Asianet Suvarna News Asianet Suvarna News

ಬಾಗಲಕೋಟೆ ಲೋಕಸಭಾ ಟಿಕೆಟ್‌ ಫೈಟ್‌: ಬಿಜೆಪಿಯಿಂದ ಗದ್ದಿಗೌಡರೇ ಈಗಲೂ ಫೇವರಿಟ್..!

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಈ ಬಾರಿಯೂ ಟಿಕೆಟ್‌ ಆಕಾಂಕ್ಷಿ. ಬಹಿರಂಗವಾಗಿಯೇ ಅವರು ತಮ್ಮ ಆಕಾಂಕ್ಷೆಯನ್ನು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಮಹಿಳಾ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಮಾಜಿ ಸಚಿವ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಕುಮಾರ ಮಲಘಾಣ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ.

PC Gaddigoudar is Still Favorite from BJP at Bagalkot in Lok Sabha Elections 2024 grg
Author
First Published Jan 11, 2024, 7:36 AM IST

ಈಶ್ವರ ಶೆಟ್ಟರ್

ಬಾಗಲಕೋಟೆ(ಜ.11):  ಮುಂಬರುವ ಲೋಕಸಭಾ ಚುನಾವಣೆಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವವರ ಪಟ್ಟಿ ಈಗಿನಿಂದಲೇ ದೊಡ್ಡದಾಗುತ್ತಿದೆ. ಒಂದು ಕಾಲದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರ, ಕಾಂಗ್ರೆಸ್‌ ನ ಭದ್ರಕೋಟೆಯಾಗಿತ್ತು. ಆದರೆ, 2004ರ ನಂತರದ ನಾಲ್ಕೂ ಚುನಾವಣೆಗಳಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸುತ್ತಲೇ ಬಂದಿದೆ.

ಕಾಂಗ್ರೆಸ್‌ ನಲ್ಲಿ ಸ್ಪರ್ಧೆಗೆ ಹಲವಾರು ಆಕಾಂಕ್ಷಿಗಳು:

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಈ ಬಾರಿಯೂ ಟಿಕೆಟ್‌ ಆಕಾಂಕ್ಷಿ. ಬಹಿರಂಗವಾಗಿಯೇ ಅವರು ತಮ್ಮ ಆಕಾಂಕ್ಷೆಯನ್ನು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಮಹಿಳಾ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಮಾಜಿ ಸಚಿವ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಕುಮಾರ ಮಲಘಾಣ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ.

ಮಂಡ್ಯ ಲೋಕಸಭಾ ಕಣದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ! ಜೆಡಿಎಸ್ ಸಜ್ಜು, ಸುಮಲತಾ ನಡೆ ಏನು?

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಪಕ್ಷದ ಶಾಸಕರೇ ಇದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂಬ ಭಾವನೆ ಕಾಣುತ್ತಿದೆ. ಹೀಗಾಗಿ, ಈ ಬಾರಿ ಗೆಲುವು ಸುಲಭ ಎನ್ನುವ ಭಾವನೆ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳಲ್ಲಿದೆ.

ಮತ್ತೊಮ್ಮೆ ಗದ್ದಿಗೌಡರಗೆ ಅವಕಾಶ?:

2004ರಿಂದ ಸತತ ನಾಲ್ಕು ಬಾರಿ ಬಿಜೆಪಿಯಿಂದ ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ, ಪ್ರಸ್ತುತ ಸಂಸದರಾಗಿರುವ ಪಿ.ಸಿ.ಗದ್ದಿಗೌಡರ ಅವರಿಗೆ ಮತ್ತೊಮ್ಮೆ ಪಕ್ಷ ಅವಕಾಶ ನೀಡಲಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ರಾಜ್ಯ ಹಾಗೂ ಕೇಂದ್ರದ ನಾಯಕರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಗದ್ದಿಗೌಡರಿಗೆ ಜಿಲ್ಲೆಯಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ, ಮಾಜಿ ಸಚಿವ ಮುರಗೇಶ ನಿರಾಣಿಯವರ ಹೆಸರು ಕೇಳಿ ಬರುತ್ತಿದೆಯಾದರೂ, ಸ್ವತಃ ಅವರೇ ಸ್ಪರ್ಧೆ ಕುರಿತ ವದಂತಿಯನ್ನು ಅಲ್ಲಗಳೆದಿದ್ದಾರೆ.

ಈ ಮಧ್ಯೆ, ಬಿಜೆಪಿಯ ವಿವಿಧ ಪ್ರಕೋಷ್ಠಗಳಲ್ಲಿ ಕಾರ್ಯ ನಿರ್ವಹಿಸಿರುವ ಚಿತ್ರದುರ್ಗ ಮೂಲದ ನಿವೃತ್ತ ಐಎಎಸ್ ಅಧಿಕಾರಿ ಪ್ರಕಾಶ ಪರಪ್ಪ ಅವರು, ಕಳೆದ ನಾಲ್ಕಾರು ತಿಂಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಲೋಕಸಭಾ ಆಕಾಂಕ್ಷಿಯಾಗಿ ಗ್ರಾಮಮಟ್ಟದಲ್ಲಿ ಸಂಚರಿಸುತ್ತಿದ್ದಾರೆ.

ಪ್ರಲ್ಹಾದ್‌ ಜೋಶಿಗೆ ಸರಿಸಾಟಿ ‘ಕೈ’ ಅಭ್ಯರ್ಥಿ ಯಾರು?: ಲಾಡ್‌, ಶೆಟ್ಟರ್‌ ಹೆಸರು ಮುಂಚೂಣಿಗೆ

ಜಾತಿ ಕೂಡ ಗಣನೆಗೆ:

ಟಿಕೆಟ್‌ ಹಂಚಿಕೆ ವೇಳೆ ಈ ಕ್ಷೇತ್ರದಲ್ಲಿ ಜಾತಿ ಕೂಡ ಮುಖ್ಯವಾಗುತ್ತಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ವೀಣಾ ಕಾಶಪ್ಪನವರ, ಪ್ರಕಾಶ ತಪಶೆಟ್ಟಿ ಅವರು ಪ್ರಬಲ ಲಿಂಗಾಯತ ಸಮುದಾಯದವರ ಜೊತೆಗೆ ಜಿಲ್ಲೆಯಲ್ಲಿ ಒಂದಲ್ಲ ಒಂದು ಜವಾಬ್ದಾರಿಯನ್ನು ಹೊಂದಿ ಜಿಲ್ಲೆಯ ಜನತೆಗೆ ಪರಿಚಿತರಾದವರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ರಕ್ಷಿತಾ ಈಟಿ ಅವರು ಹಾಲುಮತ ಸಮಾಜಕ್ಕೆ ಸೇರಿದವರಾಗಿದ್ದು, ಕೊರೋನಾ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ನೆರವನ್ನು ನೀಡಿ ಗುರುತಿಸಿಕೊಂಡವರು.

ಮಾಜಿ ಸಚಿವ ಅಜಯಕುಮಾರ ಸರನಾಯಕ, ಕುಮಾರ ಮಲಘಾಣ ಅವರು ರೆಡ್ಡಿ ಸಮುದಾಯಕ್ಕೆ ಸೇರಿದ್ದು, ಆ ಸಮುದಾಯ ಸಹ ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದೆ. ಇನ್ನು, ಬಿಜೆಪಿಯ ಪಿ.ಸಿ.ಗದ್ದಿಗೌಡರ, ಲಿಂಗಾಯತ ಒಳಪಂಗಡದ ಗಾಣಿಗ ಸಮುದಾಯದವರಾಗಿದ್ದು, ಜಿಲ್ಲೆಯ ಎಲ್ಲಾ ವರ್ಗದವರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿ, ಪ್ರಬಲ ಜಾತಿಗಳ ಅಭ್ಯರ್ಥಿಗಳ ನಡುವೆಯೇ ಲೋಕಸಭಾ ಚುನಾವಣಾ ಕಣ ರಂಗೇರುವ ಸಾಧ್ಯತೆ ಹೆಚ್ಚಿದೆ.

Follow Us:
Download App:
  • android
  • ios