ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷ ಪೂರೈಸಿದ ನಳಿನ್‌ ಕುಮಾರ್‌ ಕಟೀಲ್‌| ರಾಜ್ಯಾದ್ಯಂತ ಹಲವು ಬಾರಿ ಸಂಚರಿಸಿ ಪಕ್ಷ ಸಂಘಟನೆ| ಉಪ ಚುನಾವಣೆ ಸೇರಿ ಹಲವು ಸವಾಲುಗಳನ್ನು ಗೆದ್ದ ನಾಯಕ| ಸರ್ಕಾರದ ಜೊತೆಗೂ ಉತ್ತಮ ಸಮನ್ವಯ

ಬೆಂಗಳೂರು(ಆ.27): ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್‌ ಕುಮಾರ್‌ ಕಟೀಲ್‌ ಅವರು ಗುರುವಾರ ಎರಡನೇ ವರ್ಷಕ್ಕೆ ಕಾಲಿಡಲಿದ್ದು, ಕಳೆದ ಒಂದು ವರ್ಷದ ಕಾಲ ರಾಜ್ಯಾದ್ಯಂತ ಹಲವು ಬಾರಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ವಿಶೇಷ ಆಸ್ಥೆ ವಹಿಸಿದ್ದಾರೆ.

Add Asianetnews Kannada as a Preferred SourcegooglePreferred

"

ಕಳೆದ ವರ್ಷ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ತೆರವಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್‌ ಅವರ ಹೆಸರನ್ನು ಘೋಷಿಸಿದಾಗ ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿತ್ತು. ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತರಾದವರು ರಾಜ್ಯಾಧ್ಯಕ್ಷರಾಗಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬಂದಿದ್ದವು. ಆದರೆ, ಅದೆಲ್ಲವನ್ನು ಹುಸಿಗೊಳಿಸುವಂತೆ ಕಟೀಲ್‌ ತಮ್ಮ ಕಾರ್ಯವೈಖರಿ ಮೂಲಕ ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯವ್ಯಾಪಿ ಪಕ್ಷದ ಕಾರ್ಯಕತರು ತಮ್ಮನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಎದುರಾದವು. ಅದರಲ್ಲಿ ಪಕ್ಷಕ್ಕೆ ಉತ್ತಮ ಗೆಲುವು ತಂದು ಕೊಡುವುದಕ್ಕೆ ತಮ್ಮದೇ ಶೈಲಿಯಲ್ಲಿ ಕಟೀಲ್‌ ಕೆಲಸ ಮಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಅಂತರ ಕಾಪಾಡಿಕೊಳ್ಳದೆ ಸಮಾಲೋಚನೆ ನಡೆಸುವ ಮೂಲಕ ಪಕ್ಷ ಮತ್ತು ಸರ್ಕಾರದ ನಡುವೆ ಯಾವುದೇ ತೊಂದರೆ ಉದ್ಭವಿಸದಂತೆ ಸಮನ್ವಯತೆ ಕಾಪಾಡಿಕೊಳ್ಳಲು ಪ್ರಯತ್ನಿಸಿದ ಹೆಗ್ಗಳಿಕೆ ಕಟೀಲ್‌ ಅವರಿಗೆ ಸಲ್ಲುತ್ತದೆ.

ಅಲ್ಲದೆ, ಯಾವುದೇ ಭಿನ್ನಮತ, ಅಪಸ್ವರಕ್ಕೆ ಅವಕಾಶ ನೀಡದಂತೆ ಪಕ್ಷದ ಎಲ್ಲ ಜಿಲ್ಲಾ ಮತ್ತು ರಾಜ್ಯ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡುವಲ್ಲಿ ಕಟೀಲ್‌ ಅವರ ಕಾರ್ಯಕ್ಷಮತೆ ಯಶಸ್ವಿಯಾಗಿದೆ. ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ ಎಂಬುದನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಬಹುತೇಕ ಎಲ್ಲ ನೇಮಕಗಳಲ್ಲೂ ತಳಹಂತದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಗುರುವಾರ ಎರಡನೇ ವರ್ಷಕ್ಕೆ ಕಾಲಿಡುವ ದಿನದಂದು ಕಟೀಲ್‌ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರವಾಸದಲ್ಲಿ ನಿರತರಾಗಿರುತ್ತಾರೆ.