- ರಮ್ಯಾಗೆ ಗಮನ ತನ್ನತ್ತ ಸೆಳೆಯುವ ಸಮಸ್ಯೆ: ನಳಪಾಡ್‌- ಬೇಲ್‌ ಮೇಲಿರುವಾತ ನನ್ನ ನೈತಿಕತೆ ಪ್ರಶ್ನಿಸ್ತಾನೆ: ರಮ್ಯಾ-  ಟ್ವೀಟರ್‌ನಲ್ಲಿ ಇಬ್ಬರ ಜಟಾಪಟಿ

ಬೆಂಗಳೂರು(ಮೇ.13):ರಮ್ಯಾ ಅವರಿಗೆ ‘ಅಟೆನ್ಷನ್‌ ಸೀಕಿಂಗ್‌ ಪ್ರಾಬ್ಲಂ’ (ಗಮನ ತಮ್ಮತ್ತ ಸೆಳೆಯುವ ಸಮಸ್ಯೆ) ಇದೆ ಎಂದಿರುವ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮ್ಮದ್‌ ನಲಪಾಡ್‌ ವಿರುದ್ಧ ಮಾಜಿ ಸಂಸದೆ ರಮ್ಯಾ ತೀವ್ರ ವಾಗ್ದಾಳಿ ನಡೆಸಿದ್ದು, ನಲಪಾಡ್‌ ಈ ಹಿಂದೆ ನಡೆಸಿದ್ದ ಅಪಘಾತ ಹಾಗೂ ಫರ್ಜಿ ಕೆಫೆ ಹಲ್ಲೆ ಘಟನೆಯನ್ನು ಪ್ರಸ್ತಾಪಿಸಿ ಕಿಡಿಕಾರಿದ್ದಾರೆ.

ಮೊಹಮ್ಮದ್‌ ನಲಪಾಡ್‌ ಫರ್ಜಿ ಕೆಫೆಯಲ್ಲಿ ವಿದ್ವತ್‌ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಸುದ್ದಿ ಹಾಗೂ ಕಾರು ಅಪಘಾತ ಮಾಡಿ ನಾಲ್ಕು ಮಂದಿಗೆ ಗಂಭೀರ ಗಾಯಗಳನ್ನು ಮಾಡಿದ್ದ ಸುದ್ದಿಯ ಪತ್ರಿಕಾ ತುಣಕುಗಳನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ರಮ್ಯಾ ಅವರು ‘ಯುವ ಕಾಂಗ್ರೆಸ್‌ ಗೌರವ ರಾಜ್ಯಾಧ್ಯಕ್ಷ, ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರನಾದ ಈ ಹುಡುಗ ನಲಪಾಡ್‌ (ಜಾಮೀನಿನ ಮೇಲಿರುವ) ನನ್ನ ನೈತಿಕತೆ ಪ್ರಶ್ನೆ ಮಾಡಿದ್ದಾರೆ. ವಾವ್‌್ವ’ ಎಂದು ವ್ಯಂಗ್ಯ ಮಾಡಿದ್ದಾರೆ.

ರಮ್ಯಾ ಏನ್ ಟ್ವೀಟ್ ಮಾಡಿದ್ದಾರೋ, ಏನ್ ಮಿಸ್ ಫೈಯರ್ ಆಗಿದ್ಯೋ ಗೊತ್ತಿಲ್ಲ: ಡಿಕೆಶಿ

ಇದಕ್ಕೂ ಮೊದಲು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಲಪಾಡ್‌, ರಮ್ಯಾ ಅವರಿಗೆ ಅಟೆನ್ಷನ್‌ ಸೀಕಿಂಗ್‌ ಪ್ಲಾಬ್ಲಮ್‌ ಇದೆ. ಅವರ ಆರೋಗ್ಯ ತಪಾಸಣೆ ಮಾಡಿಸಬೇಕು. ರಮ್ಯಾ ಇಷ್ಟುತಿಂಗಳು ಎಲ್ಲಿದ್ದರು? ಸಿನಿಮಾಗಳ ಬಗ್ಗೆ ಟ್ವೀಟ್‌ ಮಾಡಿಕೊಂಡು ಇದ್ದರು. ಇದೀಗ ಏಕಾಏಕಿ ನಾನೂ ಒಬ್ಬಳು ಇದ್ದೀನಿ ಎಂದು ತೋರಿಸಲು ಅಥವಾ ಯಾವುದಾದರೂ ಒಂದು ಕುರ್ಚಿ ಮೇಲೆ ಟವೆಲ್‌ ಹಾಕಲು ಬಂದಿರಬೇಕು. ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡುವಂತಹ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದು ಹೇಳಿದ್ದರು.

ರಮ್ಯಾ ಪರ ಎಂ.ಬಿ. ಪಾಟೀಲ್‌ ಬ್ಯಾಟಿಂಗ್‌
ಇದೇ ವೇಳೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಅವರು ರಮ್ಯಾ ಪರ ಸರಣಿ ಟ್ವೀಟ್‌ ಮಾಡಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಈ ವಾದ-ವಿವಾದವನ್ನು ಕೊನೆಗೊಳಿಸುವಂತೆ ಮನವಿ ಸಹ ಮಾಡಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಅವರು, ರಮ್ಯಾ ಪಕ್ಷದ ಹಿತಾಸಕ್ತಿಗಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಪಕ್ಷದ ಕೆಲವರು ತಮ್ಮ ಇತಿಗಳನ್ನು ಮೀರಿ ಮಾತನಾಡುವ ಮೂಲಕ ಅವರ ತೇಜೋವಧೆಗೆ ಯತ್ನಿಸಿರುವುದು ತಪ್ಪು ಎಂದು ಖಂಡಿಸಿದ್ದಾರೆ.

Karnataka Politics: ಎಂಬಿಪಾ- ಅಶ್ವತ್ಥ್‌ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಅತೃಪ್ತಿ

ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಚರ್ಚೆಗಳನ್ನು ಕೊನೆಗೊಳಿಸುವಂತೆ ಹೇಳಿದ್ದಾರೆ. ಹೀಗಿದ್ದರೂ ಅನಗತ್ಯವಾಗಿ ಮಾತನಾಡುವುದು 2023ರ ಚುನಾವಣೆ ಮೇಲೆ ಕೆಟ್ಟಪರಿಣಾಮ ಬೀರಲಿದೆ. ಪಕ್ಷದ ಎಲ್ಲರಿಗೂ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸಲು ಮನವಿ ಮಾಡುತ್ತೇನೆ. ದೊಡ್ಡ ಗುರಿಯೊಂದಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.

ರಮ್ಯಾಗೆ ಆರೋಗ್ಯ ತಪಾಸಣೆ ಮಾಡಿಸಬೇಕು: ನಲಪಾಡ್‌
ರಮ್ಯಾ ಅವರಿಗೆ ಅಟೆನ್ಶನ್‌ ಸೀಕಿಂಗ್‌ ಪ್ಲಾಬ್ಲೆಮ್‌ ಇದೆ, ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌ ಹ್ಯಾರಿಸ್‌ ವ್ಯಂಗ್ಯವಾಡಿದ್ದಾರೆ.

ರಮ್ಯಾ ಮತ್ತು ಡಿಕೆಶಿ ನಡುವಿನ ಟ್ವೀಟ್‌ ವಾರ್‌ ಬಗ್ಗೆ ಗುರುವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ನಲಪಾಡ್‌, ರಮ್ಯಾ ಇಷ್ಟುತಿಂಗಳು ಎಲ್ಲಿದ್ದರು, ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಈಗ ಯಾಕೆ ಬಂದರು, ನಾನೂ ಒಬ್ಬಳು ಇದ್ದೀನಿ ಅಂತ ತೋರಿಸಿಕೊಳ್ಳಲಿಕ್ಕೆ ಅಥವಾ ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್‌ ಹಾಕಲಿಕ್ಕೆ ಬಂದಿರಬೇಕು ಎಂದರು.

ಕಾಂಗ್ರೆಸ್‌ನ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ್‌, ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ, ಆದರೂ ರಮ್ಯಾ ಟ್ವೀಟ್‌ ಮಾಡಿ ಸುಮ್ಮನೆ ಡಿಸ್ಟರ್ಬೆನ್ಸ್‌ ಕ್ರಿಯೇಟ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ ನಲಪಾಡ್‌ ಆರೋಪಿಸಿದರು.