* ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಅಸಮಾಧಾನ ಇರುವುದು ಅಸಹಜವಲ್ಲ* ಯಾರಾರ‍ಯರಿಗೆ ಅಸಮಾಧಾನವಿತ್ತೋ ಎಲ್ಲರೊಂದಿಗೂ ಅರುಣ್‌ ಸಿಂಗ್‌ ಚರ್ಚೆ ನಡೆಸಲಿದ್ದಾರೆ* ಸಿದ್ದುಗೆ ವರುಣ ಬಿಡಬೇಡಿ ಎಂದಿದ್ದೆ  

ಬೆಂಗಳೂರು(ಜೂ.14): ನಾಯಕತ್ವ ಬದಲಾವಣೆ ಕುರಿತ ಸಮಸ್ಯೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಇತಿಶ್ರೀ ಹಾಡಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರೇ ಪೂರ್ಣ ಅವಧಿಗೆ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ಕುಟುಂಬದಲ್ಲಿ ಗಂಡ-ಹೆಂಡತಿ ನಡುವೆಯೇ ಅಸಮಾಧಾನ ಇರುತ್ತದೆ. ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಅಸಮಾಧಾನ ಇರುವುದು ಅಸಹಜವಲ್ಲ. ಯಾರಾರ‍ಯರಿಗೆ ಅಸಮಾಧಾನವಿತ್ತೋ ಎಲ್ಲರೊಂದಿಗೂ ಅರುಣ್‌ ಸಿಂಗ್‌ ಅವರು ಚರ್ಚೆ ನಡೆಸಲಿದ್ದಾರೆ. ಎಲ್ಲ ಸಮಸ್ಯೆಯನ್ನೂ ತಿಳಿ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಬಗ್ಗೆ ಸಲಹೆ ನೀಡಲಿದ್ದಾರೆ ಎಂದರು.

ಕೊರೋನಾ ಟೈಮ್‌ನಲ್ಲಿ ರಾಜಕಾರಣ ಮಾಡಿದ್ರೆ ಜನರೇ ಛೀಮಾರಿ ಹಾಕ್ತಾರೆ: ಸುಧಾಕರ್‌

ಸಿದ್ದುಗೆ ವರುಣ ಬಿಡಬೇಡಿ ಎಂದಿದ್ದೆ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ವರುಣ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಬೇಡಿ ಎಂದು ಹೇಳಿದ್ದೆ. ಆದರೂ ಕ್ಷೇತ್ರ ಬದಲಿಸಿದರು. ಅಂದು ನನ್ನ ಮಾತು ಕೇಳಿರಲಿಲ್ಲ. ಈಗ ಚಾಮರಾಜಪೇಟೆಗೆ ಸ್ವಾಗತಿಸಲು ನಾನು ಯಾರು? 224 ಕ್ಷೇತ್ರಗಳಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು ಎಂದರು.