* ಅತ್ತ ಜೆಡಿಎಸ್‌ ಘಟಾನುಘಟಿ ನಾಯಕರು ಕಾಂಗ್ರೆಸ್‌, ಬಿಜೆಪಿಯತ್ತ* ಇತ್ತ ಮೈಸೂರು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಜೆಡಿಎಸ್ ಸೇರ್ಪಡೆ* ನೂರಾರು ಮುಖಂಡರುಗಳು ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ

ರಾಮನಗರ/ಮೈಸೂರು, (ಅ.2): ಒಂದೆಡೆ ಜೆಡಿಎಸ್‌ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ (Congress) ಹಾಗೂ ಬಿಜೆಪಿಯತ್ತ ಮುಖಮಾಡಿದ್ದಾರೆ. ಜಿಟಿ ದೇವೇಗೌಡ ಕಾಂಗ್ರೆಸ್‌ಗೆ ಸೇರುವುದಾಗಿ ಹೇಳಿದ್ರೆ, ಸಂದೇಶ್ ನಾಗರಾಜ್ ಬಿಜೆಪಿ (BJP) ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರ ಮಧ್ಯೆ ಮೈಸೂರು (Mysuru) ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಹೌದು... ಎಚ್.ಡಿ. ಕೋಟೆ ತಾಲೂಕಿನ ಕಾಂಗ್ರೆಸ್ ಸಾಕಷ್ಟು ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಜೆಡಿಎಸ್‌ ತೊರೆಯುವ ಸುಳಿವು ಕೊಟ್ಟ ಮತ್ತೋರ್ವ ಶಾಸಕ: ದಳಪತಿಗಳಿಗೆ ಶಾಕ್ ಮೇಲೆ ಶಾಕ್

ರಾಮನಗರದ ಬಿಡದಿ ತೋಟದ ಮನೆಯಲ್ಲಿ ಇಂದು (ಆ.02) ಎಚ್.ಡಿ. ಕೋಟೆ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣನಾಯಕ್ ನೇತೃತ್ವದಲ್ಲಿ ಜೆಡಿಎಸ್ ಸೇರಿದ ಅಷ್ಟೂ ಕಾರ್ಯಕರ್ತರನ್ನು ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷಕ್ಕೆ ಬರ ಮಾಡಿಕೊಂಡರು.

ಜೆಡಿಎಸ್ ಸೇರಿದ ನೂರಾರು ಕಾರ್ಯಕರ್ತರು ಕುರುಬ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹವಾಗಿದ್ದು, ಇದು ಮಾಜಿ ಸಿಎಂ ಸಿದ್ದರಾಮಯ್ಯ ಶಾಕ್ ಕೊಟ್ಟಂತಾಗಿದೆ.

ಈ ವೇಳೆ ಎಚ್.ಡಿ. ಕುಮಾರಸ್ವಾಮಿ, ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ತಳಮಟ್ಟದಲ್ಲಿ ಸಶಕ್ತವಾಗಿ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಪಕ್ಷವನ್ನು ಕಟ್ಟಬೇಕು ಹಾಗೂ ಎಲ್ಲರೂ ಅವಿರತವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಅಕ್ಟೋಬರ್ 16ರಿಂದ ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ 10 ದಿನಗಳ ಕಾಲ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಸಂಕ್ರಾಂತಿ ವೇಳೆಗೆ ಆ ಅಭ್ಯರ್ಥಿಗಳು ಆಯಾ ಕ್ಷೇತ್ರದ ಮತದಾರರ ಮನೆ ಬಾಗಿಲಿಗೆ ತಲುಪಿ ಪಕ್ಷ ಸಂಘಟನೆ ಮಾಡಬೇಕು. ಯಾರು ನಮ್ಮ ಟಾಸ್ಕ್ ರೀಚ್ ಮಾಡುತ್ತಾರೆಯೋ ಅಂತಹ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತೇವೆ ಎಂದರು.