ಶ್ರೀಸಾಮಾನ್ಯರ ಬಸ್ ಡಕೋಟಾನಾ?: ನಾರಾಯಣಸ್ವಾಮಿ ಟೀಕೆಗೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು
ರಾಜ್ಯದಲ್ಲಿ ಶ್ರೀಸಾಮಾನ್ಯ ಜನರು ಓಡಾಡುವ ಕೆಂಪು ಬಸ್ಸುಗಳು ಡಕೋಟನಾ? ಬಿಜೆಪಿ ಆಡಳಿತದಲ್ಲಿ ಇದ್ದಾಗ ಜನ ಓಡಾಡಿದ್ದು ಇವೇ ಬಸ್ಗಳಲ್ಲಿ ಅಲ್ಲವಾ? ಎಂದು ಪ್ರಶ್ನಿಸುವ ಮೂಲಕ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ಸಚಿವ ನಾರಾಯಣಸ್ವಾಮಿಯವರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗ (ಜೂ.04): ರಾಜ್ಯದಲ್ಲಿ ಶ್ರೀಸಾಮಾನ್ಯ ಜನರು ಓಡಾಡುವ ಕೆಂಪು ಬಸ್ಸುಗಳು ಡಕೋಟನಾ? ಬಿಜೆಪಿ ಆಡಳಿತದಲ್ಲಿ ಇದ್ದಾಗ ಜನ ಓಡಾಡಿದ್ದು ಇವೇ ಬಸ್ಗಳಲ್ಲಿ ಅಲ್ಲವಾ? ಎಂದು ಪ್ರಶ್ನಿಸುವ ಮೂಲಕ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ಸಚಿವ ನಾರಾಯಣಸ್ವಾಮಿಯವರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಶನಿವಾರ ಇಲ್ಲಿನ ಮುರುಘಾಮಠಕ್ಕೆ ಭೇಟಿ ನೀಡಿ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರಿಂದ ಗೌರವ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹಿಳೆಯರಿಗೆ ಡಕೋಟಾ ಬಸ್ನಲ್ಲಿ ಮಾತ್ರ ಉಚಿತ ಸಂಚಾರ ಎಂಬ ಕೇಂದ್ರ ಸಚಿವರ ಟೀಕೆಗೆ ಪ್ರತಿಕ್ರಿಯಿಸಿ, ಜನ ಸಾಮಾನ್ಯರಿಗೆ ಏನು ಬೇಕೋ ಅದನ್ನು ನಾವು ಕೊಟ್ಟಿದ್ದೇವೆ. ನನ್ನ ಪತ್ನಿ ಕೂಡ ಬಸ್ನಲ್ಲಿ ಹೋಗಬಹುದು. ಎಸಿ ಬಸ್ ಹೊರತುಪಡಿಸಿ ಉಳಿದ ಸಾರಿಗೆ ಬಸ್ ಮಹಿಳೆಯರ ಪ್ರಯಾಣಕ್ಕೆ ಉಚಿತವಾಗಿರುತ್ತದೆ. ಎಸಿ ಬಸ್ ಜನಸಾಮಾನ್ಯರಿಗೆ ಬೇಕಿಲ್ಲ, ಎಂ.ಬಿ.ಪಾಟೀಲ್ಗೆ ಬೇಕಾಗಿರಬಹುದು ಎಂದರು.
ಸಂಸತ್ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್.ವಿಶ್ವನಾಥ್ ಆರೋಪ
ಗವಿಮಠ ಎರಡನೇ ಸಿದ್ಧಗಂಗಾಮಠ: ಐದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ, ಉಚಿತ ಶಿಕ್ಷಣ ಮತ್ತು ಪ್ರಸಾದ ನೀಡುತ್ತಿರುವ ಗವಿಮಠವು ರಾಜ್ಯದಲ್ಲಿ ಎರಡನೇ ಸಿದ್ಧಗಂಗಾ ಎಂದೇ ಖ್ಯಾತಿಯಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಗವಿಮಠಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಸ್ವಾಮೀಜಿಗಳೊಂದಿಗೆ ಅರ್ಧ ಗಂಟೆಗೂ ಅಧಿಕ ಸಮಯ ಚರ್ಚೆ ಮಾಡಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಭೇಟಿ ನೀಡುವುದು ಪುಣ್ಯವೇ ಸರಿ ಎಂದರು.
ಚಿತ್ರದುರ್ಗ ಮಠಕ್ಕೆ ಭೇಟಿ ನೀಡಿ, ಕೊಪ್ಪಳದ ಗವಿಮಠಕ್ಕೂ ಭೇಟಿ ನೀಡಿದ್ದೇನೆ. ಗವಿಸಿದ್ದೇಶ್ವರ ಸ್ವಾಮೀಜಿಗಳು ಈ ಭಾಗದಲ್ಲಿ ದೊಡ್ಡ ಸೇವೆ ಮಾಡುತ್ತಿದ್ದಾರೆ. ಸರ್ಕಾರವೂ ಮಾಡಲಾರದ ಕೆಲಸ ಇಲ್ಲಿನ ಶ್ರೀಗಳು ಮಾಡುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳಂತೆ ಗವಿಸಿದ್ದೇಶ್ವರರಿಂದಲೂ ನಾನು ಮಾರ್ಗದರ್ಶನ ಪಡೆದಿದ್ದೇನೆ. ಅವರು ಕೆಲವೊಂದು ಸಲಹೆ, ಸೂಚನೆ ನೀಡಿದ್ದಾರೆ. ನೀರಾವರಿ ಬಗ್ಗೆಯೂ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡ ಮಹೇಂದ್ರ ಛೋಪ್ರಾ, ಮುತ್ತು ಕುಷ್ಟಗಿ, ಕೆ.ಎಂ.ಸೈಯದ್, ಗುರುರಾಜ ಹಲಗೇರಿ ಸೇರಿ ಇತರರು ಉಪಸ್ಥಿತರಿದ್ದರು.
ವಿಜಯೇಂದ್ರಗೆ ತಿರುಗೇಟು: ಇದೇ ವೇಳೆ, ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರುವುದು ಗ್ಯಾರಂಟಿ ಇಲ್ಲ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಎಸ್.ಯಡಿಯೂರಪ್ಪನವರು 2 ಅವಧಿಯಲ್ಲೂ ಪೂರ್ಣ ಆಡಳಿತ ಮಾಡಿಲ್ಲ. ‘ಆಪರೇಷನ್ ಕಮಲ’ ಮಾಡಿ ಅಧಿಕಾರಕ್ಕೆ ಬಂದಿದ್ದರು. ಯಡಿಯೂರಪ್ಪನವರು ಸಿಎಂ ಸೀಟನ್ನು ಬಿಟ್ಟುಕೊಡುವಾಗ ಸದನದ ಒಳಗೆ, ಹೊರಗೆ ಕಣ್ಣೀರು ಹಾಕಿದ್ದರು. ಅವರು ಸಿಎಂ ಸೀಟನ್ನು ಬಿಟ್ಟುಕೊಡುತ್ತಾರೆ ಎಂಬ ಗ್ಯಾರಂಟಿ ವಿಜಯೇಂದ್ರ ಅವರಿಗೆ ಇತ್ತಾ? ಎಂದು ಪ್ರಶ್ನಿಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮುಂದಿದೆ ಹಲವು ಸವಾಲುಗಳು!
ಸ್ತ್ರೀಯರಿಗೆ ಡಕೋಟಾ ಬಸ್ ಮಾತ್ರ ಉಚಿತ: ರಾಜ್ಯದ ಮಹಿಳೆಯರಿಗೆ ಡಕೋಟಾ ಬಸ್ನಲ್ಲಿ ಮಾತ್ರ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಈ ಹಿಂದೆ ‘ಮಹಾದೇವಪ್ಪ ನಿನ್ಗೂ ಫ್ರೀ, ನನ್ ಹೆಂಡ್ತಿಗೂ ಫ್ರೀ’ ಅಂದಿದ್ದರು. ಈಗ ‘ನನ್ ಹೆಂಡ್ತಿಗೂ ಡಕೋಟಾ ಗಾಡಿ, ನಿನ್ ಹೆಂಡ್ತಿಗೂ ಡಕೋಟಾ ಗಾಡಿ’ ಎಂಬಂತಾಗಿದೆ. ರಾಜ್ಯದ ಮಹಿಳೆಯರು ಎಸಿ, ಡಿಲಕ್ಸ್ ಬಸ್ ಏರುವಂತಿಲ್ಲ. ಕಾಂಗ್ರೆಸ್ ಸರ್ಕಾರದ ನಯವಂಚನೆಯ ಗ್ಯಾರಂಟಿ ಇದಾಗಿದೆ. ಪಂಚ ಗ್ಯಾರಂಟಿ ಯೋಜನೆಯ ಘೋಷಣೆಯಲ್ಲಿ ಸ್ಪಷ್ಟತೆ ಇಲ್ಲ. ಉಚಿತ ವಿದ್ಯುತ್ ಯೋಜನೆಯಲ್ಲೂ ಗೊಂದಲಗಳಿವೆ ಎಂದು ಟೀಕಿಸಿದರು.