ಪಕ್ಷದ ನಾಯಕರ ಮೇಲೆ ಮುನಿಸಿಕೊಂಡಿದ್ದ ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪನವರ ಮನವೊಲಿಕೆ ಮಾಡಲಾಗಿದೆ. ಅಷ್ಟಕ್ಕೂ ಕುಮಾರ್ ಬಂಗಾರಪ್ಪ ಮುನಿಸಿಕೊಂಡಿದ್ಯಾಕೆ..?

ಶಿವಮೊಗ್ಗ, (ಫೆ.28): ಪಕ್ಷದ ನಾಯಕರ ನಡೆಗೆ ತೀವ್ರ ಅಸಮಾಧಾನಗೊಂಡಿದ್ದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರನ್ನ ಸಂಸದ ರಾಘವೇಂದ್ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಮೂಗೂರು ಏತಾನೀರಾವರಿ ಉದ್ಘಾಟನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಮುನಿಸಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು (ಭಾನುವಾರ) ಕುಮಾರ್ ಬಂಗಾರಪ್ಪ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. 

ಸೊರಬ ತಾಲೂಕಿನ ಮಹತ್ವಾಕಾಂಕ್ಷಿ ಮೂಗೂರು ಏತ ನೀರಾವರಿ ಲೋಕಾರ್ಪಣೆ ಕಾರ್ಯಕ್ರಮದ ತಮ್ಮನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನದ ಬಗ್ಗೆ ಸಿದ್ದಪಡಿಸಲಾದ ಸ್ಟೇಜ್ ದಾಕ್ಯುಮೆಂಟರಿ ಮತ್ತು ಪ್ಲೆಕ್ಸ್ ಗಳಲ್ಲಿ ತಮ್ಮ ಫೋಟೋ ಇರದಿದ್ದಕ್ಕೆ ಕುಮಾರ್ ಬಂಗಾರಪ್ಪ ಮುನಿಸಿಕೊಂಡಿದ್ದರು ಎನ್ನಲಾಗಿದೆ.

ಸಿಎಂ ಜೊತೆ ಮಾತನಾಡಿದ್ದೇನೆ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ: ಕುಮಾರ್ ಬಂಗಾರಪ್ಪ

ಈ ಬಗ್ಗೆ ಶಾಸಕ ಕುಮಾರ ಬಂಗಾರಪ್ಪ ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಕೇಳಿದರೆ ಅಲ್ಲಿ ಸಮರ್ಪಕ ಉತ್ತರ ಬಂದಿಲ್ಲ. ಹಾಗಿದ್ದರೆ ಕಾರ್ಯಕ್ರಮ ನೀವೇ ಮಾಡಿಕೊಳ್ಳಿ ಎಂದು ಅಸಮಾಧಾನಗೊಂಡಿದ್ದರು.

ಕುಮಾರಬಂಗಾರಪ್ಪ ಅವರ ಬೆಂಬಲಿಗರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಇಲಾಖೆಯ ಕ್ರಮವನ್ನು ಖಂಡಿಸಿದ್ದಲ್ಲದೆ, ಶಾಸಕರನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. 

ಬಳಿಕ ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಕುಮಾರ ಬಂಗಾರಪ್ಪ ಮನೆಗೆ ಭೇಟಿ ದೌಡಾಯಿಸಿದರು.

ಮಧು ಬಂಗಾರಪ್ಪರನ್ನು ಬಿಜೆಪಿಗೆ ಆಹ್ವಾನಿಸಿದ ಕುಮಾರ್ ಬಂಗಾರಪ್ಪ..!

ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಶಾಸಕರೊಂದಿಗೆ ಚರ್ಚಿಸಿದ ಮುಖಂಡರ ಸಂಧಾನ ಸಭೆ ಸಕ್ಸಸ್ ಆಗಿ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಘವೇಂದ್ರ, ಶಿವಮೊಗ್ಗದಲ್ಲಿ ನಮ್ಮೊಲುಮೆ ಕಾರ್ಯಕ್ರಮ ಇದೆ. ಅದಕ್ಕೆ ಕುಮಾರ ಬಂಗಾರಪ್ಪ ಅವರನ್ನು ಆಹ್ವಾನಿಸಲು ಮನೆಗೆ ಬಂದಿದ್ದೆ. ನೀರಾವರಿ ಯೋಜನೆ ಉದ್ಘಾಟನೆ ವಿಚಾರದಲ್ಲಿ ಯಾವುದೇ ಮುನಿಸಿಲ್ಲ. ವೇದಿಕೆ ಹಿಂಬಾಗ ಬಿತ್ತರಿಸುವ ದಾಕ್ಯುಮೆಂಟರಿಯಲ್ಲಿ ಅವರನ್ನು ಕಡೆಗಣಿಸಿದ ವಿಚಾರ ನಂಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಾತು
ಇದಕ್ಕೆ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದ, ಕುಮಾರ ಬಂಗಾರಪ್ಪ ಪಕ್ಷಕ್ಕೆ ಬಂದಾಗಿನಿಂದ ತಾಲೂಕು ಮುಖಂಡರು ಅವರೊಂದಿಗಿದ್ದಾರೆ. ಶಾಸಕರು ಮುನಿಸಿಕೊಂಡಿಲ್ಲ. ಉಪಹಾರಕ್ಕೆ ಮನೆಗೆ ಕರೆದಿದ್ದರಿಂದ ಬಂದಿದ್ದೇವೆ. ಮುನಿಸು ಎಂಬುದು ಕಪೋಲ ಕಲ್ಪಿತ. ಪಕ್ಷದಲ್ಲಿ ಮೂಲ -ವಲಸೆ ಎಂಬುದಿಲ್ಲ ಎಲ್ಲರೂ ಒಂದೇ ಎಂದರು.