ಹಣ ಕೊಟ್ಟು ಜನರನ್ನು ಕರೆದುಕೊಂಡು ಬರುವ ಸ್ಥಿತಿ ಕಾಂಗ್ರೆಸ್‌ನವರಿಗೆ ಬಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು. ಪಟ್ಟಣದಲ್ಲಿ ರವಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಪೇಟೆ ಬಸವೇಶ್ವರ ದೇವಸ್ಥಾನದ ಹತ್ತಿರ ಕಾರ್ಯಕರ್ತರನ್ನು ಉದ್ದೇಸಿಶಿ ಮಾತನಾಡಿದರು. 

ಹಿರೇಕೆರೂರು (ಮಾ.20): ಹಣ ಕೊಟ್ಟು ಜನರನ್ನು ಕರೆದುಕೊಂಡು ಬರುವ ಸ್ಥಿತಿ ಕಾಂಗ್ರೆಸ್‌ನವರಿಗೆ ಬಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು. ಪಟ್ಟಣದಲ್ಲಿ ರವಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಪೇಟೆ ಬಸವೇಶ್ವರ ದೇವಸ್ಥಾನದ ಹತ್ತಿರ ಕಾರ್ಯಕರ್ತರನ್ನು ಉದ್ದೇಸಿಶಿ ಮಾತನಾಡಿದರು. ನನ್ನ ಮೇಲಿನ ಪ್ರೀತಿ ಮತ್ತು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಇಷ್ಟುಸಂಖ್ಯೆಯಲ್ಲಿ ಜನ ಬಂದು ಆಶೀರ್ವಾದ ಮಾಡೋದು ನೋಡಿದ್ರೆ ಅವರಿಗೆ ಠೇವಣಿಯು ಸಿಗೋದಿಲ್ಲ ಎಂದರು.

Add Asianetnews Kannada as a Preferred SourcegooglePreferred

ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತೇನೆ. ಆದರೆ ಕಾಂಗ್ರೆಸ್‌ನವರು ಅಡ್ಡಗಲ್ಲು ಹಾಕುತ್ತಾರೆ. ಅವರಿಗೆ ತಾಲೂಕಿನ ಅಭಿವೃದ್ಧಿ ಆಗುವ ಅಭಿಲಾಷೆ ಇಲ್ಲ. ನಮ್ಮದು ಅಭಿವೃದ್ಧಿಯ ಮಂತ್ರ. ಅಭಿವೃದ್ಧಿ ಮಾಡಿಯೇ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಇಲ್ಲ. ಆದರೂ ಅವರು ಗ್ಯಾರಂಟಿ ಕಾರ್ಡ್‌ ಹಂಚುತ್ತಿರುವದು ಹಾಸ್ಯದ ಸಂಗತಿ ಎಂದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದೇ ಗ್ಯಾರಂಟಿ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಬದಾಮಿಗೆ ಬಂದರೂ ಈಗ ಬಾದಾಮಿನೂ ಬಿಡುತ್ತಿದ್ದಾರೆ. ಅವರ ಕ್ಷೇತ್ರ ಯಾವುದು ಎಂಬುದು ಅವರಿಗೇ ಗ್ಯಾರಂಟಿ ಇಲ್ಲ ಎಂದು ಟಾಂಗ್‌ ಕೊಟ್ಟರು.

ಸಿದ್ದರಾಮಯ್ಯ ಗೆದ್ದ ಕ್ಷೇತ್ರಕ್ಕೆ ಒಳ್ಳೆಯದನ್ನ ಮಾಡಲಿ: ಸಚಿವ ಮುರುಗೇಶ್‌ ನಿರಾಣಿ

ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ನನಗೆ ಮತದಾನ ಮಾಡುವ ದಾನಶೂರ ಕರ್ಣರು ನೀವು. ಉಪಚುನಾವಣೆಯಲ್ಲಿ ಬಂದ ಮತಗಳಿಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮೊದಲು ವಿಜಯ ಸಂಕಲ್ಪ ಯಾತ್ರೆಯು ಬಾಳಂಬೀಡದ ತಮ್ಮ ನಿವಾಸದಿಂದ ಪಟ್ಟಣದ ಸರ್ವಜ್ಞ ವೃತ್ತದಿಂದ ಆರಂಭಗೊಂಡು ಚಾವಡಿ ಸರ್ಕಲ್‌ ಮುಖಾಂತರ ಬಿ.ಜಿ. ಶಂಕರವಾವ್‌ ವೃತ್ತದಲ್ಲಿ ಮುಕ್ತಾಯಗೊಂಡಿತು.

ರ್ಯಾಲಿಯಲ್ಲಿ ಯುವಕರು ತಮ್ಮ ಬೈಕ್‌ಗಳಿಗೆ ಬಿಜೆಪಿ ಧ್ವಜ ಕಟ್ಟಿಕೊಂಡು ಸಾಗಿದರೆ ಮಹಿಳೆಯರು ಕೇಸರಿ ಶಾಲು ಮತ್ತು ಟೋಪಿ ಹಾಕಿಕೊಂಡು ಬಿಸಿಲನ್ನೂ ಲೆಕ್ಕಿಸದೇ ಭಾಗವಹಿಸಿದ್ದು ವಿಶೇಷವಾಗಿತ್ತು. ಪಟ್ಟಣವೆಲ್ಲ ಮಹಿಳೆಯರು, ಯುವಕರು ಮತ್ತು ಎಲ್ಲ ವಯಸ್ಸಿನ ಕಾರ್ಯಕರ್ತರಿಂದ ತುಂಬಿತ್ತು. ಸಂಕಲ್ಪ ಯಾತ್ರೆಯ ಉದ್ದಕ್ಕೂ ಪ್ರಧಾನಿ ಮೋದಿ ಪರ ಕೂಗು, ಬಿಜೆಪಿ ಪರ ಘೋಷಣೆಗಳು ಹಾಗೂ ಧ್ವನಿವರ್ಧಕಗಳ ಅಬ್ಬರ ಕೇಳುತ್ತಿತ್ತು. ಜೊತೆಗೆ ಬಿಜೆಪಿ ಧ್ವಜಗಳಿಂದ ಪಟ್ಟಣದ ತುಂಬಿ ಕೇಸರಿಮಯವಾಗಿತ್ತು.

ಬಿಜೆಪಿ ಆಡಳಿತದಿಂದ ಮಾತ್ರ ದೇಶದ ಉನ್ನತಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಂಸದ ಶಿವಕುಮಾರ ಉದಾಸಿ, ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಅರುಣ ಶಹಾಪುರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ತಾಲೂಕಾಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ದೇವರಾಜ ನಾಗಣ್ಣನವರ, ಸಾಂಬಾರ ಮಂಡಳಿ ಅಧ್ಯಕ್ಷ ಎನ್‌.ಎಂ. ಈಟೇರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೊಡ್ಡಗೌಡ ಪಾಟೀಲ. ಎಸ್‌.ಎಸ್‌. ಪಾಟೀಲ. ಪಾಲಾಕ್ಷಗೌಡ ಪಾಟೀಲ, ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.