Asianet Suvarna News Asianet Suvarna News

ಪಕ್ಷದಲ್ಲಿನ ಪರಿಸ್ಥಿತಿ ಸ್ವಚ್ಛ ಮಾಡಿದರೆ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ: ಎಸ್‌.ಟಿ.ಸೋಮಶೇಖರ್‌

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆಯಲ್ಲಿ ನಾನು ಇದ್ದೇನೆ ಎಂದು ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಮಾರ್ಮಿಕವಾಗಿ ಹೇಳಿದ್ದಾರೆ. 

Nobody will leave BJP if the situation in the party is cleaned up Says ST Somashekar gvd
Author
First Published Aug 23, 2023, 12:09 PM IST

ಬೆಂಗಳೂರು (ಆ.23): ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆಯಲ್ಲಿ ನಾನು ಇದ್ದೇನೆ ಎಂದು ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಮಾರ್ಮಿಕವಾಗಿ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸುವ ಪ್ರಯತ್ನ ಸ್ವಪಕ್ಷೀಯರಿಂದಲೇ ನಡೆದಿದ್ದರಿಂದ ನನ್ನ ಬೆಂಬಲಿಗರ ಪೈಕಿ ಕೆಲವರು ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಆತಂಕಗೊಂಡು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿ ಮಾತುಕತೆ ನಡೆದು ಯಶಸ್ವಿಯಾದಲ್ಲಿ ಈಗ ಪಕ್ಷ ತೊರೆದ ಬೆಂಬಲಿಗರು ವಾಪಸ್‌ ಬರುತ್ತಾರೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಹಕಾರ ಸಚಿವನಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಪಕ್ಷದ ಕಚೇರಿಗೂ ಭೇಟಿ ಕಾರ್ಯಕರ್ತರ ಸಮಸ್ಯೆಗಳನ್ನು ಕೇಳುತ್ತಿದ್ದೆ. ಉತ್ತಮವಾಗಿ ಕೆಲಸ ಮಾಡಿದರೂ ಏಕಾಏಕಿ ಯಾಕೆ ಇಂತಹ ಚಿಂತನೆ ಎಂಬ ಮಾತುಗಳು ಕೇಳಿಬಂದಿವೆ. ಘಟಾನುಘಟಿಗಳನ್ನೇ ಸೋಲಿಸಲಾಗಿದೆ. ನಮಗೂ ಅದೇ ರೀತಿ ಸೋಲಿಸಬಹುದು ಎಂಬ ಆಲೋಚನೆ ಬಿಜೆಪಿಗೆ ವಲಸೆ ಬಂದವರಲ್ಲಿ ಮೂಡಿದೆ. ಅವರಿಗೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸಬೇಕು. ನಮಗೆ ಗ್ಯಾರಂಟಿಯಾದರೆ, ಅವರಿಗೆ ನಾವು ಗ್ಯಾರಂಟಿ ಕೊಡಬಹುದು. ನಮಗೇ ಗ್ಯಾರಂಟಿ ಇಲ್ಲವಾದರೆ, ನಮ್ಮೊಂದಿಗೆ ವಲಸೆ ಬಂದವರಿಗೆ ನಾವು ಹೇಗೆ ಗ್ಯಾರಂಟಿ ನೀಡಲು ಸಾಧ್ಯ ಎಂದು ಬೇಸರದಿಂದ ಹೇಳಿದರು.

‘ಆಪರೇಷನ್‌ ಹಸ್ತ’ಕ್ಕೆ ತನ್ವೀರ್‌ ಸೇಠ್‌ ಅಸಮಾಧಾನ: ರಾಜಕೀಯ ನಿವೃತ್ತಿ ಬಯಕೆ ವ್ಯಕ್ತಪಡಿಸಿದ ಶಾಸಕ

ಪಕ್ಷದಲ್ಲಿನ ಸಮಸ್ಯೆಗಳ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರ ಗಮನಕ್ಕೆ ತಂದಿದ್ದೇನೆ. ದುಡುಕಿ ತೀರ್ಮಾನ ಕೈಗೊಳ್ಳಬೇಡ ಎಂಬ ಸಲಹೆ ನೀಡಿದ್ದಾರೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದರು. ಪಕ್ಷದಲ್ಲಿನ ಕೆಲವು ಅಸಮಾಧಾನ ಕುರಿತು ಮುಖಂಡರಿಗೆ ಹೇಳಿದ್ದೇನೆ. ಪಕ್ಷದ ಪರಿಸ್ಥಿತಿ ಸ್ವಚ್ಛ ಮಾಡಿದರೆ ಯಾರು ಸಹ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲಿಯೇ ಇರುತ್ತಾರೆ. ನಾನು ಸಹ ಪಕ್ಷ ಬಿಡುವ ಬಗ್ಗೆ ಯೋಚನೆ ಮಾಡುವುದಿಲ್ಲ ಎಂಬ ವಿಚಾರವನ್ನು ಯಡಿಯೂರಪ್ಪ ಸೇರಿದಂತೆ ಇತರೆ ಮುಖಂಡರ ಗಮನಕ್ಕೆ ತಂದಿದ್ದೇನೆ. ಯಡಿಯೂರಪ್ಪ ಅವರು ಎಲ್ಲವನ್ನೂ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಆಪರೇಷನ್ ಕಮಲ ಮಾಡಿದಾಗ ಇವರಿಗೆ ನಾಚಿಕೆ ಆಗಲಿಲ್ವಾ?: ಸಚಿವ ಶಿವರಾಜ ತಂಗಡಗಿ

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಕ್ಷೇತ್ರದ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದು ನಿಜ. ಇದರ ಪರಿಣಾಮವಾಗಿ ಏಳು ಕೋಟಿ ರು. ಬಿಡುಗಡೆಯಾಗಿದೆ. ಕೆಲವರಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರನ್ನು ಹೊಗಳುವುದು ತಪ್ಪಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡಬೇಕಾಗುತ್ತದೆ. ಅದು ಸಹ ಇರುವ ಸತ್ಯ ವಿಚಾರವನ್ನು ಹೇಳಬೇಕಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಕೆಲವರು ಅದನ್ನು ಬಿಜೆಪಿ ಬಿಡುತ್ತಾರೆ, ಕಾಂಗ್ರೆಸ್‌ ಸೇರುತ್ತಾರೆ ಎಂದು ವದಂತಿ ಹಬ್ಬಿಸಿದ್ದಾರೆ. ಅಷ್ಟುಮಾತ್ರವಲ್ಲದೇ, ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ ಮತ್ತು ಮಗನನ್ನು ವಿಧಾನಸಭೆಗೆ ಕಣಕ್ಕಿಳಿಸುತ್ತೇನೆ ಎಂಬ ವದಂತಿ ಕೂಡಹಬ್ಬಿಸಿದ್ದಾರೆ. ಈ ರೀತಿ ಪುಕಾರು ಹಬ್ಬಿಸಿ ಇರುವ ಒಳ್ಳೆಯ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios