ಕಾಂಗ್ರೆಸ್‌ ಪಕ್ಷ ವಿವಿಧ ಚುನಾವಣೆಯಲ್ಲಿ ಸಾಲು ಸಾಲು ಸೋಲು ಅನುಭವಿಸುತ್ತಿರುವ ಕಾರಣ ರಾಷ್ಟ್ರೀಯ ನಾಯಕತ್ವದಲ್ಲೇ ಬದಲಾವಣೆ ಆಗಬೇಕು ಎಂಬ ಕೂಗು ಎದ್ದಿದೆ. ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್‌ರಂಥ ನಾಯಕರಿಗೆ ಸ್ಥಾನಮಾನ ವಹಿಸಿ ನಾಯಕತ್ವ ನೀಡಬೇಕು ಎಂದು

ನವದೆಹಲಿ: ಕಾಂಗ್ರೆಸ್‌ ಪಕ್ಷ ವಿವಿಧ ಚುನಾವಣೆಯಲ್ಲಿ ಸಾಲು ಸಾಲು ಸೋಲು ಅನುಭವಿಸುತ್ತಿರುವ ಕಾರಣ ರಾಷ್ಟ್ರೀಯ ನಾಯಕತ್ವದಲ್ಲೇ ಬದಲಾವಣೆ ಆಗಬೇಕು ಎಂಬ ಕೂಗು ಎದ್ದಿದೆ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರಂಥ ನಾಯಕರಿಗೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ವಹಿಸಿ ನಾಯಕತ್ವ ನೀಡಬೇಕು ಎಂದು ಒಡಿಶಾದ ಮಾಜಿ ಕಾಂಗ್ರೆಸ್‌ ಶಾಸಕ ಮೊಹಮ್ಮದ್ ಮೊಕಿಮ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಪತ್ರ ಮುಖೇನ ಮನವಿ ಮಾಡಿರುವ ಅವರು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವಕ್ಕೆ ಆಕ್ಷೇಪಿಸಿದ್ದಾರೆ.

ಕರ್ನಾಟಕದಲ್ಲಿ ಡಿಕೆಶಿ ಸಿಎಂ ಆಗಬೇಕು ಎಂಬ ಕೂಗು ಎದ್ದಿರುವ ನಡುವೆಯೇ ರಾಷ್ಟ್ರೀಯ ನಾಯಕತ್ವಕ್ಕೂ ಅವರ ಹೆಸರು ಕೇಳಿಬಂದಿರುವುದು ಗಮನಾರ್ಹವಾಗಿದ್ದು, ಸಂಚಲನ ಮೂಡಿಸಿದೆ.

ಹಕೀಂ ಪತ್ರದಲ್ಲೇನಿದೆ?:

‘ಕಾಂಗ್ರೆಸ್‌ ಪಕ್ಷಕ್ಕೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ (ಓಪನ್ ಹಾರ್ಟ್‌ ಸರ್ಜರಿ) ಅಗತ್ಯ. ನಾನು ಕಳೆದ 3 ವರ್ಷಗಳಿಂದ ರಾಹುಲ್‌ ಗಾಂಧಿಯವರ ಭೇಟಿಗೆ ಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ನಾಯಕತ್ವದಲ್ಲಿ ಸಂಪೂರ್ಣ ಬದಲಾವಣೆ ಮಾಡದಿದ್ದರೆ ಶತಮಾನದ ಇತಿಹಾಸವುಳ್ಳ ಪಕ್ಷವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತೂ ಆಕ್ಷೇಪಿಸಿರುವ ಮೊಕೀಮ್‌, ‘ಖರ್ಗೆಯವರಿಗೆ 83 ವರ್ಷ ವಯಸ್ಸು. ಶೇ.65ರಷ್ಟು ಪ್ರಮಾಣದಲ್ಲಿರುವ 35 ವರ್ಷಕ್ಕಿಂತ ಕೆಳಗಿನ ಭಾರತದ ಯುವಕರ ಪ್ರತಿಧ್ವನಿ ಆಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಬದಲಿಗೆ ಯುವನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಕಾಂಗ್ರೆಸ್‌ನಲ್ಲಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ನಾಯಕರಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕೇಂದ್ರದಲ್ಲಿ ಸಕ್ರಿಯ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಕೂಗು. ಜತೆಗೆ ರಾಜಸ್ಥಾನದ ಸಚಿನ್ ಪೈಲಟ್, ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಮತ್ತು ಸಂಸದ ಶಶಿ ತರೂರ್ ಅವರಿಗೂ ಪ್ರಮುಖ ನಾಯಕತ್ವ ವಹಿಸಬೇಕು. ಅವರಿಗೆ ಆ ಸಾಮರ್ಥ್ಯವಿದೆ’ ಎಂದಿದ್ದಾರೆ.

ಡಿಕೆಶಿ ಮತ್ತು ಸಚಿನ್ ಪೈಲಟ್ ತಮ್ಮ ರಾಜ್ಯಗಳಲ್ಲಿ ತಮ್ಮ ರಾಜ್ಯದಲ್ಲಿನ ಪ್ರಬಲ ನಾಯಕರಾದ ಸಿದ್ದರಾಮಯ್ಯ ಮತ್ತು ಅಶೋಕ್ ಗೆಹ್ಲೋಟ್‌ಗೆ ಸವಾಲು ಹಾಕಿ ಸುದ್ದಿಯಾಗಿದ್ದಾರೆ ಎಂಬುದು ಗಮನಾರ್ಹ.

ಪಕ್ಷದಲ್ಲಿನ ದೋಷ, ರಾಹುಲ್‌ ಬಗ್ಗೆ ಬೇಸರ:

ಇದಲ್ಲದೆ, 5 ಪುಟಗಳ ಸುದೀರ್ಘ ಪತ್ರದಲ್ಲಿ ಅವರು, ಕಾಂಗ್ರೆಸ್‌ ನಾಯಕತ್ವದ ದೋಷ, ದೇಶಾದ್ಯಂತ ಸಮರ್ಥ ನಾಯಕರ ಕಡೆಗಣನೆ, ಯುವಕರನ್ನು ಆಕರ್ಷಿಸುವಲ್ಲಿ ವೈಫಲ್ಯ ಮೊದಲಾದ ವಿಷಯಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

‘ರಾಹುಲ್‌ ಗಾಂಧಿಯವರನ್ನು ಭೇಟಿಯಾಗಬೇಕೆಂದು 3 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದು ನನ್ನ ವೈಯಕ್ತಿಕ ನೋವಲ್ಲ. ಬದಲಾಗಿ ಭಾರತದಾದ್ಯಂತ ಕಾರ್ಯಕರ್ತರು ಅನುಭವಿಸುತ್ತಿರುವ ಭಾವನಾತ್ಮಕ ಸಂಪರ್ಕ ಕಡಿತದ ಪ್ರತೀಕವಾಗಿದೆ. ಬಿಹಾರ, ದೆಹಲಿ, ಹರ್ಯಾಣ ಮೊದಲಾದೆಡೆ ಕಾಂಗ್ರೆಸ್‌ ಪಕ್ಷದ ಸೋಲು ಕೇವಲ ಚುನಾವಣಾ ಹಿನ್ನಡೆಯಲ್ಲ. ಆಳವಾದ ಸಂಘಟನಾತ್ಮಕ ವೈಫಲ್ಯ, ಸರಣಿ ತಪ್ಪು ನಿರ್ಧಾರಗಳು, ತಪ್ಪು ನಾಯಕತ್ವದ ಆಯ್ಕೆಗಳು ಮತ್ತು ಸೂಕ್ತವಲ್ಲದ ಕೈಗಳಲ್ಲಿ ಜವಾಬ್ದಾರಿಗಳನ್ನು ನೀಡಿರುವುದು ಪಕ್ಷವನ್ನು ಒಳಗೊಳಗೇ ದುರ್ಬಲಗೊಳಿಸಿದೆ’ ಎಂದು ಮೊಕೀಮ್‌ ಪತ್ರದಲ್ಲಿ ವಿವರಿಸಿದ್ದಾರೆ.

ರಾಹುಲ್‌ ಏಕೆ ಬೇಡ?

- 3 ವರ್ಷಗಳಿಂದ ರಾಹುಲ್‌ ಭೇಟಿಗೆ ಯತ್ನಿಸುತ್ತಿದ್ದೇನೆ. ಅವಕಾಶವೇ ಸಿಗುತ್ತಿಲ್ಲ

- ದೇಶದಲ್ಲಿ ಸಮರ್ಥ ನಾಯಕರ ಕಡೆಗಣನೆ ಆಗುತ್ತಿದೆ. ಯುವಕರನ್ನು ಸೆಳಯುತ್ತಿಲ್ಲ

- ಇದು ನನ್ನ ನೋವಲ್ಲ, ಕಾರ್ಯಕರ್ತರು ಅನುಭವಿಸುತ್ತಿರುವ ಸಂಪರ್ಕ ಕಡಿತ ಪ್ರತೀಕ

- ವಿವಿಧ ರಾಜ್ಯಗಳ ಸೋಲು ಚುನಾವಣೆ ಹಿನ್ನಡೆಯಲ್ಲ. ಸಂಘಟನಾತ್ಮಕ ವೈಫಲ್ಯ

- ತಪ್ಪು ನಾಯಕತ್ವದ ಆಯ್ಕೆಗಳಿಂದಾಗಿ ಸೋಲು: ಒಡಿಶಾ ಮಾಜಿ ಶಾಸಕ ಮೊಕಿಮ್‌

ಖರ್ಗೆಗೆ ವಿರೋಧ ಏಕೆ?

- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಯಸ್ಸು 83 ವರ್ಷ

- 35 ವರ್ಷದೊಳಗಿನ 65% ಮಂದಿ ಯುವಕರು ದೇಶದಲ್ಲಿ ಇದ್ದಾರೆ

- ಆ ಯುವಕರ ಪ್ರತಿಧ್ವನಿ ಆಗಲು ಖರ್ಗೆ ಅವರಿಂದ ಸಾಧ್ಯವಾಗುತ್ತಿಲ್ಲ

- ಹೀಗಾಗಿ ಯುವ ನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು

ಪ್ರಿಯಾಂಕಾ, ಡಿಕೆ ಸೇರಿ ಹಲವರಿಗೆ ಸಾಮರ್ಥ್ಯವಿದೆ

ಕಾಂಗ್ರೆಸ್‌ನಲ್ಲಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ನಾಯಕರಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕೇಂದ್ರದಲ್ಲಿ ಸಕ್ರಿಯ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಕೂಗು. ಜತೆಗೆ ರಾಜಸ್ಥಾನದ ಸಚಿನ್ ಪೈಲಟ್, ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಸಂಸದ ಶಶಿ ತರೂರ್ ಅವರಿಗೂ ಪ್ರಮುಖ ನಾಯಕತ್ವ ವಹಿಸಬೇಕು. ಅವರಿಗೆ ಆ ಸಾಮರ್ಥ್ಯವಿದೆ.

- ಮೊಹಮ್ಮದ್ ಮೊಕಿಮ್, ಒಡಿಶಾ ಕಾಂಗ್ರೆಸ್‌ ಮಾಜಿ ಶಾಸಕ