‘ರಾಜ್ಯದಲ್ಲಿ ಮುಖ್ಯಮಂತ್ರಿಗಳ ಕಚೇರಿ ಮಾತ್ರವೇ ಅಲ್ಲ, ಎಲ್ಲಾ ಸರ್ಕಾರಿ ಸಂಸ್ಥೆಗಳೂ ದುರ್ಬಳಕೆಯಾಗುತ್ತಿವೆ. ಜಾರಿ ನಿರ್ದೇಶನಾಲಯ (ಇ.ಡಿ.)ವು ಬಿಜೆಪಿಯ ಚುನಾವಣಾ ಘಟಕ ಎಂಬಂತಾಗಿದೆ. ಕಾಂಗ್ರೆಸ್‌ನ ನಮ್ಮೆಲ್ಲರ ದೂರವಾಣಿಯೂ ಕದ್ದಾಲಿಕೆ ಆಗುತ್ತಿದೆ’ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಏ.23): ‘ರಾಜ್ಯದಲ್ಲಿ ಮುಖ್ಯಮಂತ್ರಿಗಳ ಕಚೇರಿ ಮಾತ್ರವೇ ಅಲ್ಲ, ಎಲ್ಲಾ ಸರ್ಕಾರಿ ಸಂಸ್ಥೆಗಳೂ ದುರ್ಬಳಕೆಯಾಗುತ್ತಿವೆ. ಜಾರಿ ನಿರ್ದೇಶನಾಲಯ (ಇ.ಡಿ.)ವು ಬಿಜೆಪಿಯ ಚುನಾವಣಾ ಘಟಕ ಎಂಬಂತಾಗಿದೆ. ಕಾಂಗ್ರೆಸ್‌ನ ನಮ್ಮೆಲ್ಲರ ದೂರವಾಣಿಯೂ ಕದ್ದಾಲಿಕೆ ಆಗುತ್ತಿದೆ’ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಗಂಭೀರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಚಿವ ಆನಂದ್‌ ಸಿಂಗ್‌ ಸಹೋದರಿ ರಾಣಿ ಸಂಯುಕ್ತಾ ಅವರ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ಮಾಡಲು ಮುಖ್ಯಮಂತ್ರಿಗಳ ಕಚೇರಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಲಾಗಿತ್ತು ಎಂಬ ವಿಚಾರವಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಜಗದೀಶ್‌ ಶೆಟ್ಟರ್‌ ಮಾತ್ರವಲ್ಲ ನಮ್ಮೆಲ್ಲರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆ ಗೆಲ್ಲಲು ಎಲ್ಲಾ ಅಸಾಂವಿಧಾನಿಕ ಪ್ರಯತ್ನಗಳನ್ನೂ ಮಾಡುತ್ತಿವೆ. ಮುಖ್ಯಮಂತ್ರಿಗಳ ಕಚೇರಿ ಮಾತ್ರವಲ್ಲ ಎಲ್ಲಾ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಿವೆ. ಐ.ಟಿ., ಇ.ಡಿ.ಯನ್ನೂ ಬಳಸಿಕೊಳ್ಳುತ್ತಿವೆ. ಇ.ಡಿ. ಒಂದು ರೀತಿ ಬಿಜೆಪಿಯ ಚುನಾವಣಾ ಘಟಕ ಎಂಬಂತಾಗಿದೆ. 

ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಪಡೆದಿಲ್ಲ: ಡಿ.ಕೆ.ಶಿವಕುಮಾರ್‌

ಒಟ್ಟಾರೆ ತಮ್ಮ ಭ್ರಷ್ಟಾಚಾರ ಮುಂದುವರೆಸಲು ಏನಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂಬ ಯತ್ನದಲ್ಲಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಜಗದೀಶ್‌ ಶೆಟ್ಟರ್‌ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವಂತೆ ಬಿಜೆಪಿ ನಾಯಕರು ಹಾಕಿರುವ ಸವಾಲು ಕುರಿತು ಪ್ರತಿಕ್ರಿಯಿಸಿ, ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಅವರ ಪಕ್ಷದ ಹಿರಿಯ ನಾಯಕ ಯತ್ನಾಳ್‌ ಅವರು ಹೇಳಿದ ಪ್ರಕಾರ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರು. ಕೊಡಬೇಕು. ಈ ಮೊತ್ತವನ್ನು ಬಿಜೆಪಿಯಲ್ಲಿ ಯಾರು ನೀಡಲಿದ್ದಾರೆ ಎಂದು ಬಿಜೆಪಿ ಹೇಳಬೇಕು. 

ಅಮಿತ್‌ ಶಾ ಜತೆ ಚುನಾವಣೆ ತಂತ್ರ ಚರ್ಚೆ: ಬಿ.ಎಸ್‌.ಯಡಿಯೂರಪ್ಪ

ಮಂತ್ರಿಯಾಗಲು 100 ಕೋಟಿ ರು. ನೀಡಬೇಕು ಎಂದು ಹೇಳಿರುವುದರಿಂದ ಯಾವ 34 ಮಂದಿ 100 ಕೋಟಿ ರು. ಕೊಟ್ಟು ಮಂತ್ರಿಯಾಗಲಿದ್ದಾರೆ ಎಂಬುದನ್ನು ಈಗಲೇ ಬಹಿರಂಗಪಡಿಸಲಿ. ನಮ್ಮಲ್ಲಿ ಗೆದ್ದ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಹೈಮಾಂಡ್‌ ತೀರ್ಮಾನಿಸಲಿದೆ’ ಎಂದು ಸ್ಪಷ್ಟಪಡಿಸಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.