ಧರ್ಮದ ಅವಹೇಳನ ಅರೋಪ: ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯ ಮೇಲೆ ದಾಂಧಲೆ| ಆದರೂ ಒಬ್ಬರೂ ಚಕಾರ ಎತ್ತಿಲ್ಲ. ಇದರಲ್ಲೇ ಗೊತ್ತಾಗತ್ತೆ ಇವರ ಗೋಸುಂಬೆ ತನ| ಅವರ ವಿರುದ್ಧ ಮಾತಾಡಿದ್ರೆ ವೋಟ್ ಬ್ಯಾಂಕ್ ಹೋಗತ್ತೆ ಎನ್ನುವ ಭಯ ಕಾಡುತ್ತಿದೆ: ಸಚಿವ ಸಿ.ಟಿ. ರವಿ|
ಬೆಂಗಳೂರು(ಆ.12): ಧರ್ಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ನಗರದ ಕಾವಲ್ ಬೈರಸಂದ್ರದಲ್ಲಿ ನಿನ್ನೆ(ಮಂಗಳವಾರ) ರಾತ್ರಿ ಹಿಂಸಾಚಾರ ನಡೆಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಅವರ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯ ಮೇಲೆ ದಾಂಧಲೆ ಅಗಿದೆ. ಆದರೂ ಒಬ್ಬರೂ ಚಕಾರ ಎತ್ತಿಲ್ಲ. ಇದರಲ್ಲೇ ಗೊತ್ತಾಗತ್ತೆ ಇವರ ಗೋಸುಂಬೆ ತನ. ಅವರ ವಿರುದ್ಧ ಮಾತಾಡಿದ್ರೆ ವೋಟ್ ಬ್ಯಾಂಕ್ ಹೋಗತ್ತೆ ಎನ್ನುವ ಭಯ ಕಾಡುತ್ತಿದೆ.
ಇನ್ನು ಪ್ರಗತಿಪರರ ದನಿ ಸತ್ತೇ ಹೋಗಿದೆ, ಪ್ರಗತಿಪರರಿಗೆ ಭಯ ಇರಬೇಕು, ದಲಿತ್ ಮುಸ್ಲಿಂ ಬಾಯಿ ಬಾಯಿ ಅಂತಿದ್ದವರು, ಎಲ್ಲಿ ಹೋದರು. ಅವರಿಗೆ ಅವರ ಅಜೆಂಡಾ ಬಗ್ಗೆ ಸ್ಪಷ್ಟತೆ ಇದೆ. ಅವರು ಸ್ವಾತಂತ್ರ್ಯ ನಂತರವೂ ವಿಭಜನೆ ನಂತರವೂ ನಮ್ಮ ಸಂಸ್ಕೃತಿಯ ಜೊತೆ ಬೆರೆಯುವ ಪ್ರಯತ್ನ ಮಾಡಲೇ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನಗೆ ಉತ್ತರ ನೀಡೋದು ಬೇಡ, ಅವರ ಆತ್ಮಸಾಕ್ಷಿಗೆ ಉತ್ತರ ನೀಡಲಿ. ಹೇಳ್ತಾ ಇದ್ರು ನಾನು ಹಿಂದು, ನಾನು ಕಬಾಳಮ್ಮನ ಪೂಜೆ ಮಾಡಿ ಬರ್ತಿನಿ ಅಂತ. ಈಗ ಯಾಕೆ ಮಾತನಾಡುತ್ತಿಲ್ಲ. ಗಲಭೆ ಮಾಡಿದ ಸಂಘಟನೆಯಿಂದ ಗಲಭೆಯಲ್ಲಿ ಭಾಗಿಯಾದವರಿಂದಲೇ ಆಸ್ತಿ ನಷ್ಟ ಉಂಟಾಗಿದೆ. ಅವರಿಂದಲೇ ಆಸ್ತಿ ಪಾಸ್ತಿ ವಸೂಲು ಮಾಡಬೇಕು. ಆಗಲೇ ಇವರಿಗೆಲ್ಲಾ ಬುದ್ದಿ ಬರೋದು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪೈಗಂಬರ್ ಅವಹೇಳನ ಆರೋಪ, ಬೆಂಗಳೂರು ಪೂರ್ವ ಧಗಧಗ: ಗೋಲಿಬಾರ್ಗೆ 2 ಬಲಿ!
ಹಾವಿಗೆ ಹಾಲೆರೆದರೇನು ಫಲ? ಏಳು ದಶಕಗಳಿಂದ ಒಂದು ಸಮುದಾಯವನ್ನು ರಾಷ್ಟ್ರೀಯತೆ ಮುಖ್ಯವಾಹಿನಿಯಿಂದ ದೂರವಿಟ್ಟು ತುಷ್ಟೀಕರಣದ ರಾಜಕೀಯ ಮಾಡಿದ ಫಲವಿದು! ಇನ್ನಾದರೂ ರಾಷ್ಟ್ರ ಮೊದಲೆನ್ನುವ ಭಾವನೆ ಪಕ್ಷಾತೀತವಾಗಿ ಬರಲಿ ಎಂದು ಸಚಿವ ಕೆ.ಎಸ್. ಈಶ್ವಪ್ಪ ಹೇಳಿದ್ದಾರೆ.
ಶಾಂತಿಯಿಂದ ಬದುಕೋಣ ಎಂಬುದು ನಮ್ಮ ಆಶಯ. ಅಶಾಂತಿಯೇ ಕೆಲವರ ರಾಜಮಾರ್ಗ ಎಂದಾದರೆ, ಆ ಮಾರ್ಗವನ್ನೇ ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪೊಲೀಸ್ ವ್ಯವಸ್ಥೆ ಸದೃಡವಾಗಿದೆ. ನಿನ್ನೆ ರಾತ್ರಿ ಗಲಭೆ ನಡೆದ ಜಾಗದಲ್ಲಿ ಅಲ್ಲಿನ ಸ್ಥಳೀಯರು SDPI ಕಾರ್ಯವಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ದಿಶೆಯಲ್ಲೂ ಸರ್ಕಾರ ತನಿಖೆ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್. ಡಿ.ದೇವಗೌಡ, ಬೆಂಗಳೂರಿನಲ್ಲಿನ ಗಲಭೆ ಪ್ರಕರಣ ತೀವ್ರ ಖಂಡನೀಯ. ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ, ಎಲ್ಲರಿಗೂ ನಷ್ಟ. ಪ್ರಚೋದನೆ ಮಾಡುವುದು ತಪ್ಪು, ಪ್ರಚೋದಿತರಾಗಿ ಸಾರ್ವಜನಿಕರು, ಪೊಲೀಸರು,ಪತ್ರಕರ್ತರು ಹೀಗೆ ಎಲ್ಲರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡುವುದೂ ತಪ್ಪು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ದಾಂಧಲೆಯ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಹಚ್. ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಘಟನೆಯನ್ನ ಖಂಡಿಸಿದ್ದಾರೆ.
ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ, ಆತನಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ ಎಂದು ಹೇಳಿದ್ದಾರೆ.