ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25 ಸ್ಥಾನ ಹಾಗೂ ದೇಶದಲ್ಲಿ ೩೫೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಸುಭದ್ರ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

ಬ್ಯಾಡಗಿ (ಡಿ.30): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25 ಸ್ಥಾನ ಹಾಗೂ ದೇಶದಲ್ಲಿ ೩೫೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಸುಭದ್ರ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ತಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೪ರ ಚುನಾವಣೆಯಲ್ಲಿ ಮೋದಿ ಆಟ ನಡೆಯಲ್ಲ ಎನ್ನುತ್ತಿರುವವರಿಗೆ ಭಾರಿ ಆಘಾತ ಕಾದಿದೆ. ೨೦೨೯ರ ಹೊತ್ತಿಗೆ ಮೋದಿ ಆಡಳಿತದಲ್ಲಿ ದೇಶ ಜಗತ್ತಿನ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು. ಬಿಜೆಪಿ ಶಾಸಕ ಬಸವನಗೌಡ ಯತ್ನಾಳ ಬಿಜೆಪಿ ನಾಯಕರ ವಿರುದ್ಧವೇ ವಾಗ್ದಾಳಿ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.

Add Asianetnews Kannada as a Preferred SourcegooglePreferred

ನಮ್ಮ ಪಕ್ಷದಲ್ಲಿ ಏನೇ ಸಮಸ್ಯೆ ಇದ್ದರೂ ಅದು ನಮ್ಮ ಸಮಸ್ಯೆ, ಕುಟುಂಬದ ಸಮಸ್ಯೆಯನ್ನು ಕೇಂದ್ರದಲ್ಲಿನ ರಾಷ್ಟ್ರೀಯ ಹಿರಿಯ ನಾಯಕರು ಪರಿಹರಿಸುತ್ತಾರೆ ಎಂದರು. ಒಳ ಜಗಳ, ಮುನಿಸು, ಸೇರಿದಂತೆ ಹಲವು ಸಮಸ್ಯೆಗಳನ್ನು ಕಾಂಗ್ರೆಸ್ ಎದುರಿಸುತ್ತಿದೆ. ಇಂತಹ ಪಕ್ಷಕ್ಕೆ ನಮ್ಮ ಬಿಜೆಪಿ ನಾಯಕರು ಯಾರೂ ಹೋಗಲ್ಲ ಎನ್ನುವುದು ನನ್ನ ಭಾವನೆ. ಒಂದು ವೇಳೆ ಹೋದಲ್ಲಿ ಅವರಂಥ ಮೂರ್ಖರು ಮತ್ಯಾರೂ ಇಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಜೋಶಿ ಕಾರಣ ಎಂಬ ಬಿ.ಕೆ. ಹರಿಪ್ರಸಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ ಅವರಿಗೆ ನಾನು ಇಷ್ಟೇ ಹೇಳೋದು, ನೀವು ನನ್ನ ಎಷ್ಟೇ ಬಯ್ದರೂ ಮಂತ್ರಿ ಸ್ಥಾನ ಸಿಗಲ್ಲ, ಒಂದು ವೇಳೆ ಸಿಗುತ್ತೆ ಅನ್ನೋದಾದರೆ ಬಯ್ಯಲಿ, ನನ್ನದೇನೂ ಅಭ್ಯಂತರವಿಲ್ಲ ಎಂದರು.

1.6 ಲಕ್ಷ ಮನೆ ನಿರ್ಮಾಣಕ್ಕೆ ಮಾರ್ಚ್‌ ಗಡುವು: ಸಿಎಂ ಸಿದ್ದರಾಮಯ್ಯ ಸೂಚನೆ

ಸೋಲಿನ ಹತಾಶೆಯಿಂದ ಕೈಯಿಂದ ಅಧಿವೇಶನಕ್ಕೆ ಅಡ್ಡಿ: ಐದು ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್‌ ತಲೆ ಕೆಟ್ಟವರ ರೀತಿಯಲ್ಲಿ ವರ್ತಿಸುತ್ತಿದೆ. ಅದಕ್ಕಾಗಿ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್‌ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಲಿನ ಹತಾಶೆಯಿಂದ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದೆ. ಜನ ಇದನ್ನು ಗಮನಿಸುತ್ತಿದ್ದಾರೆ. ಪಾರ್ಲಿಮೆಂಟ್‌ ಘಟನೆ ನೆಪ ಮಾಡಿ ಅಧಿವೇಶನ ನಡೆಸಲು ಬಿಡಲ್ಲ ಎಂಬ ಮಾನಸಿಕತೆಗೆ ಬಂದಿದೆ. ಸೋಲಿನ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದಾರೆ ಎಂದರು.

ಅಮಾನತು ಮಾಡಿ ಬಿಲ್‌ ಪಾಸ್‌ ಮಾಡಿದ್ದಾರೆ ಎಂದು ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹಿಂದೆ ಕೂಡ ಕೆಲವು ಘಟನೆಗಳು ನಡೆದಿವೆ. ಪಾಸ್‌ ಪಡೆದುಕೊಂಡು ವೆಫನ್ಸ್‌ ತೆಗೆದುಕೊಂಡು ಬಂದ ಉದಾಹರಣೆ ಇದೆ. ಯಾವ ಕ್ರಮ ಕೈಗೊಳ್ಳಬೇಕೋ ಎನ್ನುವುದು ಸ್ಪೀಕರ್‌ಗೆ ಬಿಟ್ಟಿದ್ದು. ಹಿಂದೆ ಲೋಕಸಭೆಯಲ್ಲಿ ಡ್ರ್ಯಾಗರ್‌ ತಂದಿದ್ದರು ಎಂದರು. ಪಾರ್ಲಿಮೆಂಟ್‌ನಲ್ಲಿ ಘಟನೆ ನಡೆದ ದಿನವೂ ಚರ್ಚೆಯಲ್ಲಿ ಭಾಗಿಯಾಗಿದ್ದರು. ಅದಾದ ಮೇಲೆ ಎಲ್ಲಿಂದಲೋ ಸೂಚನೆ ಬರುತ್ತದೆ. ಸೂಚನೆ ಬಂದ ಮೇಲೆ ಡಿಸ್ಟರ್ಬ್‌ ಮಾಡುತ್ತಾರೆ. ಕಾಂಗ್ರೆಸ್‌ ಎಂದರೆ ಕನಫ್ಯೂಶನ್‌ ಪಾರ್ಟಿ. 

ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ, ವಸೂಲಾತಿ ಮುಂದೂಡಿ: ಶಾಸಕ ಜಿ.ಟಿ.ದೇವೇಗೌಡ ಒತ್ತಾಯ

ಕಾಂಗ್ರೆಸ್‌ನವರು ಸದನಕ್ಕೆ ಭಿತ್ತಿಪತ್ರ ತಂದಿದ್ದರು. ಯಾಕೆ ಅಂತ ಕೇಳಿದರೆ ನಮಗೂ ಸಸ್ಪೆಂಡ್‌ ಮಾಡಬೇಕು ಎಂದು ಹೇಳಿದರು. ಆಗ 13 ಜನರನ್ನು ಅಮಾನತು ಮಾಡಲಾಯಿತು. ಆನಂತರ ಮತ್ತೆ ಕೆಲವರು ನಮ್ಮನ್ನು ಸಸ್ಪೆಂಡ್‌ ಮಾಡಿ ಅಂತ ಹೇಳಿದರು. ಹೀಗೆ ವಿನಾಕಾರಣ ಅಧಿವೇಶನಕ್ಕೆ ಡಿಸ್ಟರ್ಬ್‌ ಮಾಡಿದರು. ಪ್ರತಿಭಟನೆ ನಡೆಸಿದರು. ಈಗ ಸುಮ್ಮನೆ ನಮ್ಮನ್ನು ಹೊರಗಿಟ್ಟು ಬಿಲ್‌ ಪಾಸ್‌ ಮಾಡಿದರು ಎಂದು ಹೇಳುತ್ತಿದ್ದಾರೆ. ಹಳೆಯ ಬಿಲ್‌ಗಳ ಕುರಿತು ನಿಮಗೆ ಮಾತನಾಡುವುದಕ್ಕೆ ಧೈರ್ಯವಿಲ್ಲ. ಚರ್ಚೆಯಲ್ಲಿ ಭಾಗವಹಿಸಲು ನೈತಿಕತೆ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.