ಶಾಸಕಾಂಗ ಪಕ್ಷ ಸಭೆ ಕರೆಯುವಂತೆ ಶಾಸಕರು ಬರೆದ ಪತ್ರದಿಂದಾಗಿ ಪ್ರತಿಪಕ್ಷಗಳಿಗೆ ಟೀಕೆ ಮಾಡಲು ಅವಕಾಶ ದೊರೆಯಿತು. ಇದು ಮಾಧ್ಯಮಗಳಲ್ಲೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುವಂತಹ ವರದಿಗಳು ಪ್ರಕಟವಾಗಲು ಕಾರಣವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು(ಜು.28): ಶಾಸಕರ ಅಹವಾಲು ಕೇಳಲು ಸಭೆ ಆಯೋಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಕ್ಕೆ ಹಿರಿಯ ನಾಯಕರು ಟೀಕೆ ಮಾಡಿದ್ದರಿಂದ ಅಸಮಾಧಾನಗೊಂಡ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಶಾಸಕಾಂಗ ಪಕ್ಷದ ಸಭೆಯಿಂದಲೇ ಹೊರನಡೆಯಲು ಮುಂದಾದ ಘಟನೆ ನಡೆದಿದೆ.
ಶಾಸಕಾಂಗ ಪಕ್ಷ ಸಭೆ ಕರೆಯುವಂತೆ ಶಾಸಕರು ಬರೆದ ಪತ್ರದಿಂದಾಗಿ ಪ್ರತಿಪಕ್ಷಗಳಿಗೆ ಟೀಕೆ ಮಾಡಲು ಅವಕಾಶ ದೊರೆಯಿತು. ಇದು ಮಾಧ್ಯಮಗಳಲ್ಲೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುವಂತಹ ವರದಿಗಳು ಪ್ರಕಟವಾಗಲು ಕಾರಣವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂಗೆ ಲೆಟರ್: ಸಚಿವರ ವಿರುದ್ಧ ಶಾಸಕರ ನಕಲಿ ಪತ್ರ ವೈರಲ್..!
ಇದರಿಂದ ಬೇಸರಗೊಂಡ ಬಿ.ಆರ್. ಪಾಟೀಲ್ ಅವರು, ಶಾಸಕಾಂಗ ಪಕ್ಷ ಕರೆಯುವಂತೆ ಕೋರುವುದು ಶಾಸಕನಾಗಿ ನನ್ನ ಅಧಿಕಾರ. ಇಷ್ಟಕ್ಕೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಹೇಳುತ್ತಾ ಬೇಸರದಿಂದ ಸಭೆಯಿಂದ ಹೊರ ನಡೆಯಲು ಮುಂದಾಗಿದ್ದು, ಆ ವೇಳೆ ಸಚಿವರಾದ ಶರಣಪ್ರಕಾಶ್ ಪಾಟೀಲ್ ಹಾಗೂ ಪ್ರಿಯಾಂಕ ಖರ್ಗೆ ಅವರು ಅವರನ್ನು ಸಮಾಧಾನ ಪಡಿಸಿ ಸಭೆಯಿಂದ ಹೊರ ಹೋಗದಂತೆ ತಡೆದರು ಎನ್ನಲಾಗಿದೆ.
ಈ ವೇಳೆ ಸಿದ್ದರಾಮಯ್ಯ ಅವರು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿಲ್ಲ. ಪತ್ರ ಬರೆಯುವುದಕ್ಕಿಂತ ನೇರವಾಗಿ ನನಗೆ ಹೇಳಬಹುದಿತ್ತು. ವಾಸ್ತವವಾಗಿ ಶಾಸಕಾಂಗ ಪಕ್ಷದ ಸಭೆಯನ್ನು ಈ ಹಿಂದೆಯೇ ಕರೆದಿದ್ದೆವು. ರಾಹುಲ್ ಗಾಂಧಿ ಅವರ ಕಾರ್ಯಕ್ರಮ ಬಂದಿದ್ದರಿಂದ ಅದನ್ನು ಮುಂದೂಡಲಾಗಿತ್ತು. ನೀವು ಸಭೆ ಕರೆಯುವಂತೆ ನನಗೆ ಹೇಳಿ, ಆಗಲೂ ನಾನು ಸಭೆ ಕರೆಯದಿದ್ದರೆ ಪತ್ರ ಬರೆಯಬಹುದಿತ್ತು. ಈಗ ಆಯ್ತು ಬಿಡಪ್ಪ ಎಂದು ಸಮಾಧಾನ ಪಡಿಸಿದರು ಎನ್ನಲಾಗಿದೆ.
ಇದಕ್ಕೆ ಬಿ.ಆರ್. ಪಾಟೀಲ್ ಅವರು, ಪತ್ರ ಬರೆದಿದ್ದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗುತ್ತದೆ ಎಂಬ ಕಲ್ಪನೆಯಿರಲಿಲ್ಲ. ತಪ್ಪು ಎನಿಸಿದರೆ ಕ್ಷಮಿಸಿ. ಆದರೆ, ಪತ್ರ ಬರೆದ ಮಾತ್ರಕ್ಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದರು ಎಂದು ಮೂಲಗಳು ಹೇಳಿವೆ.
ಐದು ಗ್ಯಾರಂಟಿಗಳ ಕಾರಣದಿಂದ ಈ ವರ್ಷ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
ಅಕ್ಕಿ, ಬೇಳೆ ಓಕೆ, ಅನುದಾನನೂ ಕೊಡಿ- ಶಿವಲಿಂಗೇಗೌಡ:
ಪತ್ರಕ್ಕೆ ಸಹಿ ಹಾಕಿದ ಮತ್ತೊಬ್ಬ ಶಾಸಕರಾದ ಅರಸೀಕೆರೆಯ ಶಿವಲಿಂಗೇಗೌಡ ಅವರು, ನಾನು ಕಾಂಗ್ರೆಸ್ಸಿಗೆ ಹೊಸಬ. ಪತ್ರಕ್ಕೆ ಸಹಿ ಹಾಕು ಎಂದು ಕೇಳಿದಾಗ ಇದು ಇಲ್ಲಿನ ಪದ್ಧತಿ ಇರಬಹುದು ಎಂದು ಸಹಿ ಹಾಕಿದೆ ಎಂದು ಸಬೂಬು ನೀಡಿದರು ಎನ್ನಲಾಗಿದೆ.
ಇದಲ್ಲದೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮವಾಗಿ ಜನರಿಗೆ ಅಕ್ಕಿ, ಬೇಳೆ ನೀಡಿದ್ದು ಅತ್ಯುತ್ತಮ ಕ್ರಮ. ಇದನ್ನು ಜನ ಮೆಚ್ಚಿದ್ದಾರೆ. ಆದರೆ, ನೀನು ಶಾಸಕನಾಗಿ ಏನು ತಂದಿರುವೆ ಎಂದು ನಮ್ಮನ್ನು ಕ್ಷೇತ್ರದ ಜನತೆ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಅಕ್ಕಿ, ಬೇಳೆ ಓಕೆ, ಜತೆಗೆ ಅನುದಾನವನ್ನು ಬಿಡುಗಡೆ ಮಾಡಿ ಎಂದು ಕೋರಿದರು ಎಂದು ಮೂಲಗಳು ಹೇಳಿವೆ.
