ಕಾಟಾಚಾರಕ್ಕೆ ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಅವಿಶ್ವಾಸ : ಸಚಿವ ಎಸ್ಟಿಎಸ್
ಮಾಜಿ ಸಿಎಂ ಸಿದ್ದರಾಮಯ್ಯ ಕಾಟಾಚಾರಕ್ಕೆ ಬಿ ಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ ಸಚಿವ ಸೋಮಶೇಖರ್
ಮೈಸೂರು (ಸೆ.28): ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಕಾಟಾಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಕಾಟಾಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ನಿಜವಾಗಿಯೂ ಸರ್ಕಾರದ ವಿರುದ್ಧ ಇದ್ದಿದ್ದರೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡುತ್ತಿದ್ದರು. ಡಿವೈಡ್ ಆ್ಯಂಡ್ ರೂಲ್ ನಿಯಮದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕಿತ್ತು. ಆದರೆ, ಅವರು ಸುಮ್ಮನೆ ಕಾಟಾಚಾರಕ್ಕೆ ಧ್ವನಿಮತದ ಮೂಲಕ ಕೇಳಿದ್ದರು. ಆ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಬೆಲೆ ಇಲ್ಲ ಎಂದು ಕುಟುಕಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ವಿರೋಧ ಪಕ್ಷಗಳು ಆಧಾರ ರಹಿತ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿವೆ ಎಂದಿದ್ದಾರೆ.
'ದೇಶಕ್ಕೆ 6 ವರ್ಷಗಳ ಹಿಂದೆಯೇ ಕೋವಿಡ್ ಬಂದಿದೆ' ...
ಈ ಆರೋಪಗಳು ಯಾವುವು ಸಾಬೀತಾಗಿಲ್ಲ. ಅಂತೆ ಕಂತೆಗಳಿಗೆ ಯಾರೂ ಮಧ್ಯ ಪ್ರವೇಶಿಸುವುದಿಲ್ಲ. ಅಧಿಕೃತವಾಗಿ ದಾಖಲೆಗಳು ಇದ್ದರೆ ವಿರೋಧ ಪಕ್ಷದವರೇ ಬಿಡುಗಡೆ ಮಾಡಲಿ. ಬೇಕಿದ್ದಲ್ಲಿ ಲೋಕಾಯುಕ್ತಕ್ಕೆ ವಿರೋಧ ಪಕ್ಷದವರು ರಿಟ್ ಪಿಟಿಷನ್ ಹಾಕಲಿ ಎಂದು ಹೇಳಿದರು.