ಆಲಮಟ್ಟಿ ಜಲಾಶಯದಲ್ಲಿ 522 ಮೀಟರಗೆ ನೀರು ನಿಲ್ಲಿಸುವ ಕುರಿತಾಗಿ ತಾವೇ ನೀರಾವರಿ ಸಚಿವರಾಗಿದ್ದಾಗ ಸಂಪುಟದ ಉಪ ಸಮಿತಿಯಲ್ಲಿ ಠರಾವು ಮಾಡಿಸಿ ಈಗ ಕಾರಜೋಳ ನಾಟಕ ಮಾಡುತ್ತಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪೂರ

ಬಾಗಲಕೋಟೆ(ಡಿ.25):  ಸತ್ಯ ಹರಿಶ್ಚಂದ್ರನಂತೆ ಮತ್ತೊಬ್ಬರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಚಿತ್ರದುರ್ಗದ ಸಂಸದರು ತಾವು ನೀರಾವರಿ ಮಂತ್ರಿಗಳಾಗಿದ್ದಾಗ ಮಾಡಿರುವುದು ಸಾಕಷ್ಟಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಪರೋಕ್ಷವಾಗಿ ಮಾಜಿ ಸಚಿವರಾದ ಗೋವಿಂದ ಕಾರಜೋಳಗೆ ತಿವಿದಿದ್ದಾರೆ.

Add Asianetnews Kannada as a Preferred SourcegooglePreferred

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ನಿಮ್ಮ ಬಂಡವಾಳವೂ ಸಾಕಷ್ಟಿದೆ. ಅದನ್ನೆಲ್ಲ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆಲಮಟ್ಟಿ ಜಲಾಶಯದಲ್ಲಿ 522 ಮೀಟರಗೆ ನೀರು ನಿಲ್ಲಿಸುವ ಕುರಿತಾಗಿ ತಾವೇ ನೀರಾವರಿ ಸಚಿವರಾಗಿದ್ದಾಗ ಸಂಪುಟದ ಉಪ ಸಮಿತಿಯಲ್ಲಿ ಠರಾವು ಮಾಡಿಸಿ ಈಗ ಕಾರಜೋಳ ನಾಟಕ ಮಾಡುತ್ತಿದ್ದಾರೆ. ನಿಮ್ಮ ನಾಟಕ ಜನರಿಗೆ ಗೊತ್ತಿದೆ. ಬೊಮ್ಮಾಯಿ ಅವರನ್ನು ಕರೆದುಕೊಂಡು ಬಂದು 524 ಮೀ.ವ್ಯಾಪ್ತಿಯ ಸಂತ್ರಸ್ತರಿಗೂ ಪರಿಹಾರ ಕೊಡಿಸಿದ್ದೇನೆ ಎಂದು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದ ತಿಮ್ಮಾಪೂರ, ನಿಮ್ಮ ಬಂಡವಾಳ ಬಹಳಷ್ಟಿದೆ. ಬಿಚ್ಚಿಡಬೇಕಾಗುತ್ತದೆ ಹುಷಾರ್ ಎಂದರು.

ಮಾಧ್ಯಮದವರು ಇಲ್ಲದಿದ್ರೆ ಸಿ.ಟಿ. ರವಿ ಅವರನ್ನ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡ್ತಿದ್ದರು:

ಅಂಬೇಡ್ಕರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಅಸಭ್ಯ ಪದ ಬಳಸಿ ನಿಂದಿಸಿರುವ ಸಿ.ಟಿ.ರವಿ ಅವರನ್ನು ಬಿಜೆಪಿಯಿಂದ ಹೊರಹಾಕಬೇಕು ಎಂದ ಸಚಿವರು, ಅಮಿತಾ ಶಾ ಹಾಗೂ ಸಿ.ಟಿ.ರವಿ ಮನಸ್ಥಿತಿ ಒಂದೇ ಆಗಿದೆ ಎಂದು ಜರಿದರು. ಅಧಿಕಾರದ ದಾಹಕ್ಕೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಬಿಜೆಪಿ, ಮನು ವಾದ ತರುವ ಪ್ರಯತ್ನ ಮಾಡುತ್ತಿದ್ದು, ದೇಶ ವಿಭಜನೆಗೆ ಹುನ್ನಾರ ನಡೆಸಿದೆ. ದೇಶದ ಜನ ಇದನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಒಂದು ದಿನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಿ.ಟಿ.ರವಿ ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ: ಸಚಿವ ಆರ್.ಬಿ.ತಿಮ್ಮಾಪೂರ

ಬೆಳಗಾವಿಯಲ್ಲಿ ಡಿ.26 ಹಾಗೂ 27 ರಂದು ನಡೆಯುವ ಎಐಸಿಸಿ ಶತಮಾನೋತ್ಸವದ ಅಧಿವೇಶನದ ಕುರಿತಾಗಿ ಮಾತನಾಡಿ, ಇದು ಐತಿಹಾಸಿಕ ಸಮಾವೇಶವಾಗಲಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷತೆ ವಹಿಸುವ ಸಮಾವೇಶ ರಾಜ್ಯದ ಹೆಮ್ಮೆ ಎನಿಸಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಡಿ.26ರಂದು ಬೆಳಗಾವಿಯಲ್ಲಿ ನಡೆಯುವ ಎಐಸಿಸಿ ಅಧಿವೇಶನದಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳಲಿದ್ದು, ಪಕ್ಷದ ಕಾರ್ಯಕಾರಿ ಸಮಿತಿ ಯೂ ನಡೆಯಲಿದೆ. ಡಿ.27ರಂದು ನಡೆಯುವ ಸಾರ್ವ ಜನಿಕ ಸಭೆಯಲ್ಲಿ ಜಿಲ್ಲೆಯಿಂದ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿ ಸುವರು ಎಂದು ಹೇಳಿದರು.