Asianet Suvarna News Asianet Suvarna News

ಅರಾಜಕತೆಯೇ ಕಾಂಗ್ರೆಸ್‌ ಸರ್ಕಾರದ ಸಾಧನೆ: ಶಾಸಕ ಶೈಲೇಂದ್ರ ಬೆಲ್ದಾಳೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷವಾಗಲಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಒಂದು ರೀತಿಯಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ದೂರಿದ್ದಾರೆ. 

Mla Shailendra Beldale Slams On Congress Govt At Bidar gvd
Author
First Published May 20, 2024, 10:09 PM IST

ಬೀದರ್‌ (ಮೇ.20): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷವಾಗಲಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಒಂದು ರೀತಿಯಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ದೂರಿದ್ದಾರೆ. ಅವರು ರಾಜ್ಯ ಸರ್ಕಾರದ ಒಂದು ವರ್ಷದ ಅವಧಿ ಮೇ 20ಕ್ಕೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಕಟಣೆ ನೀಡಿದ ಅವರು, ಅರಾಜಕತೆ ಕರ್ನಾಟಕದಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದೆ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರ, ದರೋಡೆ, ನೈತಿಕ ಪೊಲೀಸ್‌ಗಿರಿ ಸೇರಿದಂತೆ ಅಹಿತಕರ ಘಟನೆಗಳು ಹೆಚ್ಚಾಗಿವೆ.

ಅಪರಾಧ ಪ್ರಕರಣಗಳು ಗಣನೀಯ ವೃದ್ಧಿಯಾದ ಬಗ್ಗೆ ಸರ್ಕಾರದ ಕ್ರೈಮ್‌ ವಿಭಾಗದ ವರದಿಗಳೇ ತಿಳಿಸುತ್ತಿವೆ. ಮೊದಲ ಬಾರಿ ರಾಜ್ಯದಲ್ಲಿ ಈ ಪರಿ ಆಡಳಿತ ವ್ಯವಸ್ಥೆ ಹಾಳಾಗಿದೆ.‌ ಇದಕ್ಕೆಲ್ಲ ಸರ್ಕಾರದ ಹಾಗೂ ಕಾಂಗ್ರೆಸ್ಸಿಗರ ತುಷ್ಠೀಕರಣ ರಾಜಕೀಯವೇ ಕಾರಣವಾಗಿದೆ ಎಂದು ಕಿಡಿ ಕಾರಿದ್ದಾರೆ. ಹಲ್ಲೆ, ಕಗ್ಗೊಲೆಯಂತಹ ಘಟನೆಗಳಿಂದ ರಾಜ್ಯದ ಮಹಿಳೆಯರಲ್ಲಂತೂ ಅಸುರಕ್ಷಿತ ಹಾಗೂ ಆತಂಕಮಯ ಭಾವನೆ ನಿರ್ಮಾಣವಾಗಿದೆ. ಹೊರಗೆ ಹೋದ ಮಹಿಳೆ ಸುರಕ್ಷಿತವಾಗಿ ರಾತ್ರಿ ಮನೆಗೆ ಬರುತ್ತಾರಾ ಇಲ್ಲವಾ ಎನ್ನುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಮಾಜಘಾತುಕ ಶಕ್ತಿಗಳಿಗೆ, ಕಿಡಿಗೇಡಿಗಳಿಗೆ ಕಾನೂನಿನ, ಪೊಲೀಸರ, ಸರ್ಕಾರದ ಸ್ವಲ್ಪವೂ ಭಯವೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೊನೆಗೂ ಅಂಜಲಿ‌ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ: ಗೃಹ ಸಚಿವ ಪರಮೇಶ್ವರ್‌

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಭೀಕರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಮಾಸುವ ಮುನ್ನವೇ ಅದೇ ಹುಬ್ಬಳ್ಳಿಯಲ್ಲೇ ಅಂಜಲಿ ಅಂಬಿಗೇರ ಎಂಬ ಯುವತಿಯ ಭೀಕರ ಕೊಲೆಯಾಗಿದೆ‌. ಮಡಿಕೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ರುಂಡ-ಮುಂಡ ಕತ್ತರಿಸಿ ಹತ್ಯೆಗೈಯಲಾಗಿದೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹಾಯಿಸಿ ಕೊಲೆ ಮಾಡಲಾಗಿದೆ. ಗದಗನಲ್ಲಿ ಒಂದೇ ಪರಿವಾರದ ನಾಲ್ವರ ಕಗ್ಗೊಲೆಯಾಗಿದೆ. ಕಲಬುರಗಿಯಲ್ಲಿ ಇಬ್ಬರು, ಯಾದಗಿರಿಯಲ್ಲಿ ಒಬ್ಬರ ಹತ್ಯೆ ನಡೆದಿದೆ. ಬೆಂಗಳೂರಿನಲ್ಲಿ ಹಾಡಹಗಲೇ‌ ಕೊಲೆಗಳು ಆಗುತ್ತಿವೆ ಎಂದು ಆರೋಪಿಸಿದರು.

ಕಲಬುರಗಿಯಲ್ಲಿ ಮನೆಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿ, ಹಿಗ್ಗಾಮುಗ್ಗಾ ಥಳಿಸಲಾಗಿದೆ. ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದಕ್ಕೆ ಕಮಲಾಪುರದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇಡಂನಲ್ಲಿ ಯುವಕರ ಮರ್ಮಾಂಗಕ್ಕೆ ವಿದ್ಯುತ್‌ ಶಾಕ್‌ ನೀಡಿ ದೌರ್ಜನ್ಯ ಎಸಗಲಾಗಿದೆ. ಬಸವಕಲ್ಯಾಣದಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿ ವ್ಯಕ್ತಿ ಹಾಗೂ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ. ಹೀಗೆ ಬೀದರ್‌ನಿಂದ ಚಾಮರಾಜನಗರವರೆಗೆ ರಾಜ್ಯದ ಎಲ್ಲೆಡೆ ವಿಚಿತ್ರವಾದ ವಾತಾವರಣ ನಿರ್ಮಾಣವಾಗಿದೆ. ಈ ಹತ್ತಾರು ಘಟನೆಗಳು ಕಾಂಗ್ರೆಸ್‌ ಸರ್ಕಾರದ ಸಾಲು ಸಾಲು ವೈಫಲ್ಯಗಳಿಗೆ ಸಾಕ್ಷಿಯಾಗಿವೆ‌ ಎಂದು ಹೇಳಿದ್ದಾರೆ.

ಮೊದಲ ಬಾರಿ ಇಂಥ ಕೆಟ್ಟ ಹಾಗೂ ಅರಾಜಕತೆಯ ಪರಿಸ್ಥಿತಿ ನೋಡಿ ರಾಜ್ಯದ ಜನತೆ ತಲ್ಲಣಗೊಂಡಿದ್ದಾರೆ. ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ‌ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು, ಸರ್ಕಾರ ಕೇವಲ ತುಷ್ಠೀಕರಣ ರಾಜಕೀಯದಲ್ಲಿ ಮುಳುಗಿದೆ. ಒಂದು ಸಮುದಾಯದ ಹಿತ ಕಾಪಾಡುತ್ತ ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಇದರಿಂದಲೇ ಎಲ್ಲೆಡೆ ಅಹಿತಕರ ಘಟನೆ ಹೆಚ್ಚಾಗಿ ಸಮಾಜದಲ್ಲಿ ಅಶಾಂತಿ ವಾತವರಣ ನಿರ್ಮಾಣವಾಗಿದೆ. ಸರ್ಕಾರದ ತುಷ್ಠೀಕರಣ ರಾಜಕೀಯದಿಂದ ಕರ್ನಾಟಕದ ಜನರ ನೆಮ್ಮದಿಯೇ ಹಾಳಾಗಿದೆ. ಇದು ಶಾಂತಿಯುತ ನಾಡಿಗೆ ಅಶಾಂತಿಯ ನಾಡು ಎಂಬಂತೆ ಜನರು ಮಾತಾಡುವಂತಾಗಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ-02ರ ಫಲಿತಾಂಶ ಪ್ರಕಟ: ಇಲ್ಲಿದೆ ಪೂರ್ಣ ಮಾಹಿತಿ!

ಬೀದರ್‌ ಅಭಿವೃದ್ಧಿಗೂ ಬರ: ಕಳೆದೊಂದು ವರ್ಷದಲ್ಲಿ ಬೀದರ್‌ ಜಿಲ್ಲೆಯಲ್ಲಿ ಸಹ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ನಡೆದಿಲ್ಲ.‌ ಹಿಂದುಳಿದ ಜಿಲ್ಲೆಯ ಬಗ್ಗೆಯೂ ಸರ್ಕಾರ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಜಿಲ್ಲೆಗೆ ಇಬ್ಬರು ಸಚಿವರಿದ್ದರೂ ಅಭಿವೃದ್ಧಿ ಕೆಲಸಗಳ ಕುರಿತು ಅವರ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಜಿಲ್ಲೆಗೆ ಒಂದಾದರೂ ದೊಡ್ಡ ಯೋಜನೆ ಬಂದಿಲ್ಲ. ಬೀದರ್‌ ನಗರದಲ್ಲಿ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ ಸ್ಥಾಪನೆ ಹೇಳಿಕೆಯಲ್ಲೇ ಉಳಿದಿದೆ. ಬಜೆಟ್‌ನಲ್ಲಿ ಘೋಷಿತ ಯೋಜನೆಗಳು ಸಹ ಭರವಸೆಯಾಗಿಯೇ ಉಳಿದಿವೆ ಎಂದು ಡಾ. ಬೆಲ್ದಾಳೆ ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios