ಡಾ.ಜಿ.ಪರಮೇಶ್ವರ್‌, ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌, ಶಿವರಾಜ್‌ ತಂಗಡಗಿ ಸೇರಿದಂತೆ ವಿವಿಧ ಶಾಸಕರು ಗುರುವಾರ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಸ್ಥಾನದ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು(ಮೇ.19):  ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಹೈಕಮಾಂಡ್‌ ನಿರ್ಧಾರವನ್ನು ಸ್ವಾಗತಿಸಿರುವ ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಡಾ.ಜಿ.ಪರಮೇಶ್ವರ್‌, ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌, ಶಿವರಾಜ್‌ ತಂಗಡಗಿ ಸೇರಿದಂತೆ ವಿವಿಧ ಶಾಸಕರು ಗುರುವಾರ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಸ್ಥಾನದ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದು, ಡಿಕೆಶಿ ಶಪಥ ಬಳಿಕ 5 ಗ್ಯಾರಂಟಿ ಜಾರಿಗೆ ಆದೇಶ

ಡಾ.ಜಿ. ಪರಮೇಶ್ವರ್‌, ಮುಖ್ಯಮಂತ್ರಿ ಯಾರಾಗಬೇಕೆಂಬ ತೀರ್ಮಾನದಿಂದ ಮೂರು ದಿನಗಳಿಂದ ಇದ್ದ ಗೊಂದಲ ಬಗೆಹರಿದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರಿಗೂ ಅಭಿನಂದಿಸುತ್ತೇನೆ. ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದು, ಬೇಗ ಕಾಂಗ್ರೆಸ್‌ ಸರ್ಕಾರ ರಚಿಸಿ ಆಡಳಿತ ಪ್ರಾರಂಭಿಸಬೇಕು ಎಂದರು.

ಸರ್ಕಾರದಲ್ಲಿ ಒಂದೇ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೀರ್ಮಾನ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೋ ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆನ್ನುವುದು ಸೂಕ್ತವಲ್ಲ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕಾಗುತ್ತದೆ. ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಆಗಿದ್ದೆ. ಆದರೆ, ನಮ್ಮ ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ದ. ಮುಂದಿನ ದಿನಗಳಲ್ಲಿ ಏನು ಮಾಡುತ್ತಾರೆ ನೋಡೋಣ. ಸಚಿವ ಸಂಪುಟ ವಿಸ್ತರಣೆಯಲ್ಲಿ ನ್ಯಾಯ ಹೇಗೆ ಕೊಡ್ತಾರೆ ನೋಡೋಣ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿ. ಹೈಕಮಾಂಡ್‌ನವರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ ಎಂದರು.

ಬೆಳಗಾವಿಗೆ ಕನಿಷ್ಠ 3 ಸಚಿವ ಸ್ಥಾನ ಬೇಕು:

ಶಾಸಕ ಸತೀಶ್‌ ಜಾರಕಿಹೊಳಿ ಮತ್ತು ಲಕ್ಷ್ಮೇ ಹೆಬ್ಬಾಳ್ಕರ್‌ ಮಾತನಾಡಿ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಹಾಗಾಗಿ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.

ಸತೀಶ್‌ ಜಾರಕಿಹೊಳಿ ಮಾತನಾಡಿ, ಇಬ್ಬರಿಗೂ ಸಿಎಂ ಹುದ್ದೆ ನೀಡಲು ಸಾಧ್ಯವಿಲ್ಲದ ಕಾರಣ ಹಿರಿತನದ ಆಧಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿದೆ. ಡಿ.ಕೆ.ಶಿವಕುಮಾರ್‌ ಅವರಿಗೂ ಸೂಕ್ತ ಗೌರವ ಕೊಡಬೇಕೆಂದು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಆದರೆ, ಈ ಹುದ್ದೆಗೆ ಯಾವುದೇ ಮಹತ್ವ ಇಲ್ಲ. ನಾವು ಇಬ್ಬರ ಜೊತೆಗೂ ಇರುತ್ತೇವೆ. ನಮ್ಮ ಬೆಳಗಾವಿ ಜಿಲ್ಲೆಯಲ್ಲಿ 11 ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ಜಿಲ್ಲೆಗೆ ಕನಿಷ್ಠ ಮೂರು ಸಚಿವ ಸ್ಥಾನ ನೀಡಬೇಕು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಜನರಿಗೆ ಹತ್ತಿರವಾಗಿ ಕೆಲಸ ಮಾಡಲು ಪೂರಕವಾದ ಖಾತೆಯನ್ನು ಬಯಸುತ್ತೇನೆ ಎಂದು ಹೇಳಿದರು.

ಕನಕಗಿರಿ ಶಾಸಕ ಶಿವರಾಜ್‌ ತಂಗಡಗಿ ಮಾತನಾಡಿ, ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಬೋವಿ ಸಮುದಾಯ ಕೋಟಾದಲ್ಲಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ. ಮೊದಲು ಮಂತ್ರಿ ಮಾಡಲಿ, ಆಮೇಲೆ ಖಾತೆ ನೊಡೋಣ ಎಂದರು.

ಮೈಸೂರು ಜಿಲ್ಲೆಗೆ 4ನೇ ಬಾರಿಗೆ ಒಲಿದ ಸಿಎಂ ಹುದ್ದೆ: 2 ಬಾರಿ ಸಿಎಂ ಆಗುತ್ತಿರುವುದೂ ವರುಣದಿಂದ ಗೆದ್ದಾಗಲೇ!

ಇಂತಹದ್ದೇ ಖಾತೆ ಬೇಕೆಂದು ಕೇಳಲ್ಲ:

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಹೈಕಮಾಂಡ್‌ ನಿರ್ಧಾರ ಉತ್ತಮವಾಗಿದೆ. ಮುಂಬರುವ ಬಿಬಿಎಂಪಿ, ಸಂಸತ್‌ ಚುನಾವಣೆ, ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸುವ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಉತ್ತಮ ಆಡಳಿತ ನೀಡಬೇಕು. ಸದ್ಯಕ್ಕೆ ಮುಖ್ಯಮಂತ್ರಿಗಳ ಜೊತೆ 10 ರಿಂದ 15 ಜನ ಸಚಿವರು ಪ್ರಮಾಣವಚನ ಸ್ವೀಕರಿಸಬಹುದು. ಉಳಿದದ್ದನ್ನು ಜಾತಿ, ಸಮುದಾಯ, ಪ್ರದೇಶವಾರು ಗಮನದಲ್ಲಿಟ್ಟುಕೊಂಡು ನೀಡಲಾಗುತ್ತದೆ. ನಾನು ಎಂದು ಕೂಡ ನನಗೆ ಇಂತಹದ್ದೇ ಹುದ್ದೆ ನೀಡಿ ಎಂದು ಕೇಳಿದವನಲ್ಲ. ಹೈ ಕಮಾಂಡ್‌ ಏನು ನೀಡುತ್ತೋ ಆ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.

ಹೈಕಮಾಂಡ್‌ ಒಳ್ಳೆಯ ಆಡಳಿತ ನೀಡಬೇಕೆಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನೇತೃತ್ವದ ಸಾರಥ್ಯ ನೀಡಿದೆ. ಇದು ಎಲ್ಲ ಶಾಸಕರೂ ಒಪ್ಪುವಂತಹದ್ದು. ಯಾರಾರ‍ಯರಿಗೆ ಸಚಿವ ಸ್ಥಾನ ನೀಡಬೇಕೆಂದು ಶಾಸಕಾಂಗ ಪಕ್ಷದ ನಾಯಕರು ತೀರ್ಮಾನಿಸುತ್ತಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾಯಕರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನಾನು ಸಚಿವ ಸ್ಥಾನದ ಬಗ್ಗೆ ಯಾವುದೇ ಬೇಡಿಕೆಯಿಟ್ಟಿಲ್ಲ ಅಂತ ಶಾಸಕ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.