ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತು ಜನತೆ 2014ರಲ್ಲೇ ಕಾಂಗ್ರೆಸ್‌ ಕತೆ ಮುಗಿಸಿದ್ದಾರೆ. ಕಾಂಗ್ರೆಸ್‌ನ ಹಣೆಬರಹ ಮುಗಿದಿದೆ ಎಂದ ಆಚಾರ್‌

ಕುಕನೂರು(ಆ.27): ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್‌ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಟೀಕಿಸಿದರು. ಶುಕ್ರವಾರ ತಾಲೂಕಿನ ತಳಕಲ್ಲ, ಇಟಗಿ, ಮಂಡ್ಲಿಗೇರಿ, ಭಟಪ್ಪನಹಳ್ಳಿ, ಚಿಕೇನಕೊಪ್ಪ, ಯರೇಹಂಚಿನಾಳ ಗ್ರಾಮದಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸುಮಾರು ಐವತ್ತು ವರ್ಷ ದೇಶವಾಳಿದ ಕಾಂಗ್ರೆಸ್‌ ಆಡಳಿತದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಸಾವಿರಾರು ಕೋಟಿ ಹಗರಣಗಳನ್ನು ಕಾಂಗ್ರೆಸ್‌ ಹೊತ್ತಿದೆ. 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು, ಹೌಸಿಂಗ್‌ ಹಗರಣ, ಕ್ರೀಡಾ ಸಾಮಗ್ರಿ ಕಾಂಗ್ರೆಸ್‌ನ ದೊಡ್ಡ ಕಳಂಕಗಳು ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತು ಜನತೆ 2014ರಲ್ಲೇ ಕಾಂಗ್ರೆಸ್‌ ಕತೆ ಮುಗಿಸಿದ್ದಾರೆ. ಕಾಂಗ್ರೆಸ್‌ನ ಹಣೆಬರಹ ಮುಗಿದಿದೆ ಎಂದರು. ಕೃಷ್ಣಾ ಬಿ ಸ್ಕೀಂಗೆ ಹಾಕಿದ ಅಡಿಗಲ್ಲನ್ನು ಕಾಂಗ್ರೆಸ್ಸಿಗರು ಅಡ್ಡಗಲ್ಲು ಎಂದು ಜರಿದರು. ಇನ್ನೂ ಮೂರು ತಿಂಗಳಲ್ಲಿ ಕ್ಷೇತ್ರಕ್ಕೆ ನೀರು ಬರುತ್ತದೆ. ಯಲಬುರ್ಗಾ ಕ್ಷೇತ್ರ ಜನತೆಗೆ ಕಪ್ಪುಚುಕ್ಕೆ ಬಾರದ ರೀತಿ ಕೆಲಸ ಮಾಡುತ್ತಿದ್ದೇನೆ ಎಂದರು.

ಬಾಲ್ಯವಿವಾಹ ತಡೆ ಕಾಯಿದೆಗೆ ಇನ್ನಷ್ಟುಬಲ ನೀಡಿ; ಸಚಿವ ಹಾಲಪ್ಪ ಆಚಾರ್

ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ನೀರಾವರಿಯ ಯೋಜನೆ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ಪಡೆಯಲಾಗಲಿಲ್ಲ. ಆಗಿನ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿ .1750 ಕೋಟಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆಯನ್ನು ಕೊಟ್ಟನಂತರ ಈಗ ಶೇ. 90ರಷ್ಟುಕೆಲಸ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ತಾಲೂಕಿಗೆ ನೀರಾವರಿ ಒದಗಿಸುತ್ತೇನೆ ಎಂದರು.

ತಾಲೂಕಿನ ಯರೆ ಭಾಗದ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕೆರೆಗಳ ಜೀರ್ಣೋದ್ಧಾರ ಮಾಡಿಸಿದ್ದೇನೆ. ರೈತರಿಗೆ ಅನುಕೂಲವಾಗಲೆಂದು ಗ್ರಾಮೀಣ ರಸ್ತೆಗಳನ್ನು ಸುಧಾರಿಸಿ ರೈತರು ತಮ್ಮ ಜಮೀನುಗಳಿಗೆ ಸುಗಮವಾಗಿ ಹೋಗಲು ಸುಸಜ್ಜಿತವಾದ ರಸ್ತೆಗಳ ನಿರ್ಮಿಸಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪ್ರತಿದಿನ 36- 37 ಕಿಮೀ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣಗೊಳ್ಳುತ್ತಿವೆ. ಇದರ ಶ್ರೇಯಸ್ಸು ವಾಜಪೇಯಿ ಅವರಿಗೆ ಸಲ್ಲಬೇಕು ಎಂದರು.
ಇಒ ರಾಮಣ್ಣ ದೊಡ್ಡನಿ, ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಮುಖಂಡರಾದ ಕಳಕಪ್ಪ ಕಂಬಳಿ, ಹಂಚಾಳಪ್ಪ ತಳವಾರ, ಸಿ.ಎಚ್‌. ಪೊಲೀಸ್‌ಪಾಟೀಲ್‌, ಬಸವನಗೌಡ ತೊಂಡಿಹಾಳ, ಶಂಭು ಜೋಳದ ಇತರರಿದ್ದರು.

ಕುಟುಂಬಸ್ಥರಿಗೆ ಸಾಂತ್ವನ

ತಾಲೂಕಿನ ಕೋಮಲಾಪುರದಲ್ಲಿ ಇತ್ತೀಚೆಗೆ ಬೆಂಕಿ ಅವಘಡಕ್ಕೆ ಮೃತರಾದ ಎಳೆ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ಸಚಿವ ಹಾಲಪ್ಪ ಆಚಾರ ನೀಡಿದರು.