ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆದಿರುವ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೈವಾಡ ಇರಬೇಕು. ಅವರೇ ಮೊಟ್ಟೆಹೊಡೆಸಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ. 

ಬೆಂಗಳೂರು (ಆ.21): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆದಿರುವ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೈವಾಡ ಇರಬೇಕು. ಅವರೇ ಮೊಟ್ಟೆಹೊಡೆಸಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ್‌ ಸಾವರ್ಕರ್‌ ಅವರನ್ನು ಅಪಮಾನಿಸಿದ್ದಾರೆ. ಇವೆರಡನ್ನು ಕಾಂಗ್ರೆಸ್‌ನಲ್ಲಿಯೇ ವಿರೋಧಿಸುತ್ತಿರುವುದು ಸ್ಪಷ್ಟವಾಗಿದೆ. 

ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ನೀತಿಯನ್ನು ಗಮನಿಸಿ ಆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಅದರ ಪರಿಣಾಮವಾಗಿ ಮೊಟ್ಟೆಎಸೆದಿರುವುದಾಗಿ ಕಾಂಗ್ರೆಸ್‌ ಕಾರ್ಯಕರ್ತ ಉಲ್ಲೇಖ ಮಾಡಿದ್ದಾನೆ ಎಂದರು. ಕಾಂಗ್ರೆಸ್‌ ಕಾರ್ಯಕರ್ತನೇ ನಾನೇ ಮೊಟ್ಟೆಹೊಡೆದಿದ್ದು ಎಂದು ಹೇಳಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈಗ ಪ್ರತಿಭಟನೆಯನ್ನು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಮಾಡುತ್ತಾರಾ? ಕಾಂಗ್ರೆಸ್‌ ಜೋಡೋ ಮಾಡುತ್ತಾರಾ? ಚೋಡೋ ಮಾಡುತ್ತಾರಾ? ಎಂದು ಪ್ರಶ್ನಿಸಿದರು. 

ಸಂಸದೀಯ ಮಂಡಳಿಲ್ಲಿ ಬಿಎಸ್‌ವೈಗೆ ಸ್ಥಾನ: ನಳಿನ್‌ ಕುಮಾರ್‌ ಕಟೀಲ್‌ ಸಂತಸ

ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ಕಾಂಗ್ರೆಸ್‌ನ ಕಾರ್ಯಕರ್ತ ಹೊಟ್ಟೆಹೊಡೆದು, ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಇದೇ ತಿಂಗಳು 26ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇನೆ ಎಂದಿದ್ದಾರೆ. ಯಾವ ನೈತಿಕತೆ ಮತ್ತು ಪುರುಷಾರ್ಥಕ್ಕೆ ಹೋಗುತ್ತಾರೆ. ಮೊಟ್ಟೆಎಸೆದ ಸಂಪತ್‌ ಕಾಂಗ್ರೆಸ್‌ ಕಾರ್ಯಕರ್ತ. ನೈತಿಕತೆ ಇದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರು ಅವರವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಿವಮೊಗ್ಗ, ಮಂಗಳೂರು ಹತ್ಯೆ ಎಲ್ಲಾ ಸಂಶಯ ವ್ಯಕ್ತವಾಗುತ್ತಿದೆ. ಟೂಲ್‌ಕಿಟ್‌ ದೆಹಲಿಯಿಂದ ಬಂದಿದೆಯೇ? 

ಅಥವಾ ಇಲ್ಲಿಯೇ ಸಿದ್ದವಾಗಿದೆಯೇ? ಸಮಾಜದಲ್ಲಿ ಸಿದ್ದರಾಮಯ್ಯ ಘನತೆ ಕಡಿಮೆಯಾಗುತ್ತಿದೆ ಎಂದು ಕಿಡಿಕಾರಿದರು. ವೀರ್‌ ಸಾವರ್ಕರ್‌ ದೇಶದ ಹೋರಾಟಗಾರ. ಸುಭಾಷ್‌ ಚಂದ್ರಬೋಸ್‌ ಮತ್ತು ಸಾವರ್ಕರ್‌ ಅವರನ್ನು ಸಮಾನವಾಗಿ ನೋಡುತ್ತೇವೆ. ಸಾವರ್ಕರ್‌ ಫೋಟೋ ಕಾಲಿನಲ್ಲಿ ತುಳಿಯುವುದು ಸರಿಯಲ್ಲಿ. ಅವರಿಗೆ ನಾಚಿಕೆಯಾಗಬೇಕು. ಕಾಲಿನಲ್ಲಿ ತುಳಿದಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಪ್ರತಿಭಟನೆ ದಿನಾಂಕ ನಿಗದಿ ಮಾಡುತ್ತೇವೆ ಎಂದರು.

ಬಿಜೆಪಿ ಮಿಷನ್‌ 150: ಬೊಮ್ಮಾಯಿ, ಕಟೀಲ್‌ ಟೀಂ ತಲಾ 50 ಕ್ಷೇತ್ರದಲ್ಲಿ ಯಾತ್ರೆ

ಕಿಡಿಗೇಡಿಗಳ ಬಂಧಿಸಿ: ಶಿವಮೊಗ್ಗದಲ್ಲಿ ದೇಶಭಕ್ತರ ಫ್ಲೆಕ್ಸ್‌ ತೆರವು ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಎಸ್‌ಡಿಪಿಐ ಕೃತ್ಯ ಹಾಗೂ ಯುವಕನ ಮೇಲೆ ಚೂರಿ ಇರಿತವನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೇಷ್ಠ ರಾಷ್ಟ್ರಭಕ್ತ ಸಾವರ್ಕರ್‌ ಅವರ ಬಗ್ಗೆ ಕಾಂಗ್ರೆಸ್‌ ಟೀಕಿಸುತ್ತಿತ್ತು. ಇದೇ ಕಾಂಗ್ರೆಸ್‌ನವರ ಬೆಂಬಲದಿಂದ ಎಸ್‌ಡಿಪಿಐ ಪಕ್ಷದವರು ಇವತ್ತು ಶಿವಮೊಗ್ಗದಲ್ಲಿ ಅವರ ಭಾವಚಿತ್ರದ ಫ್ಲೆಕ್ಸ್‌ ತೆರವುಗೊಳಿಸಿದ್ದಲ್ಲದೆ, ರಾಷ್ಟ್ರಧ್ವಜವನ್ನು ಕೆಳಗೆ ಹಾಕಿದ್ದಾರೆ. ಇದೊಂದು ರಾಷ್ಟ್ರವಿರೋಧಿ ಕೃತ್ಯ. ಈ ದುಷ್ಕೃತ್ಯದಲ್ಲಿ ಭಾಗವಹಿಸಿದವರನ್ನು ರಾಷ್ಟ್ರವಿರೋಧಿಗಳು ಮತ್ತು ಭಯೋತ್ಪಾದಕರೆಂದು ಸರಕಾರ ಗುರುತಿಸಿ ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.