ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಅಧ್ಯಕ್ಷರು. ದೂರು ಕೊಟ್ಟಿರೋದು ಅವರದ್ದೇ ಪಕ್ಷದ ಉಪಾಧ್ಯಕ್ಷರು. ಅದನ್ನ ಅವ್ರೆ ಬಗೆಯರಿಸಿಕೊಳ್ಳುತ್ತಾರೆ‌ ಎಂದು ಹೇಳಿದ ಸಚಿವ ರಾಮಲಿಂಗಾ ರೆಡ್ಡಿ 

ಚನ್ನಪಟ್ಟಣ(ಅ.04): ಬೈ ಎಲೆಕ್ಷನ್‌ಗೂ ಚನ್ನಪಟ್ಟಣ ಕಾಮಗಾರಿಗಳಿಗೂ ಯಾವುದೇ ಸಂಬಂಧವಿಲ್ಲ‌. ಮಾಜಿ ಸಂಸದ ಡಿ.ಕೆ. ಸುರೇಶ್ ಕಳೆದ 11 ವರ್ಷದಲ್ಲಿ ಸಾಕಷ್ಟು ಅನುದಾನ ತಂದಿದ್ರೂ. ನಾವು ಸಭೆ ಮಾಡಿದಾಗ ಕೂಡ ಜನರು ಸಾಕಷ್ಟು ಸಮಸ್ಯೆಗಳನ್ನ ಹೇಳಿಕೊಂಡಿದ್ರೂ‌‌. ಸಮಸ್ಯೆ ಆಲಿಸಿದ ಡಿ.ಕೆ. ಶಿವಕುಮಾರ್ ಹಾಗೂ ನಾನು ಶಂಕುಸ್ಥಾಪನೆ ಮಾಡುತ್ತಿದ್ದೇವೆ. ಈಗಾಗಲೇ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ‌‌. ಕೆಲಸ ಕೂಡ ಪ್ರಾರಂಭವಾಗತ್ತೆ‌. ಆದ್ರೆ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. 

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಜೀವ ಬೆದರಿಕೆ ಕುರಿತು ಎಫ್ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ತಾಲೂಕಿನ ಹುಲುವಾಡಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಅಧ್ಯಕ್ಷರು. ದೂರು ಕೊಟ್ಟಿರೋದು ಅವರದ್ದೇ ಪಕ್ಷದ ಉಪಾಧ್ಯಕ್ಷರು. ಅದನ್ನ ಅವ್ರೆ ಬಗೆಯರಿಸಿಕೊಳ್ಳುತ್ತಾರೆ‌ ಎಂದು ಹೇಳಿದ್ದಾರೆ. 

ಚನ್ನಪಟ್ಟಣ ಉಪಚುನಾವಣೆ: ನಾನೇ ಅಭ್ಯರ್ಥಿ, ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ, ಡಿಕೆಶಿ

ಸಿಎಂ ಸಿದ್ದರಾಮಯ್ಯ ಪರ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಬ್ಯಾಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಎಫ್ಐಆರ್ ಆದ ತಕ್ಷಣ ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ಅವರು ಹೇಳುತ್ತಾರೆ. ಕುಮಾರಸ್ವಾಮಿ ರಾಜೀನಾಮೆ ಕೇಳಿಲ್ಲ ಅಂತ ಹೇಳುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡೋದಾದ್ರೆ ಕೇಂದ್ರದ ಮಂತ್ರಿ, ಮಾಜಿ ಸಚಿವರು, ಶಾಸಕರು ರಾಜೀನಾಮೆ ಕೊಡಬೇಕಾಗುತ್ತದೆ ಎಂದಿದ್ದಾರೆ. ನ್ಯಾಯಯುತವಾಗಿ ಜಿ.ಟಿ. ದೇವೆಗೌಡರು ಹೇಳಿರೋದು ಸರಿಯಾಗಿದೆ‌‌. ಜಿಟಿಡಿ ಅವರನ್ನ ನಾವು ಕಾಂಗ್ರೆಸ್ ಕರೆಯೋದಿಲ್ಲ. ಅವರು ಜೆಡಿಎಸ್ ನಲ್ಲಿ ಇದ್ದಾರೆ, ಮುಂದೇನೂ ಇರಬಹುದು. ಈ ಹಿಂದೆ ಯಾರು ಅವರನ್ನ ಭೇಟಿ ಮಾಡಿದ್ರೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 

ಇನ್ನು ಬಿಎಂಟಿಸಿ ಡ್ರೈವರ್, ಕಂಡಕ್ಟರ್ ಗೆ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಬಿಎಂಟಿಸಿ ಬಸ್ ಓಡಾಟ ಬಂದು 26 ವರ್ಷಗಳು ಕಳೆದಿವೆ‌. ಅಂದಿನಿಂದ ಇಂದಿನವರೆಗೂ ಈ ತರಹದ ಘಟನೆ ನಡೆದಿಲ್ಲ. ಕ್ಷುಲ್ಲಕ ಕಾರಣಕ್ಕೆ ಮೊನ್ನೆಯೊಬ್ಬ ಹಲ್ಲೆ ಮಾಡಿದ್ದ. ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌. ಆತನಿಗೆ ಜೈಲು ಶಿಕ್ಷೆಯಾದರೆ ಮುಂದೆ ಎಲ್ಲರೂ ಬುದ್ಧಿ ಕಲಿಯುತ್ತಾರೆ‌ ಎಂದು ಹೇಳಿದ್ದಾರೆ.