ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು ಸಚಿವ ಸುಧಾಕರ್ : ಅವರಿಗದು ಶೋಭೆಯಲ್ಲ ಎಂದ್ರು
ಮಾಜಿ ಸಿಎಂ ಸಿದ್ದರಾಮಯ್ಯಗೆ ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ. ಅವರ ಹೇಳಿಕೆಯೊಂದಕ್ಕೆ ಟಾಂಟ್ ನೀಡಿದ್ದಾರೆ
ಚಿಕ್ಕಬಳ್ಳಾಪುರ (ಡಿ.13): ದಲಿತರು, ಹಿಂದುಳಿದ ವರ್ಗದವರು ಯಾರು ಕೂಡ ಗೋಮಾಂಸ ತಿನ್ನುವುದಿಲ್ಲ. ಸುಖಾಸಮ್ಮನೆ ದಲಿತರನ್ನು ಹಾಗೂ ಹಿಂದುಳಿದ ವರ್ಗದವನ್ನು ಅಪಹಾಸ್ಯ ಮಾಡಿ ಅವರಿಗೆ ಗೋಮಾಂಸ ತಿನ್ನುತ್ತಾರೆಂಬ ಹಣೆಪಟ್ಟಿಕಟ್ಟಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ನಡೆದ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸರ್ವ ಸದಸ್ಯರ ಸಭೆಯ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಲಿತರು, ಹಿಂದುಳಿದ ವರ್ಗದವರು ಗೋಮಾಂಸ ತಿನ್ನುತ್ತಾರೆ. ಅದಕ್ಕೆ ಬಿಜೆಪಿಯವರು ನಿಷೇಧ ಹೇರಿದ್ದಾರೆಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ದಲಿತರನ್ನು ಹಾಗೂ ಹಿಂದುಳಿದ ವರ್ಗಗಳನ್ನು ಈ ರೀತಿ ಅಪಮಾನ ಮಾಡುವುದು ವಿಪಕ್ಷ ನಾಯಕರಿಗೆ ಶೋಭೆಯಲ್ಲ ಎಂದರು.
ಸಾರಿಗೆ ನಿಗಮಗಳು ನಷ್ಟದಲ್ಲಿವೆ:
ಸಾರಿಗೆ ನೌಕರರ ಮುಷ್ಕರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಡಾ.ಕೆ.ಸುಧಾಕರ್, ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಏಳೆಂದು ತಿಂಗಳಿಂದ ಸಾರಿಗೆ ನಿಗಮಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಸರ್ಕಾರದಿಂದಲೇ ನೌಕರರಿಗೆ ವೇತನ ಪಾವತಿ ಮಾಡಲು ಕ್ರಮ ವಹಿಸಲಾಗಿದೆ. ಬಾಕಿ ವೇತನವನ್ನು ಕೂಡಲೇ ನೀಡಲು ಸಚಿವ ಸಂಪುಟದಲ್ಲಿ ತಿರ್ಮಾನಿಸಲಾಗಿದೆ ಎಂದ ಸಚಿವರು, ಸಾರಿಗೆ ನೌಕರರ ಮುಷ್ಕರದ ಹಿಂದೆ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಇದ್ದಾರೆಂಬ ಆರೋಪಕ್ಕೆ, ಈ ಬಗ್ಗೆ ಮಾಹಿತಿ ಇಲ್ಲ ಎಂದರು.
ತಿಪ್ಪರಲಾಗ ಹಾಕಿದ್ರೂ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ ...
ಸಿದ್ದರಾಮಯ್ಯ ಹೇಳುವುದೆಲ್ಲ ಉಲ್ಟಾಆಗುತ್ತದೆ
ಗ್ರಾಪಂಗಳಲ್ಲಿ ಎಷ್ಟೇ ತಿಪ್ಪಲಾಗ ಹಾಕಿದರೂ ಬಿಜೆಪಿ ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷವೇ ಗೆಲ್ಲುವುದೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಕೆ.ಸುಧಾಕರ್, ನಾನು ಕೂಡ ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಏನು ಹೇಳುತ್ತಾರೆ. ಅದಕ್ಕೆ ವಿರುದ್ದವಾಗಿಯೆ ಫಲಿತಾಂಶ ಬರುತ್ತದೆ. ಕುಮಾರಸ್ವಾಮಿ ಅವರ ಅಪ್ಪನಾಣೆ ಸಿಎಂ ಆಗಲ್ಲ ಎನ್ನುತ್ತಿದ್ದರು. ಕುಮಾರಸ್ವಾಮಿಯೆ ಸಿಎಂ ಆಗಿ ಬಿಟ್ಟರು. ಈ ರೀತಿ ಎರಡು ಮೂರು ವಿಚಾರಗಳಲ್ಲಿ ಸಿದ್ದರಾಮ್ರಣ್ಣ ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗಿ ಫಲಿತಾಂಶ ಬರುತ್ತದೆ ಎಂದರು.
ಲಸಿಕೆ ಸರಬರಾಜಿಗೆ ಸಿದ್ಧತೆ : ಕೊರೊನಾ ಸೋಂಕಿಗೆ ಲಸಿಕೆ ಅಧಿಕೃತವಾಗಿ ಘೋಷಣೆಯಾಗಿ ಬಂದರೆ ಅದನ್ನು ನಾವು ಸರ್ಮಪಕವಾಗಿ ಸರಬರಾಜು ಮಾಡಲು ಎಲ್ಲಾ ರೀತಿಯ ಸಿದ್ದತೆಗಳು ಭರದಿಂದ ಸಾಗಿವೆ. ಲಸಿಕೆ ಲಭ್ಯವಾದ ಕೂಡಲೇ ಅದನ್ನು ಸರಬರಾಜು ಮಾಡಲಾಗುವುದೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.