ಬಿಜೆಪಿಗೆ ಮತದಾರರ ಒಲವು ಸ್ಪಷ್ಟ: ನಳಿನ್ ಕುಮಾರ್ ಕಟೀಲ್
ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ತೆಲಂಗಾಣದಲ್ಲೂ ಪಕ್ಷ ಅದ್ಭುತ ಸಾಧನೆ ತೋರಿಸಿದೆ. ಚುನಾವಣಾ ಪ್ರಚಾರ ವೇಳೆ ಮೋದಿ ಗ್ಯಾರಂಟಿ ನೀಡಿರುವುದು ಸಫಲವಾಗಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ: ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
![Nalin Kumar Kateel React to BJP Won in Three States Assembly Elections grg Nalin Kumar Kateel React to BJP Won in Three States Assembly Elections grg](https://static-ai.asianetnews.com/images/01hewx81v1pg46erfjayax9nt9/-----_363x203xt.jpg)
ಮಂಗಳೂರು(ಡಿ.04): ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿರುವುದು ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ. ಅಲ್ಲದೆ ದೇಶದಲ್ಲಿ ಬಿಜೆಪಿ ಪರ ಮತದಾರರ ಒಲವು ಇರುವುದು ಸ್ಪಷ್ಟವಾಗಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ತೆಲಂಗಾಣದಲ್ಲೂ ಪಕ್ಷ ಅದ್ಭುತ ಸಾಧನೆ ತೋರಿಸಿದೆ. ಚುನಾವಣಾ ಪ್ರಚಾರ ವೇಳೆ ಮೋದಿ ಗ್ಯಾರಂಟಿ ನೀಡಿರುವುದು ಸಫಲವಾಗಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದರು.
ಲೋಕಸಭೆಯೋ? ವಿಧಾನಸಭೆಯೋ? ಚುನಾವಣೆಯಲ್ಲಿ ಗೆದ್ದ ಬಿಜೆಪಿ ಸಂಸದರಿಗೆ ಇನ್ನು 14 ದಿನದ ಡೆಡ್ಲೈನ್!
ಕರ್ನಾಟಕದ ಫಲಿತಾಂಶ ನೋಡಿ ಕಾಂಗ್ರೆಸ್ ದೇಶದ ಇತರ ಭಾಗಗಳಲ್ಲೂ ಗ್ಯಾರಂಟಿ ಯೋಜನೆ ಘೋಷಿಸಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಜನರಿಗೆ ಮೋಸ ಮಾಡಿರುವುದು ದೇಶದ ಜನರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಅವರು ಈ ಚುನಾವಣೆಯನ್ನು ಸೆಮಿಫೈನಲ್ ಎಂದಿದ್ದರು. ಸೆಮಿಫೈನಲ್ನಲ್ಲಿ ಕಾಂಗ್ರೆಸ್ನ್ನು ಜನರು ಹೊರಗಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಗದೊಮ್ಮೆ ಪ್ರಧಾನಿ ಆಗೋದು ಸ್ಪಷ್ಟ. ದೇಶದಲ್ಲಿ ಅಭಿವೃದ್ದಿ, ಶಾಂತಿ ಸುವ್ಯವಸ್ಥೆಗೆ ಮೋದಿ ಅಗತ್ಯ ಎಂದು ಜನತೆಗೆ ಗೊತ್ತಾಗಿದೆ ಎಂದರು.