ರಾಜ್ಯ ಆಡಳಿತದಲ್ಲಿ ಯಾವುದೇ ತೊಂದರೆ ಇಲ್ಲ. ಮುಖ್ಯಮಂತ್ರಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ನಂಗೆ ಇಷ್ಟವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಬೆಂಗಳೂರು (ಜು.11): ರಾಜ್ಯ ಆಡಳಿತದಲ್ಲಿ ಯಾವುದೇ ತೊಂದರೆ ಇಲ್ಲ. ಮುಖ್ಯಮಂತ್ರಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ನಂಗೆ ಇಷ್ಟವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ನಾಯಕತ್ವ ಬದಲಾವಣೆ ಚರ್ಚೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂತಹ ಸಂದರ್ಭ ಬಂದಾಗ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಮಾಧ್ಯಮಗಳು ವಿಶ್ಲೇಷಣೆ ಮಾಡಿದಂತೆ ಇದೊಂದು ಡ್ರಾಮಾ. ಪದೇ ಪದೆ ಇದರ ಬಗ್ಗೆ ಚರ್ಚೆ ಆಗುವುದು, ಅವರೊಂದು ಹೇಳಿಕೆ ಕೊಡುವುದು ನಾನೊಂದು ಹೇಳೋದು, ಮತ್ತೊಬ್ಬರು ಇನ್ನೊಂದು ಹೇಳುವುದು ಆಗಬಾರದು ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಸಂದರ್ಭ ಬಂದಾಗ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ಪುನರುಚ್ಚರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಹಿತದೃಷ್ಟಿಯಿಂದ ಬುಧವಾರ ನಡೆದ ಸಭೆಯಲ್ಲಿ ಟೀಕೆಗಳ ಹೊರತಾಗಿ, ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಎಲ್ಲರ ಸಲಹೆಗಳನ್ನು ಗಮನಿಸಿ, ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಮಳೆಗಾಲ ಮುಗಿದ ನಂತರ ಎಲ್ಲ ಧಾರ್ಮಿಕ ಮುಖಂಡರನ್ನೊಳಗೊಂಡಂತೆ ದೊಡ್ಡಮಟ್ಡದ ಸಭೆ ಮಾಡಲು ಸಲಹೆ ಕೊಟ್ಟಿದ್ದಾರೆ. ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡುವುದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ಕೊಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಕಾನೂನು ವ್ಯವಸ್ಥೆ ಉತ್ತಮ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ವಿವಿಧ ಅಪರಾಧಗಳ ಬಗ್ಗೆ ಮಾಹಿತಿ ವಿಶ್ಲೇಷಿಸಿದ ವೇಳೆ ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಕಾನೂನನ್ನು ಬಹಳ ಕಠಿಣವಾಗಿ ತೆಗೆದುಕೊಂಡಿದ್ದರಿಂದ ಕ್ರೈಂ ರೇಟ್ ಕಡಿಮೆಯಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗಮನಿಸಿದಾಗ ಕಠಿಣ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಸಾಧ್ಯವಾಗಿದೆ ಎಂದರು.

ವಿಶೇಷ ಕಾರ್ಯಪಡೆ ರಚನೆ ಶಾಂತಿ-ಸುವ್ಯವಸ್ಥೆಗೆ ಪೂರಕವಾಗಿದೆ. ಈ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಬೆಂಗಳೂರು ಬಳಿಕ ಬೆಳೆಯುವಲ್ಲಿ ಅವಕಾಶಗಳಿರುವ ಕರಾವಳಿಯಲ್ಲಿ ಶಾಂತಿ ಅತೀ ಮುಖ್ಯ, ಅದಕ್ಕಾಗಿ ಈ ಭಾಗಕ್ಕೆ ಹೆಚ್ಚು ಗಮನ ಹರಿಸುತ್ತೇವೆ. ಒಂದೆರಡು ಜನ ಬೇರೆ ರೀತಿಯಲ್ಲಿ ಇದ್ದರೂ ಜಿಲ್ಲೆಯ ಜನ ಉತ್ತಮರಾಗಿರುವವರು ಎಂದರು. ಪೊಲೀಸರ ವರ್ಗಾವಣೆಯಿಂದ ಏನು ಪರಿಣಮ ಎಂದು ನೀವು ಹೇಳಬೇಕು ಎಂದರು. ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಎಲ್ಲಾ ವರ್ಗದ ಜನರೊಂದಿಗೆ ಸಭೆ ನಡೆಸುತ್ತೇವೆ. ಅಲ್ಲಿ ಸಲಹೆಗಳನ್ನು ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಮಂಗಳೂರಿನ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಸಾಧಕ-ಬಾಧಕಗಳನ್ನು ಸಂಗ್ರಹಿಸಿ ತೀರ್ಮಾಣ ಕೈಗೊಳ್ಳುತ್ತೇವೆ ಎಂದರು.