* ಹಿಜಾಬ್ ವಿಚಾರವಾಗಿ ತಟಸ್ಥ ನಿಲುವು ತಾಳಿದ ಸಚಿವ ಶ್ರೀರಾಮುಲು* ಹಿಜಾಬ್ ಬಗ್ಗೆ ಮಾತನಾಡಲು ಶ್ರೀರಾಮುಲು ಹಿಂಜರಿಕೆ* ಅಲ್ಪಸಂಖ್ಯಾತ ಮತಗಳಿಗೆ ಹೆದರಿ ಹೇಳಿಕೆ ಕೊಡಲಿಲ್ವಾ?

ಬಳ್ಳಾರಿ, (ಫೆ.05): ಕರ್ನಾಟಕದಲ್ಲಿ ಹಿಜಾಬ್ (hijab controversy) ಭಾರೀ ಸದ್ದು ಮಾಡುತ್ತಿದ್ದು, ಇದು ರಾಜಕೀಯ ನಾಯಕ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಎಬ್ಬಿಸಿರುವ ಶಾಲಾ ಮಕ್ಕಳು ಹಿಜಾಬ್ ಧರಿಸುವ ವಿಚಾರವಾಗಿ ಸಚಿವ ಶ್ರೀರಾಮುಲು (b sriramulu) ತಟಸ್ಥ ನಿಲುವು ತಾಳಿದ್ದು, ಆ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

Hijab Row ಹಿಜಾಬ್ ವಿವಾದ, ಮಹತ್ವದ ಸೂಚನೆ ಕೊಟ್ಟ ಕರ್ನಾಟಕ ಶಿಕ್ಷಣ ಇಲಾಖೆ

ಇಂದು(ಶನಿವಾರ) ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು, ಈ ಹಿಂದಿನಿಂದಲೂ ಹಿಜಾಬ್ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಜಾಬ್ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಿದೆ. ಈಗಾಗಲೇ ಗೃಹ ಸಚಿವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನಾ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ರಾಜಕೀಯವೇನೆ ಬಣ್ಣವೇನೆ ಇರಲಿ, ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿಕೊಳ್ಳೋ ಪ್ರಯತ್ನ ಮಾಡಬೇಕಿದೆ.. ಪರೋಕ್ಷವಾಗಿ ಅವರವರ ಸಂಸ್ಕೃತಿ ಅವರವರು ಪಾಲನೆ ಮಾಡಲಿ ಎಂದರು.

ಬಿಜೆಪಿ ಎಲ್ಲ ನಾಯಕರು ಹಿಜಾಬ್ ವಿರುದ್ಧ ಸಿಡಿದೆದಿದ್ದಾರೆ. ಆದ್ರೆ, ಹಿಜಾಬ್ ವಿರುದ್ಧ ಮಾತನಾಡಲು ಶ್ರೀರಾಮುಲು ಹಿಂಜರಿದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಶ್ರೀರಾಮುಲು ಚಿಂತನೆ ನಡೆಸಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರಿದ್ದಾರೆ. ಹೀಗಾಗಿ ಹಿಜಾಬ್ ಬಗ್ಗೆ ಮಾತನಾಡಲು ರಾಮುಲು ಹಿಂಜರಿದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬರುತ್ತೇವೆ ಅವಕಾಶ ಕೊಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ, ಇದಕ್ಕೆ ಅವಕಾಶ ಇಲ್ಲ ಎಂದು ಸರ್ಕಾರದ ಮಂತ್ರಿಗಳು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೇ ಹಿಜಾಬ್ ಧರಿಸುವುದಾದರೆ ಪಾಕಿಸ್ತಾನ, ಮದರಸಗಳಿಗೆ ಹೋಗಿ ಎಂದು ಹೇಳುತ್ತಿದ್ದಾರೆ.

ಬಿಜೆಪಿ ನಾಯಕರು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಿಜಾಬ್ ವಿರೋಧಿಸುತ್ತಿದ್ರೆ, ಇತ್ತ ಶ್ರೀರಾಮುಲು ಸರ್ಕಾರದ ಒಂದು ಭಾಗವಾಗಿ ಹಿಜಾಬ್‌ ಬಗ್ಗೆ ತಟಸ್ಥ ನಿಲುವು ತಾಳಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಅಲ್ಪಸಂಖ್ಯಾತರ ಮತಗಳಿಗೆ ಹೆದರಿ ಹೇಳಿಕೆ ಕೊಡಲಿಲ್ವಾ ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿವೆ.

ಕರಾವಳಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉದ್ಭವಿಸಿರುವ ‘ಹಿಜಾಬ್‌’ (ಶಿರವಸ್ತ್ರ) ವಿವಾದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೂ ಸಮವಸ್ತ್ರ(Uniform) ಪರಿಚಯಿಸಬಹುದಾ ಎಂಬ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಇಲಾಖೆ ಮುಂದಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರೊಂದಿಗೆ ಇಲಾಖೆಯ ಮುಂದಿನ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಪದೇ ಪದೇ ಇಂತಹ ವಿವಾದಗಳಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತೆರೆ ಎಳೆಯುವ ಅಗತ್ಯವಿದ್ದು, ಇದಕ್ಕಾಗಿ ಏನು ಕ್ರಮ ಕೈಗೊಳ್ಳಬಹುದು? ಶಾಲಾ ಹಂತದಲ್ಲಿ ಇರುವಂತೆ ಪಿಯು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ(Students) ಸಮವಸ್ತ್ರ ಪರಿಚಯಿಸಬಹುದಾ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸಲು ಇಲಾಖೆಯ ನಿರ್ದೇಶಕರಾದ ಸ್ನೇಹಲ್‌ ಸಿದ್ಧತೆ ಮಾಡಿಕೊಂಡಿದ್ದಾರೆ.

ಪಿಯು ಮಂಡಳಿಗೆ ಕಾಲೇಜಿನ ಪತ್ರ:
ಉಡುಪಿಯ(Udupi) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ(Muslim) ಸಮುದಾಯದ ವಿದ್ಯಾರ್ಥಿನಿಯರು ‘ಹಿಜಾಬ್‌’ ಧರಿಸಿ ಬರುವ ಕುರಿತು ಉಂಟಾಗಿರುವ ವಿವಾದ ಮೂರು ವಾರ ಕಳೆದರೂ ತಣ್ಣಗಾಗಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತ ಮಂಡಳಿ ನಡುವೆ ಹಟ-ಬಿಕ್ಕಟ್ಟು ಸೃಷ್ಟಿಸಿದೆ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ನಮ್ಮ ಹಕ್ಕು, ಹಿಜಾಬ್‌ ಧರಿಸಿ ತರಗತಿಗೆ ಬರಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಿ ಪಾಠ ಕೇಳುವ ನಿಯಮ ನಮ್ಮಲ್ಲಿಲ್ಲ ಎಂದು ಕಾಲೇಜು ಹೇಳಿದೆ. ಇದರಿಂದ ಬಿಕ್ಕಟ್ಟು ಮುಂದುವರೆದಿದೆ.

ಈ ಮಧ್ಯೆ, ಇಲಾಖೆ ಮೂಲಗಳ ಪ್ರಕಾರ ಕಾಲೇಜಿನ ಪ್ರಾಂಶುಪಾಲರು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ವಿಚಾರದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಅಂತಿಮವಾಗಿ ಬೋರ್ಡ್‌ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಲೇಜು ಕಾಯುತ್ತಿದೆ.