Asianet Suvarna News Asianet Suvarna News

ಸಿದ್ದು ಬಿಜೆಪಿಗೆ ಬರಲಿ ಎಂಬರ್ಥದಲ್ಲಿ ಹೇಳಿದ್ದೆ: ರಾಮುಲು ಸ್ಪಷ್ಟನೆ

ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಅವರು ಬರಲಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದೇನೆ. ಆದರೆ ದೇಶದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಇರುವವರೆಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. 

minister b sriramulu react to let siddaramaiah be the cm statement gvd
Author
Bangalore, First Published Aug 18, 2022, 3:15 AM IST

ಬೆಂಗಳೂರು (ಆ.18): ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಅವರು ಬರಲಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದೇನೆ. ಆದರೆ ದೇಶದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಇರುವವರೆಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ತಾವು ಬಳ್ಳಾರಿಯಲ್ಲಿ ನೀಡಿರುವ ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂಬ ಹೇಳಿಕೆ ಬಗ್ಗೆ ರಾಜ್ಯಾಧ್ಯಕ್ಷರಿಗೆ ಸ್ಪಷ್ಟನೆ ನೀಡಿದ್ದೇನೆ. 

ತಾವು 2018ರ ವಿಧಾನಸಭಾ ಚುನಾವಣೆಯಲ್ಲಿ 120 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೆ. ಅಂದು ಮೋದಿಯವರ ನಾಯಕತ್ವವನ್ನು ವಿರೋಧಿಸಿದವರು ಈಗ ಬಿಜೆಪಿ ಸೇರಿದ್ದಾರೆ. ಆ ಚುನಾವಣೆಯಲ್ಲಿ ತಮಗೆ ಕಡಿಮೆ ಸಮಯ ಸಿಕ್ಕಿದ್ದರಿಂದ ಸಿದ್ದರಾಮಯ್ಯ ಪ್ರಯೋಜನ ಪಡೆದುಕೊಂಡು ಗೆದ್ದರು. ಎಲ್ಲ ಹಿಂದುಳಿದ ಜಾತಿ, ಪಂಗಡಗಳು ಒಂದಾಗುತ್ತಿವೆ. ಕಾಂಗ್ರೆಸ್‌ ಪಕ್ಷದ ವಿರೋಧಿಗಳು ಬಿಜೆಪಿಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯನವರಿಗೆ ಕಿರಿಕಿರಿ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್‌ ಅವರಿಂದ ಇರುಸುಮುರುಸಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಬರಲಿ ಎಂದಿದ್ದೇನೆ ಎಂದು ತಿಳಿಸಿದರು.

ಸಿದ್ದು ಸಿಎಂ ಆಗಲಿ ಎಂದ ರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆ ಇದೆಯಾ?

ಗೊಂದಲ ಮೂಡಿಸಿದ ಸಚಿವರು: ತಾವು ಹೇಳಿದ್ದು ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿ ಅಂತ. ಆದರೆ ಅವರನ್ನು ಅಲ್ಲಿ ಮುಖ್ಯಮಂತ್ರಿ ಆಗೋದಕ್ಕೆ ಬಿಡಲ್ಲ. ಅದಕ್ಕಾಗಿ ನಮ್ಮ ಪಕ್ಷಕ್ಕೆ ಬರಲಿ ಎಂದು ಶ್ರೀರಾಮುಲು ಉತ್ತರಿಸಿದಾಗ ಹಾಗಿದ್ದರೆ ಬಿಜೆಪಿ ಪಕ್ಷಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂಬ ಸುದ್ದಿಗಾರರು ಮರು ಪ್ರಶ್ನಿಸಿದರು. ದೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಇರುವ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ ಎನ್ನುವ ಮೂಲಕ ಗೊಂದಲದ ಉತ್ತರ ನೀಡಿದರು.

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಸದಾ ಸಿದ್ದರಾಮಯ್ಯ ವಿರುದ್ಧ ಟಿಕೆ ಮಾಡೋ ಸಚಿವ ಬಿ. ಶ್ರೀರಾಮುಲು‌ ಇದೀಗ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ. ಶ್ರೀರಾಮುಲು ಕುರುಬ ಸಮುದಾಯ, ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದ್ರೆ‌ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ‌ ನನಗೂ ಇದೆ. ನಾನು ಸಿಎಂ ಆಗಬೇಕು ಅನ್ನೋದನ್ನ ಸಿದ್ದರಾಮಯ್ಯ ಕೂಡ ಒಪ್ಪುತ್ತಾರೆ ಅಂತ ಹೇಳುವ ಸಿಎಂ ಕುರ್ಚಿಯ ಮೇಲೆ ಶ್ರೀರಾಮುಲು ಕಣ್ಣಿಟ್ಟಿದ್ದಾರೆ. 

ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನ ಮಾಡಲೇಬೇಕು. ಮುಂದೊಂದು ದಿನ ನಾನು ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಬರುವವರು. ಹಿಂದುಳಿದ ಜಾತಿಗಳನ್ನ ಒಂದು ಮಾಡುವ ಪ್ರಯತ್ನವನ್ನ ನಾನು ಮತ್ತು‌ ಸಿದ್ದರಾಮಯ್ಯ ಮಾಡುತ್ತಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ವಿ. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಅನ್ನೋದನ್ನ ಮುಂದೊಂದು ದಿನ ಹೇಳುವೆ ಅಂತ ತಿಳಿಸಿದ್ದಾರೆ. 

ಸಿದ್ದರಾಮಯ್ಯ ರಾಷ್ಟ್ರ ವಿರೋಧಿ: ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ

ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ರು ಅನ್ನೋದನ್ನ ಹೋಗಿ ಅವರನ್ನ ಕೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು‌ ಸಹಕಾರ ಮಾಡಿದ್ರಂತೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡೋಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ. ಒಳಗೊಳಗೆ ನಾವೂ ಏನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮ್ಮಗ್ಯಾಕೆ..? ನಿಮಗೆ ಗೊತ್ತಗಲ್ಲ ಅಂತ ಹೇಳುವ ಮೂಲಕ ಸಿದ್ದರಾಮಯ್ಯ ಪರ ರಾಮುಲು ಬ್ಯಾಟಿಂಗ್‌ ಮಾಡಿದ್ದಾರೆ. 

Follow Us:
Download App:
  • android
  • ios