*  ಮುಖ್ಯಮಂತ್ರಿಯಾಗಿದ್ದ ಅವರನ್ನು 224 ಕ್ಷೇತ್ರದಲ್ಲೂ ಕರೆಯೋದು ಸರ್ವೇ ಸಾಮಾನ್ಯ*  ಸಿದ್ದರಾಮಯ್ಯ ಅವರನ್ನು ಅವರ ಜಿಲ್ಲೆಯಲ್ಲಿ ಕೈಬಿಟ್ಟರೂ ಬೇರೆ ಜಿಲ್ಲೆಯವರು ಕೈಹಿಡಿದರು*  ಈಗ ಬಾದಾಮಿಯಿಂದಲೂ ಬೇರೆ ಕಡೆ ಹೋಗ್ತೀನಿ ಅಂದ್ರೆ ಏನ್‌ ಸಂದೇಶ ಕೊಡ್ತಾರೆ 

ಚಾಮರಾಜನಗರ(ಜು.07):  ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಅವರನ್ನು 224 ಕ್ಷೇತ್ರದಲ್ಲೂ ಕರೆಯೋದು ಸರ್ವೇ ಸಾಮಾನ್ಯ. ಸಿದ್ದರಾಮಯ್ಯ ಅವರನ್ನು ಅವರ ಜಿಲ್ಲೆಯಲ್ಲಿ ಕೈಬಿಟ್ಟರೂ ಬೇರೆ ಜಿಲ್ಲೆಯವರು ಕೈಹಿಡಿದರು. ಈಗ ಬಾದಾಮಿಯಿಂದಲೂ ಬೇರೆ ಕಡೆ ಹೋಗ್ತೀನಿ ಅಂದ್ರೆ ಏನ್‌ ಸಂದೇಶ ಕೊಡ್ತಾರೆ. ದೊಡ್ಡ ನಾಯಕರು, ಅಪಾರ ರಾಜಕೀಯ ಅನುಭವವುಳ್ಳವರೂ ಆದ ಅವರು ಚುನಾವಣೆಯಿಂದ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುವುದು ಸರಿಯಲ್ಲ ಎಂದರು.

ದೇಶದಲ್ಲೇ ಮೊದಲು: ಚಾಮರಾಜನಗರದಲ್ಲಿ ಮುಟ್ಟಿನ‌ ಕಪ್‌ಗೆ ಚಾಲನೆ

ಇದೇ ವೇಳೆ ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರ ಸಂಬಂಧ ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹದ ಬಗ್ಗೆ ಮಾತನಾಡಿ, ಅನೇಕ ವರ್ಷಗಳಿಂದ ನೋಡಿದ್ದೇವೆ. ಈ ರೀತಿ ಗಂಭೀರ ತನಿಖೆಯಾಗಿಲ್ಲ. ಹಿರಿಯ ಅಧಿಕಾರಿಗಳನ್ನು ಅರೆಸ್ಟ್‌ ಮಾಡಿರುವ ಯಾವುದಾದರು ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಈ ವಿಚಾರವಾಗಿ ಮಾತನಾಡಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ. ಎಲ್ಲಾ ತನಿಖೆ ಅಪಾದನೆ ಮುಚ್ಚಿ ಹಾಕಿದ್ದು ಕಾಂಗ್ರೆಸ್‌ ಸರ್ಕಾರ. ಕೆಂಪಣ್ಣ ಆಯೋಗ ಏನಾಯ್ತು? ಈ ಬಗ್ಗೆ ಅವರು ಮಾತನಾಡದೆ ಇದ್ದರೆ ಕಾಂಗ್ರೆಸ್‌ ನವರಿಗೆ ಒಳ್ಳೆಯದು ಎಂದರು.