ಡಿಕೆಶಿ ಕನಸಿಗೆ ಮತದಾರರ ಬ್ರೇಕ್‌| ಸಿದ್ದು ಸ್ಥಾನ ಬದಲಾಗುವ ಸಾಧ್ಯತೆ| ಬೆಂಗಳೂರಿನಲ್ಲಿ ಬಿಜೆಪಿ ಗಟ್ಟಿಯಾಗಿದೆ ಎಂಬ ಸಂದೇಶ ಈ ಫಲಿತಾಂಶದಿಂದ ದೊರೆತಿದೆ| ಮುಂದೆ ಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದಕ್ಕೆ ಇದೊಂದು ದಿಕ್ಸೂಚಿ ಎಂದ ಆರ್‌. ಅಶೋಕ್‌| 

ಬೆಂಗಳೂರು(ನ.11):  ಒಕ್ಕಲಿಗ ಸಮುದಾಯ ಬಿಜೆಪಿ ಪರವಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಇಲ್ಲ ಎಂಬ ಸಂದೇಶವನ್ನು ಈ ಚುನಾವಣಾ ಫಲಿತಾಂಶ ನೀಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಾರು ಪ್ರಬಲರು ಎಂಬುದು ಗೊತ್ತಾಗಿದೆ. ಡಿ.ಕೆ.ಶಿವಕುಮಾರ್‌ ಅವರಿಗೆ ಗಡಿ ಹಾಕಿದ್ದೇವೆ. ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಉಪ ಚುನಾವಣೆಯಲ್ಲಿ ಗೆದ್ದು, ದೊಡ್ಡ ಮಟ್ಟಕ್ಕೆ ಹೋಗುತ್ತೇನೆ ಎಂದು ಶಿವಕುಮಾರ್‌ ಕನಸು ಕಂಡಿದ್ದರು. ಪ್ರಾರಂಭದಲ್ಲೇ ಅವರ ವೇಗಕ್ಕೆ ಕಡಿವಾಣ ಹಾಕಿದ್ದೇವೆ. ಶಿವಕುಮಾರ್‌ ಆಟ ಬೆಂಗಳೂರಿನಲ್ಲಿ ನಡೆಯಲ್ಲ. ಈ ಫಲಿತಾಂಶದಿಂದ ಬಿಜೆಪಿ ನಾಯಕತ್ವ ಅಲ್ಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಥಾನ ಬದಲಾಗುವ ಸಾಧ್ಯತೆ ಇದೆ ಎಂದು ವ್ಯಂಗ್ಯವಾಡಿದರು.

RR ನಗರ : ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡರಾ ಡಿಕೆಶಿ?

ಬೆಂಗಳೂರಿನಲ್ಲಿ ಬಿಜೆಪಿ ಗಟ್ಟಿಯಾಗಿದೆ ಎಂಬ ಸಂದೇಶ ಈ ಫಲಿತಾಂಶದಿಂದ ದೊರೆತಿದೆ. ಮುಂದೆ ಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದಕ್ಕೆ ಇದೊಂದು ದಿಕ್ಸೂಚಿ ಎಂದರು.
ಕೊಳೆಗೇರಿ ಪ್ರದೇಶದಲ್ಲಿ ಮುನಿರತ್ನ ಅವರಿಗೆ ಹೆಚ್ಚು ಮತ ದೊರೆತಿದೆ. ಕಾಂಗ್ರೆಸ್‌ ಮಾಜಿ ಶಾಸಕ ಬಾಲಕೃಷ್ಣ ಅಥವಾ ಚೆಲುವರಾಯಸ್ವಾಮಿ ಅಂತಹವರನ್ನು ಕಣಕ್ಕೆ ಇಳಿಸಿದ್ದರೆ ಸ್ವಲ್ಪ ಮತ ತೆಗೆದುಕೊಳ್ಳುತ್ತಿದ್ದರು. ಆದರೆ ನಮಗೆ ಕಾಂಗ್ರೆಸ್‌ ಅಭ್ಯರ್ಥಿ ಸವಾಲನ್ನೇ ನೀಡಲಿಲ್ಲ ಎಂದು ತಿಳಿಸಿದರು.