ಜೆಡಿಎಸ್‌ ರಾಜ್ಯಾದ್ಯಕ್ಷ ಸಿ. ಎಂ.ಇಬ್ರಾಹಿಂರವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಇತರ ಪಕ್ಷದೊಂದಿಗೆ ಕೈ ಜೋಡಿಸುವುದು ಬೇಡ ಎಂದ ಕೆ.ಎಚ್. ಮುನಿಯಪ್ಪ

ದೇವನಹಳ್ಳಿ(ಅ.18): ಬೂತ್‌ ಮಟ್ಟದಲ್ಲಿ ಸಂಘಟನೆಯಾದರೆ ಮಾತ್ರ ಕಾಂಗ್ರೆಸ್‌ ಪಕ್ಷ ಬೆಳೆಯಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಹೆಚ್‌. ಮುನಿಯಪ್ಪ ತಿಳಿಸಿದರು.

Add Asianetnews Kannada as a Preferred SourcegooglePreferred

ಚಿಕ್ಕಸಣ್ಣೆ ಗೇಟ್‌ ಬಳಿ ಇರುವ ಎಸ್‌ ಎಸ್‌ ಬಿ ಕನ್ವೆಂಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬೂತ್‌ ಮಟ್ಟದ ಅಧ್ಯಕ್ಷರ ಹಾಗು ಕಾರ್ಯಕರ್ತರ (ಬಿಎಲ್‌ಎ 2) ಕಾರ್ಯಾಗಾರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಪಕ್ಷ ಬೆಳೆಯಲು ಬೂತ್‌ ಮಟ್ಟದ ಅಧ್ಯಕ್ಷರು. ಕಾರ್ಯಕರ್ತರು ಹಾಗು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಪಾತ್ರ ಮುಖ್ಯವಾದದು. ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪಿಸಬೇಕು. ಯಾರು ವಂಚಿತರಾಗಬಾರದು ಎಂದು ತಿಳಿಸಿ, ಫಲಾನುಭವಿಗಳು ನಮ್ಮ ಸರ್ಕಾರದ ಯೋಜನೆಗಳ ಲಾಭ ಪಡೆಯಲು ನೀವು ಸಹಕರಿಸಿದರೆ ಮಾತ್ರ ನಮ್ಮ ಕಾಂಗ್ರೆಸ್‌ ಪಕ್ಷ ಭದ್ರವಾಗಲು ಸಾಧ್ಯ. ನಮ್ಮ ಪಕ್ಷ ರಾಜ್ಯದಲ್ಲಿ ಕೊಟ್ಟಿರುವ ಕಾರ್ಯಕ್ರಮಗಳನ್ನು ಭಾರತ ದೇಶವು ಕಾಪಿ ಮಾಡುತ್ತಿದೆ ಎಂದರು.

ಮುಳಬಾಗಿಲು ದೋಸೆ ಹಾಕಿ, ಬಂಗಾರಪೇಟೆ ಪಾನಿಪುರಿ ನೀಡಿದ ಸಚಿವ ಮುನಿಯಪ್ಪ!

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರತಿ ಬೂತ್‌ನಲ್ಲಿ ಯುವಕರನ್ನು ಗುರುತಿಸಿ, ಅವರಿಗೆ ಮೊದಲು ನಮ್ಮ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮೋಟಿವೇಟ್‌ ಮಾಡಬೇಕು. ಯುವಕರು ನಮ್ಮ ಪಾಲಾದರೆ ಮಾತ್ರ ಇಡೀ ಬೂತ್‌ ನಮ್ಮದಾಗುತ್ತದೆ. ಆಗ ಕಾಂಗ್ರೆಸ್‌ ಪಕ್ಷ ಶಾಶ್ವತವಾಗುತ್ತದೆ. ನಮ್ಮ ಪಕ್ಷದ ಮುಖಂಡರು ಮಾಡಿರುವ ಯೋಜನೆಗಳಿಗೆ ಬಿಜೆಪಿಯವರು ಹೊಸ ಹೆಸರಿಟ್ಟು ನಮ್ಮದೇ ಯೋಜನೆ ಎಂದು ಹೇಳುತ್ತಾರೆ ಎಂದರು.

ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ, ನಾನು ರಾಜ್ಯದಲ್ಲಿ ಚಿಕ್ಕಮಂತ್ರಿ ಅಲ್ಲದೆ ದೊಡ್ಡ ಮಂತ್ರಿಯಾಗಿ ನಂತರ ಮುಖ್ಯಮಂತ್ರಿಯಾಗಿದ್ದಲ್ಲದೆ, ಕೇಂದ್ರ ಸರ್ಕಾರದಲ್ಲಿ ಹಲವಾರು ಖಾತೆಗಳನ್ನು ಸಹ ನಿರ್ವಹಿಸಿದ್ದೇನೆ. ಅಲ್ಲದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಮುಂದಿನ ಮೂರು ವರ್ಷಗಳಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆಯ ನೀರು ಹರಿಯಲಿದೆ. ತಾಲೂಕು ಕಾಂಗ್ರೆಸ್‌ ಮುಖಂಡರು, ಯಾವ ಗ್ರಾಮದಲ್ಲಿ ನಮ್ಮ ಪಕ್ಷದ ಬೂತ್‌ ಅಧ್ಯಕ್ಷರು ಇಲ್ಲವೋ ಅಲ್ಲಿ ಹೊಸದಾಗಿ ಬೂತ್‌ ಅಧ್ಯಕ್ಷರನ್ನು ಮಾಡಿ ಸಂಘಟಿಸಬೇಕು ಎಂದರು.

ದೇಶದಲ್ಲಿ ಮೂರನೇ ಒಂದು ಭಾಗ ಆಹಾರ ವ್ಯರ್ಥವಾಗುತ್ತಿದೆ: ಸಚಿವ ಕೆ.ಎಚ್.ಮುನಿಯಪ್ಪ

ಸಮಾರಂಭದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಸಿ. ಜಗನ್ನಾಥ್‌, ಶಾಂತಕುಮಾರ್‌, ನಾಗೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ರಾಮಚಂದ್ರಪ್ಪ ಹಾಗು ಪ್ರಸನ್ನಕುಮಾರ್‌ ಉಪಸ್ಥಿತರಿದ್ದರು

ಜೆಡಿಎಸ್ ಇತರರೊಂದಿಗೆ ಹೋಗೋದು ಬೇಡ

ಜೆಡಿಎಸ್‌ ಪಕ್ಷದವರು ಬಿಜೆಪಿ ಜೊತೆ ಹೋಗುವುದು ಬೇಡ ಏಕೆಂದರೆ ಪ್ರತಿ ಪಕ್ಷ ತನ್ನದೇ ಆದ ಸಿದ್ದಾಂತಗಳನ್ನು ಹೊಂದಿರುತ್ತದೆ. ನಮ್ಮ ಕಾಂಗ್ರೆಸ್‌ ಪಕ್ಷ ದೇವೇಗೌಡರನ್ನು ಪ್ರಧಾನಿಯನ್ನಾಗಿ ಹಾಗೂ ಕುಮಾರಸ್ವಾಮಿರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜೆಡಿಎಸ್‌ ರಾಜ್ಯಾದ್ಯಕ್ಷ ಸಿ. ಎಂ.ಇಬ್ರಾಹಿಂರವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಇತರ ಪಕ್ಷದೊಂದಿಗೆ ಕೈ ಜೋಡಿಸುವುದು ಬೇಡ ಎಂದು ಕೆ.ಎಚ್. ಮುನಿಯಪ್ಪ ತಿಳಿಸಿದರು.