ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳಿದ್ದಾಗಿನ ನಾಲ್ವರು ಮುಖ್ಯಮಂತ್ರಿಗಳು ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಕಳುಹಿಸಿದ್ದರು ಎಂದು ಜನರಿಗೆ ಉತ್ತರ ಕೊಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಬೆಂಗಳೂರು (ಅ.22): ಬಿಹಾರ ಚುನಾವಣೆಗೆ ಕರ್ನಾಟಕ ಸರ್ಕಾರದಿಂದ ಹಣ ಹೋಗುತ್ತಿದೆ ಎಂದು ಕಪೋಲಕಲ್ಪಿತವಾಗಿ ಆರೋಪಿಸುತ್ತಿರುವ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳಿದ್ದಾಗಿನ ನಾಲ್ವರು ಮುಖ್ಯಮಂತ್ರಿಗಳು ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಕಳುಹಿಸಿದ್ದರು ಎಂದು ಜನರಿಗೆ ಉತ್ತರ ಕೊಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಬಿಜೆಪಿ ಆರೋಪಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಆರೋಪ ಹಾಸ್ಯಾಸ್ಪದ. ಚುನಾವಣೆಗೆ ಅಕ್ರಮ, ಭ್ರಷ್ಟಾಚಾರದ ಹಣ ಬಳಸುವುದು ಬಿಜೆಪಿಯವರ ಜಾಯಮಾನ, ಕಾಂಗ್ರೆಸ್‌ನದ್ದಲ್ಲ ಎಂದರು. 2008ರಿಂದ 2013 ಮತ್ತು 2019ರಿಂದ 2023ರ ಅವಧಿಯಲ್ಲಿ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿತ್ತು. ಆಗ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಚುನಾವಣೆಗಳು ನಡೆದವು.

ಆಗ ಕರ್ನಾಟಕದ ಸಂಪತ್ತನ್ನು ಆ ಚುನಾವಣೆಗಳಿಗೆ ನೀವೆಲ್ಲರೂ ಹಂಚಿ ಕಳುಹಿಸಿದ್ದಿರಾ? ರಾಜ್ಯದ ಜನರ ಮುಂದೆ ಉತ್ತರಿಸುವ ಧೈರ್ಯ ನಿಮಗಿದೆಯೇ ಎಂದು ಅವರು ಪ್ರಶ್ನಿಸಿದರು. ನಮ್ಮ ಸರ್ಕಾರ ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಖಾತೆಗೆ ನೇರವಾಗಿ ಹಣ ಜಮೆ ಮಾಡಿ ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸುತ್ತಿದೆ. ಬಿಜೆಪಿಯವರಂತೆ ಚುನಾವಣಾ ಬಾಂಡ್‌ಗಳ ಹೆಸರಲ್ಲಿ ಕಪ್ಪು ಹಣ ಬಿಳಿ ಹಣ ಮಾಡುವ ಚಾಳಿ ನಮಗಿಲ್ಲ

ದೇಗುಲ ಅಭಿವೃದ್ಧಿಗೆ ಪಣ

ಯಾವುದೇ ಸ್ವಂತ ಆದಾಯವಿಲ್ಲದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿ-ವರ್ಗದ 34,165 ದೇವಾಲಯಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಮರ್ಪಕ ನಿರ್ವಹಣೆ ಕುರಿತು ಸಲಹೆ ನೀಡಲು ಏಳು ಮಂದಿ ಸದಸ್ಯರನ್ನೊಳಗೊಂಡ ವಿಜನ್‌ ಗ್ರೂಪ್‌ ರಚನೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ 34,563 ದೇವಾಲಯಗಳಿದ್ದು, ಇವುಗಳಲ್ಲಿ ಪ್ರವರ್ಗ ‘ಎ’ 205, ಪ್ರವರ್ಗ ಬಿ-193 ಮತ್ತು ಪ್ರವರ್ಗ ‘ಸಿ’ ಯಲ್ಲಿ 34,165 ದೇವಾಲಯಗಳಿವೆ. ಈ ಪೈಕಿ ‘ಸಿ’ ವರ್ಗದ ದೇವಾಲಯಗಳಿಗೆ ಸ್ವಂತ ಆದಾಯ ಇಲ್ಲ.

ಇದರಿಂದ ಬಹುತೇಕ ದೇವಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸ್ಥಿತಿಯಲ್ಲಿವೆ. ಈ ದೇವಾಲಯಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರತಿ ವರ್ಷ ನಿರ್ವಹಣೆ ಅಗತ್ಯವಿರುವ ಕನಿಷ್ಠ 1,000 ದಿಂದ 1,500 ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ 34,165 ‘ಸಿ’ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ವಾಸ್ತವ ಸ್ಥಿತಿಗತಿ ಪರಿಶೀಲಿಸಿ ಅವುಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರನ್ನೊಳಗೊಂಡ ವಿಜನ್‌ ಗ್ರೂಪ್‌ ರಚಿಸಿ ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಆದೇಶ ಹೊರಡಿಸಿದೆ.