ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದರು. ಇದೀಗ ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ದಕ್ಷಿಣದ ಗಾಳಿ ಉತ್ತರಕ್ಕೆ ಬೀಸಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.  

ಮಂಡ್ಯ (ಡಿ.04): ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದರು. ಇದೀಗ ದಕ್ಷಿಣ ಭಾರತದಲ್ಲಿ ಬಿಜೆಪಿ ಮುಕ್ತವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ದಕ್ಷಿಣದ ಗಾಳಿ ಉತ್ತರಕ್ಕೆ ಬೀಸಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಚುನಾವಣೆ ಹದಿನೈದು ದಿನಗಳಿರುವಾಗ ಕಾಂಗ್ರೆಸ್‌ಗೆ ದೊಡ್ಡ ವ್ಯತ್ಯಾಸ ಇತ್ತು. ಕೆಲ‌ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಇರಲಿಲ್ಲ. ಈಗ ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇದೆ ಎಂದು ತೆಲಂಗಾಣದ ಮೂಲಕ ಗೊತ್ತಾಗಿದೆ. ತೆಲಂಗಾಣದ ಮತದಾರರಿಗೆ ಧನ್ಯವಾದಗಳು ಎಂದು ಮಂಡ್ಯದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Add Asianetnews Kannada as a Preferred SourcegooglePreferred

ನಾಲ್ಕು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಎರಡರಲ್ಲಿ ಕಾಂಗ್ರೆಸ್ ಬರುತ್ತೆ ಎಂದು ಸಮೀಕ್ಷೆ ಹೇಳಿತ್ತು. ರಾಜಸ್ತಾನದಲ್ಲಿ ನಮ್ಮ ಪಕ್ಷದ ಸರ್ಕಾರವೇ ಇತ್ತು. ಅಲ್ಲಿ‌ ಸ್ವಲ್ಪ ವ್ಯತ್ಯಾಸವಾಗಿದೆ. ತೆಲಂಗಾಣ ಗೆದ್ದಿರೋದು 4 ರಾಜ್ಯ ಗೆದ್ದಂತೆಯೇ ಆಗಿದೆ. ಬಿಜೆಪಿ ಮತ್ತು ಬಿಆರ್‌ಎಸ್ ಅವರು ಒಂದಷ್ಟು ಆಸೆ ತೋರಿಸಿದ್ದರು. ಆದರೂ ಮತದಾರರು ಕಾಂಗ್ರೆಸ್‌ ಕೈಹಿಡಿದಿದ್ದಾರೆ. ಚುನಾವಣೆ ಮುಗಿದ ಬಳಿಕ ಎಲ್ಲರೂ ಸೇರಿ ನಾಯಕನನ್ನು ಆಯ್ಕೆ ಮಾಡುವುದು ಒಂದು ಪ್ರಕ್ರಿಯೆ. ಸರ್ಕಾರ ರಚನೆಗೆ ಬಿಆರ್‌ಎಸ್‌ನವರೂ ಕೈಜೋಡಿಸಲು ಬರುತ್ತಿದ್ದಾರೆ ಎಂದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮುನ್ಸೂಚನೆ: ಸಂಸದ ಮುನಿಸ್ವಾಮಿ

ಕರ್ನಾಟಕದ‌ ದುಡ್ಡಿಂದ ತೆಲಂಗಾಣ‌ ಕಾಂಗ್ರೆಸ್ ಗೆದ್ದಿದೆ‌ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪಾಪ‌ ಕುಮಾರಸ್ವಾಮಿ ಹಾಗೇ ಹೇಳಬೇಕು. ನಾನೂ ಅವರ ಜೊತೆ ಕೆಲಸ ಮಾಡಿದ್ದೇನೆ. ಸತ್ಯವಾಗಲೂ‌ ಅವರು‌ ಹೇಳಿದ್ದು ಸತ್ಯ. ಪಾಪ ಅವರು ಒಂದು ರೂಪಾಯಿಯನ್ನು‌ ಬೇರೆಯವರಿಂದ ಪಡೆದಿಲ್ಲ. ಬೇರೆಯವರ ದುಡ್ಡನ್ನು ಕಣ್ಣೆತ್ತೂ ನೋಡಿಲ್ಲ. ಅವರ ಜೀವನ ಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ರಾಜಕೀಯ ಮಾಡಿದ್ದಾರೆ ಎಂದು ಗೇಲಿ ಮಾಡಿದರು.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ‌ಒಂದು ರುಪಾಯಿಯನ್ನೂ ದುರುಪಯೋಗ ಪಡಿಸಿಕೊಂಡಿಲ್ಲ. ಅವರು‌ ಭ್ರಷ್ಟಾಚಾರ ಮಾಡಿಲ್ಲ, ಒಂದು ರುಪಾಯಿ‌ ದಾನವನ್ನೂ ತೆಗೆದುಕೊಂಡಿಲ್ಲ. ಅವರ ಸ್ವತಃ ದುಡ್ಡಿನಲ್ಲಿ ರಾಜಕೀಯ ಮಾಡಿದ್ದಾರೆ. ಅವರ ಬಗ್ಗೆ ಹೆಚ್ಚು ಮಾತಾಡಬೇಡಿ ಧನ್ಯವಾದಗಳು ಎಂದು ಹೇಳಿ ಮುಂದೆ ಸಾಗಿದರು.

ಕಾಂಗ್ರೆಸ್‌ ರೈತ ಪರವಾದ ಸರ್ಕಾರ: ಕಾಂಗ್ರೆಸ್ ಸರ್ಕಾರವು ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಮೈಷುಗರ್ ಕಾರ್ಖಾನೆಯನ್ನು ಆರಂಭಿಸಿ ಜಿಲ್ಲೆಯ ರೈತರಿಗೆ ನೆರವಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶ್ಲಾಘಿಸಿದರು. ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ (ಕೆರಗೋಡು ಶಾಖೆ)ದ ಸಹಯೋಗದಲ್ಲಿ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

ಕಾಂಗ್ರೆಸ್ ಸರ್ಕಾರವು ರೈತರ ಪರವಾಗಿ ಕೆಲಸ ಮಾಡುತ್ತಿದೆ. ರೈತರಿಗೆ ಹಾಲಿನ ದರವನ್ನು ಹೆಚ್ಚಿಸಿ ಅನುಕೂಲ ಮಾಡಿಕೊಡಲಾಗುವುದು, ಮೈಷುಗರ್ ಕಾರ್ಖಾನೆಯ ಅಭಿವೃದ್ಧಿಗೆ ಸ್ಪಂದಿಸಿ, ೩ ಲಕ್ಷಕ್ಕೂ ಹೆಚ್ಚು ಟನ್ ಕಬ್ಬು ಅರೆಯುವ ಮೂಲಕ ಲಾಭದಾಯಕವಾಗಿ ಕಾರ್ಖಾನೆ ಸಾಗಿದೆ, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಟ್ಟದಲ್ಲಿಯೂ ಕಾರ್ಖಾನೆ ಅಭಿವೃದ್ಧಿ ಹೊಂದುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮ ಶಾಸಕ ಪಿ.ರವಿಕುಮಾರ್ ಗೌಡ, ಜಿಲ್ಲಾಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್.ಯತೀಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ಉಪವಿಭಾಗಾಕಾರಿ ಶಿವಮೂರ್ತಿ, ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ಜನರಲ್ ವ್ಯಾನೇಜರ್ ರೂಪಶ್ರೀ, ಕೆರಗೋಡು ಬ್ಯಾಂಕ್ ವ್ಯಾನೇಜರ್ ಪಿ.ಮಂಜುನಾಥ್ ಭಾಗವಹಿಸಿದ್ದರು.