Asianet Suvarna News Asianet Suvarna News

ಎಚ್‌ಡಿಕೆ ತೋರಿಸಿದ್ದ ಪೆನ್‌ಡ್ರೈವ್‌ ಎಲ್ಲಿ ಹೋಯ್ತು?: ಪ್ರಿಯಾಂಕ್‌ ಖರ್ಗೆ

‘ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಪ್ರದರ್ಶಿಸಿದ ಪೆನ್‌ಡ್ರೈವ್‌ ಎಲ್ಲೋಯ್ತು, ಅದರಲ್ಲಿ ನಿಜವಾಗಲೂ ತಾವು ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ಕೊಡಲಿ. ನಾವು ತನಿಖೆ ಮಾಡಿಸುತ್ತೇವೆ’ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. 

Minister Priyank Kharge Slams On HD Kumaraswamy gvd
Author
First Published Jul 30, 2023, 4:45 AM IST | Last Updated Aug 1, 2023, 11:27 AM IST

ಬೆಂಗಳೂರು (ಜು.30): ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಪ್ರದರ್ಶಿಸಿದ ಪೆನ್‌ಡ್ರೈವ್‌ ಎಲ್ಲೋಯ್ತು, ಅದರಲ್ಲಿ ನಿಜವಾಗಲೂ ತಾವು ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ಕೊಡಲಿ. ನಾವು ತನಿಖೆ ಮಾಡಿಸುತ್ತೇವೆ’ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಸದನದಲ್ಲಿ ಪೆನ್‌ಡ್ರೈವ್‌ ತೋರಿಸಿ ನಂತರ ಸುಮ್ಮನಾದರು. ಈ ರೀತಿ ಮಾಡುವ ಮೂಲಕ ಸರ್ಕಾರವನ್ನು ಹೆದರಿಸೋಕೆ, ಬ್ಲಾಕ್‌ಮೇಲ್‌ ಮಾಡೋದಕ್ಕೆ ಪ್ರಯತ್ನ ಪಟ್ರಾ? ಇಲ್ಲಾ ವಿರೋಧ ಪಕ್ಷದ ನಾಯಕ ಆಗೋಕೆ ಪ್ರಯತ್ನ ಮಾಡಿದರಾ ಎಂಬುದನ್ನು ಹೇಳಲಿ. ಇಲ್ಲ ಅದರಲ್ಲಿ ಏನಾದ್ರೂ ಸಾಕ್ಷ್ಯಾಧಾರಗಳಿದ್ರೆ ಕೊಡಲಿ ತನಿಖೆ ಮಾಡಿಸುತ್ತೇವೆ’ ಎಂದರು.

‘ಕುಮಾರಸ್ವಾಮಿ ಅವರಲ್ಲಿ ಇರುವ ಪೆನ್‌ಡ್ರೈವ್‌ನಲ್ಲಿ ಏನಿದೆ ಹಾಗೂ ಅದರಲ್ಲಿರುವ ಕಂಟೆಂಟ್‌ ಏನು ಎಂಬುವುದರ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಗರು ತಾನೆ ಹೇಳಿದ್ದು ಪೆನ್‌ ಡ್ರೈವ್‌ ನಲ್ಲಿ ಏನೇನೋ ಇದೆ ಅಂತ. ಆದರೆ ಬೆಂಗಳೂರಿನ ಎಸ್‌ಪಿ ರೋಡ್‌ಗೆ ಹೋದರೆ ಅಂತಹ ಸಾವಿರಾರು ಪೆನ್‌ಡ್ರೈವ್‌ ಸಿಗುತ್ತದೆ. ಯಾರು ಬೇಕಾದ್ರೂ ತೋರಿಸಬಹುದು. ಆದರೆ, ಸಾಕ್ಷಿ ಏನಿದೆ ಅಂತ ತೊರಿಸುವುದು ಮುಖ್ಯವಾಗುತ್ತದೆ. ಅಂದು ಪಿಎಸ್‌ಐ ಹಗರಣದ ಸಾಕ್ಷ್ಯ ಕೇಳಿದ್ರು. ನಾನು ಸಾಕ್ಷ್ಯ ತೊರಿಸಿದ್ರೆ, ‘ಪ್ರಿಯಾಂಕ್‌ ಖರ್ಗೆ ಹುಷಾರಾಗಿರಿ, ತನಿಖೆಯಲ್ಲಿ ನಿಮ್ಮ ಹೆಸರು ಬರುತ್ತೆ’ ಎಂದು ಹೇಳಿದರು. ಅಂದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ತನಿಖೆಗೆ ಕೊಡಬಹುದಿತ್ತು. ಈಗ ನಾವು ಕೊಟ್ಟರೆ ರಾಜಕೀಯ ದ್ವೇಷ ಅಂತಿದ್ದಾರೆ’ ಎಂದರು.

ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ತರುವ ಚಿಂತನೆ: ಸಚಿವ ಪರಮೇಶ್ವರ್‌

ಬಿಜೆಪಿಗೆ ಪ್ರಿಯಾಂಕ್‌ ಟಾಂಗ್‌: ‘ಉಡುಪಿ ಪ್ಯಾರಾ ಮೆಡಿಕಲ್‌ ಕಾಲೇಜಿನ ವಿಡಿಯೋ ಪ್ರಕರಣದಲ್ಲಿ ಯಾವುದೇ ರೀತಿಯ ಕ್ರಿಮಿನಲ್‌ ಉದ್ದೇಶ ಇರಲಿಲ್ಲ ಹಾಗೂ ಎಲ್ಲೂ ವಿಡಿಯೋನೂ ಸಿಕ್ಕಿಲ್ಲ ಎಂದು ಸ್ವತಃ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಹಾಗೂ ಪೊಲೀಸ್‌ ಅಧಿಕಾರಿಗಳು ಹೇಳಿದ್ದರೂ ಬಿಜೆಪಿಗೆ ನಂಬಿಕೆ ಇಲ್ಲ. ಹಾಗಿದ್ದರೆ ಬಿಜೆಪಿಯವರೇ ವಿಡಿಯೋ ಎಲ್ಲಿದೆ ಎಂದು ತೋರಿಸಲಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣ ನಡೆದಿರುವ ಕಾಲೇಜು ವ್ಯಾಪ್ತಿಯಲ್ಲಿ ಬಿಜೆಪಿ ಕಾಲದ ಅಧಿಕಾರಿಗಳೇ ಈಗಲೂ ಇದ್ದಾರೆ. 

ಸ್ವತಃ ಮಹಿಳಾ ಆಯೋಗದ ಸದಸ್ಯೆಯೂ ವಿಡಿಯೋ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆದರೂ, ಬಿಜೆಪಿ ವಿಡಿಯೋ ಓಡಾಡುತ್ತಿದೆ ಎಂದು ಆರೋಪಿಸುವುದು ಬಿಟ್ಟಿಲ್ಲ. ಹಾಗಾದರೆ ಬಿಜೆಪಿಯವರು ಯಾರನ್ನು ನಂಬುತ್ತಾರೆ ಎಂಬುದನ್ನು ಮೊದಲು ಹೇಳಲಿ. ಪೊಲೀಸರು, ಮಹಿಳಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ವಿಡಿಯೋವನ್ನು ತೊರಿಸಲಿ, ವಿಡಿಯೋ ಯಾವ ಸಾಮಾಜಿಕ ಜಾಲತಾಣದಲ್ಲಿದೆ ಎಂದು ತಿಳಿಸಲಿ’ ಎಂದು ಸವಾಲು ಹಾಕಿದರು. ‘ಬಿಜೆಪಿಗರು ವಿಷಯಾಧಾರಿತ ಚರ್ಚೆ ಮಾಡುತ್ತಿಲ್ಲ. ವರ್ಗಾವಣೆ ದಂಧೆ ಅಂದ್ರು, ಪೆನ್‌ ಡ್ರೈವ್‌ ಇದೆ ಅಂದ್ರು. ಹಿಂದೆಯೂ ಆಜಾನ್‌, ಹಲಾಲ್‌, ಜಟ್ಕಾಕಟ್‌, ಹಿಜಾಬ್‌ ಇನ್ನಿತರೆ ವಿಚಾರಗಳಲ್ಲಿ ಹುಯಿಲೆಬ್ಬಿಸಿದರು. 

ಹವಾಮಾನ ಆಧಾರಿತ ಬೆಳೆ ಬಗ್ಗೆ ಜಾಗೃತಿ ಮೂಡಿಸಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಇವರಿಗೆ ಇಂತಹ ವಿಚಾರಗಳನ್ನು ಬಿಟ್ಟು ಬೇರೇನು ಸಿಗುತ್ತಿಲ್ಲ. ಬಿಜೆಪಿಯಲ್ಲಿ ಗೊಂಗಲಗಳಾದಾಗೆಲ್ಲಾ ಇಂತಹ ವಿಚಾರ ಕೈಗೆತ್ತಿಕೊಳ್ತಾರೆ’ ಎಂದು ಆರೋಪಿಸಿದರು. ‘ಬಿಜೆಪಿಯವರು ತಮ್ಮ ಆಡಳಿತದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ದಯವಿಟ್ಟು ನಮಗೆ ಆಡಳಿತ ಮಾಡಲು ಅವಕಾಶ ನೀಡಬೇಕು. ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿ. ಆಡಳಿತದಲ್ಲಿ ತಪ್ಪುಗಳಾಗಿದ್ರೆ ತೋರಿಸಲಿ. ನಿಜವಾದ ಪ್ರತಿಭಟನೆ ಮಾಡಲಿ ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದ ಹತ್ತಿರ ಮಾತನಾಡುವ ಧೈರ್ಯ ನಮಗಿದೆ. ನಮ್ಮನ್ನು ಬೆಂಬಲಿಸಿ, ಕೇಂದ್ರದ ಅನುದಾನ ತರೋಣ. ನನ್ನ ಇಲಾಖೆಗೆ 1300 ಕೋಟಿ ರು. ಸೇರಿ ರಾಜ್ಯಕ್ಕೆ ಹತ್ತಾರು ಸಾವಿರ ಕೋಟಿ ರು. ಅನುದಾನ ಬರಬೇಕು. ಅದನ್ನು ತಂದು ನಾಡಿನ ಜನರಿಗೆ ಒಳಿತು ಮಾಡೋಣ ಸಹಕರಿಸಿ’ ಎಂದು ಪ್ರಿಯಾಂಕ್‌ ಖರ್ಗೆ ಸಲಹೆ ನೀಡಿದರು.

News Hour With HD Kumaraswamy

 

Latest Videos
Follow Us:
Download App:
  • android
  • ios