Asianet Suvarna News Asianet Suvarna News

ಸಿದ್ದು ಕಾನೂನು ಪದವಿ ಅಸಲಿಯೋ? ನಕಲಿಯೋ?

ನೂತನ ಸಚಿವರಾಗಿರುವ ಬಿ ಸಿ ಪಾಟೀಲ್ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಕಾನೂನು ಪದವಿ ಅಸಲಿಯೋ ನಕಲಿಯೋ ಎಂದು ಪ್ರಶ್ನೆ ಮಾಡಿದ್ದಾರೆ. 

Minister BC Patil Slams Congress Leader siddaramaiah
Author
Bengaluru, First Published Feb 8, 2020, 9:11 AM IST

ಬೆಂಗಳೂರು [ಫೆ.08]:  ಸಚಿವರಾಗಿರುವ 17 ಮಂದಿ ಈಗಲೂ ಅನರ್ಹರೇ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜಕ್ಕೂ ಕಾನೂನು ಪದವಿಧರರೇ ಅಥವಾ ನಕಲಿ ಕಾನೂನು ಪದವಿ ಪಡೆದಿದ್ದಾರೆಯೇ ಎಂದು ನೂತನ ಸಚಿವ ಬಿ.ಸಿ. ಪಾಟೀಲ್‌ ಖಾರವಾಗಿ ಪ್ರಶ್ನಿಸಿದ್ದಾರೆ.

ಗುರುವಾರ ವಿಕಾಸಸೌಧದ ತಮ್ಮ ನೂತನ ಕೊಠಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸುಪ್ರೀಂಕೋರ್ಟ್‌ನಿಂದ ತೀರ್ಪು ದೊರೆತಿದೆ. ಜತೆಗೆ ಜನತಾ ನ್ಯಾಯಾಲಯದಲ್ಲೂ ನಾವು ಅರ್ಹರು ಎಂಬ ತೀರ್ಪು ಬಂದಿದೆ. ಹೀಗಿದ್ದರೂ ತಾವು ವಕೀಲ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಅಂತಹ ಮಾತು ಆಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಿ ಅರ್ಹರಾಗಿ ಬಂದರೆ ಸರ್ಕಾರದಲ್ಲಿ ಭಾಗಿಯಾಗಬಹುದು ಎಂಬುದಾಗಿ ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿತ್ತು. ನ್ಯಾಯಾಲಯದ ಈ ತೀರ್ಪಿಗೆ ಸಿದ್ದರಾಮಯ್ಯ ಜನತಾ ನ್ಯಾಯಾಲಯದ ಮುಂದೆ ಬನ್ನಿ ಎಂದು ಕರೆ ನೀಡಿದ್ದರು. ಇದೀಗ ಜನತಾ ನ್ಯಾಯಾಲಯದಲ್ಲಿ ಈ ಹಿಂದೆ 555 ಮತಗಳಿಂದ ಗೆದ್ದಿದ್ದ ನನ್ನನ್ನು 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಹೀಗಿದ್ದರೂ ನಮ್ಮ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಯಾವ ರೀತಿಯ ಕಾನೂನು ವ್ಯಾಸಂಗ ಮಾಡಿದ್ದಾರೆ. ಅವರು ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಪಡೆದಿದ್ದಾರೆಯೇ ಎಂದು ವ್ಯಂಗ್ಯವಾಡಿದರು.

ಎಚ್‌ಡಿಕೆ ಜೆಡಿಎಸ್‌ ಉಳಿಸಿಕೊಳ್ಳಲಿ

ಬಿಜೆಪಿ ಶಾಸಕರಿಗೆ ಅಧಿಕಾರ ದೊರೆಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಿಂತೆ ಮಾಡಬೇಕಿಲ್ಲ. ಮೊದಲು ಜೆಡಿಎಸ್‌ ಪಕ್ಷ ಹಾಗೂ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಅವರು ಮಾಡಲಿ ಎಂದು ಸಚಿವ ಬಿ.ಸಿ. ಪಾಟೀಲ್‌ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರಿಗೆ ಬಿಜೆಪಿ ಸೇರುವ ಆಸೆ ಇದ್ದರೆ ಹೇಳಲಿ. ನಾನೇ ಅವರೊಂದಿಗೆ ಮಾತನಾಡಿ ಬಿಜೆಪಿಗೆ ಕರೆ ತರುತ್ತೇನೆ. ಆದರೆ, ವಿನಾಕಾರಣ ತಮ್ಮ ಸ್ಥಾನದ ಘನತೆಗೆ ಚ್ಯುತಿ ಬರುವಂತೆ ಮಾತನಾಡುವುದು ಬೇಡ ಎಂದರು.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios