹೀಗಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಗೆ ಈ ಪ್ರಕರಣ ತೀವ್ರ ಹಿನ್ನಡೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ.