ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದ ಸಚಿವ ಆರ್‌.ಅಶೋಕ್‌ 

ಬೆಂಗಳೂರು(ಜ.13):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ರೀತಿ ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೀನಾಯ ಸೋಲು ಕಂಡರು. ಚಾಮುಂಡೇಶ್ವರಿ ಕ್ಷೇತ್ರವನ್ನು ಯಾಕೆ ತೊರೆದರು ಎಂದು ಜನರು ಕೂಡ ಕೇಳುತ್ತಿದ್ದಾರೆ. ಒಂದು ವೇಳೆ ಅಭಿವೃದ್ಧಿ ಕಾರ್ಯ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು? ನಂತರ ಬಾದಾಮಿಗೆ ಹೋದರು. ಅಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನ ಯಾಕೆ ಓಡಿಸುತ್ತಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

'ಸಿದ್ದು ನಿಜಕನಸುಗಳು' ಕೃತಿ ಬಿಡುಗಡೆ ವಿಚಾರ: ಬಿಜೆಪಿ ನಾಯಕರಿಗೆ ಸವಾಲು ಹಾಕಿ ಸಿದ್ದರಾಮಯ್ಯ ಸರಣಿ ಟ್ವೀಟ್

ಸಿದ್ದರಾಮಯ್ಯ ಅವರು ಪದೇ ಪದೇ ಕ್ಷೇತ್ರ ಪಲಾಯನ ಯಾಕೆ ಮಾಡುತ್ತಿದ್ದಾರೆ? ಒಂದು ಬಾರಿ ಗೆದ್ದರೂ ಜನರ ಪ್ರೀತಿ, ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಮುಖಂಡರಾದ ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ ಅವರನ್ನು ಸೋಲಿಸಿದರು. ಇಬ್ಬರೂ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಎಚ್ಚರಿಕೆಯಿಂದ ಇರಬೇಕು. ಒಂದು ಕಡೆ ನಿಂತು ರಾಜಕಾರಣ ಮಾಡಬೇಕು. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇಟ್ಟು, ನಿರ್ದಿಷ್ಟಕೆಲಸ ಮಾಡಿಕೊಡುತ್ತೇನೆ ಎಂಬುದಾಗಿ ಹೇಳಿ ಮಾಡಿಕೊಡಬೇಕು. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರಕ್ಕಾಗಿ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.