ಚನ್ನಪಟ್ಟಣ (ಆ.06): ಇವರು ನಡೆಸುತ್ತಿರುವುದು ಕಾಂಗ್ರೆಸ್ ವಿರುದ್ಧದ ಪಾದಯಾತ್ರೆ ಅಲ್ಲ, ಜೆಡಿಎಸ್ ಮುಗಿಸುವ ಪಾದಯಾತ್ರೆ. ಇದು ಕುಮಾರಸ್ವಾಮಿ ಅವರಿಗೂ ಅರ್ಥವಾಗಿದೆ. ಆದರೆ, ಏನೂ ಮಾಡಲಾಗುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಈ ಪಾದಯಾತ್ರೆ ಯಾಕೆ ಮಾಡ್ತಿದ್ದಾರೆ ಗೊತ್ತಿಲ್ಲ. ಈ ಹಿಂದೆ ಎಸ್.ಎಂ ಕೃಷ್ಣ ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಬಳ್ಳಾರಿ ರಿಪಬ್ಲಿಕ್‌ನಿಂದ ವಿಮುಕ್ತಿಗಳಿಸಲು ನಾವು ಪಾದಯಾತ್ರೆ ಮಾಡಿದೆವು. ಈ ಪಾದಯಾತ್ರೆ ಉದ್ದೇಶ ಏನು ಯಾಕಾಗಿ ಅಂತ ಗೊತ್ತಿಲ್ಲ. ಸುಖಾಸುಮ್ಮನೆ ಭ್ರಷ್ಟಾಚಾರ ಆಗಿದೆ ಅಂತ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಿ, ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ರಾಜ್ಯದ ಹಿತದ ಪರವಾಗಿ, ಕೇಂದ್ರದ ವಿರುದ್ಧ ಹೋರಾಟ ಮಾಡ್ತಿದ್ದೇವೆ. ಇಡೀ ಸರ್ಕಾರವೇ ದೆಹಲಿಗೆ ಹೋಗಿ ರಾಜ್ಯದ ಅನ್ಯಾಯದ ಬಗ್ಗೆ ಹೋರಾಟ ಮಾಡಿದ್ವಿ. ಈ ಹೋರಾಟವನ್ನ ಬಿಜೆಪಿ ಸಹಿಸಿಕೊಳ್ಳಲಿಲ್ಲ, ಇನ್ನೂ ನ್ಯಾಯ ಕೊಡಲಿಲ್ಲ ಎಂದರು. ರಾಜ್ಯದ ಬರದ ವಿಚಾರಕ್ಕೆ ಕೇಂದ್ರ ಪರಿಹಾರ ಕೇಳಿದ್ರೆ ಕಿವಿ ಕೊಡಲಿಲ್ಲ ನಾವು ಸುಪ್ರೀಂಕೋರ್ಟ್ ಹೋದಾಗ ರಾಜ್ಯಕ್ಕೆ ಬರಬೇಕಾದ ಹಣ ಬರುವಂತಾಯಿತು. 

ಇದು ಕೇಂದ್ರದ ನಾಯಕರಿಗೆ ದೊಡ್ಡ ಅವಮಾನ. ರಾಜ್ಯಕ್ಕೆ ಆದ ಅನ್ಯಾಯ ವಿರುದ್ಧ ಕುಮಾರಸ್ವಾಮಿ ಕೇಳಿದ್ರಾ ಎಂದು ಪ್ರಶ್ನಿಸಿದರು. ಡಿಕೆಶಿಗೆ 6-7 ವರ್ಷಗಳಿಂದ ಕಿರುಕುಳ ಕೊಡುತ್ತಿದ್ದಾರೆ. ಆದ್ರೆ ನಮ್ಮ ನಾಯಕರು ಬಂಡೆ ಅಂತ ಗೊತ್ತು, ಅದಕ್ಕಾಗಿ ಗೆದ್ದು ಬಂದಿದ್ದಾರೆ. ಜೈಲಿಗೆ ಹೋಗಿದ್ರು ಅದೆಲ್ಲವೂ ಮೆಟ್ಟಿನಿಂತು ಸರ್ಕಾರ ತಂದು ಅಧಿಕಾರದಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯಗೆ ಇಡಿ ಬೆದರಿಕೆ ಹಾಕ್ತಿದ್ದಾರೆ. 100 ಪ್ರಕರಣಗಳಲ್ಲಿ 95 ಪ್ರಕರಣ ವಿರೋಧ ಪಕ್ಷಗಳ ಮೇಲೆ ಇರುತ್ತದೆ. ಮುಡಾ ವಿಚಾರದಲ್ಲಿ ಸಿಎಂ ಅಥವಾ ಸರ್ಕಾರದ ಪಾತ್ರ ಇಲ್ಲ ಎಂದರು.

ಸಚಿವರು, ಶಾಸಕರಿಂದಲೇ ಸಿದ್ದರಾಮಯ್ಯ ಬೆನ್ನಿಗೆ ಚೂರಿ: ಬಿ.ವೈ.ವಿಜಯೇಂದ್ರ

ಮುಡಾ ಹಗರಣ ಕುರಿತು ಅಬ್ರಹಾಂ ರಾಜ್ಯಪಾಲರಿಗೆ ದೂರು ಕೊಟ್ಟ ಕೆಲವೇ ಗಂಟೆಗಳಲ್ಲಿ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಕಾನೂನು ತಜ್ಞರ ಕರೆಸಿ ತಿಳಿದು ನಂತರ ನೋಟಿಸ್ ಕೊಡಬೇಕಿತ್ತು. ಆದರೆ ಆತುರವಾಗಿ ನೀಡಿದ್ದಾರೆ. ಈ ಪಾದಯಾತ್ರೆ ರೈತರ ಪರ ಅಲ್ಲ ಕೇವಲ ಸ್ವಾರ್ಥ ರಾಜಕಾರಣಕ್ಕಾಗಿ. ಕುಮಾರಸ್ವಾಮಿಗೂ ಗೊತ್ತಿದೆ. ಇದರಲ್ಲಿ ಏನೂ ಇಲ್ಲ ಅಂತ. ಈ ಹಿಂದೆ ಮುಡಾ ಅಧ್ಯಕ್ಷರಾಗಿದ್ದವರು ಎಲ್ಲಾ ಜೆಡಿಎಸ್, ಬಿಜೆಪಿಯವರೇ, ಅವರು ಏನೇ ಮಾಡಿದ್ರೂ ಸರ್ಕಾರದ ಅಲುಗಾಡಿಸಕ್ಕಾಗಲ್ಲ ಎಂದರು.