*  ಗಂಗಾವತಿ ಪಂಪಾ ಸರೋವರಕ್ಕೆ ಭೇಟಿ ನೀಡಿದ ಸಚಿವ ಬಿ. ಶ್ರೀರಾಮುಲು*  ಎಸ್‌.ಟಿ. ಮೀಸಲಾತಿ ವಿಷಯದಿಂದ ಹಿಂದೆ ಸರಿಯಲ್ಲ*  ನಾಲಿಗೆಯೇ ಇಲ್ಲದಂತೆ ಮಾತನಾಡುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ 

ಗಂಗಾವತಿ(ಅ.22): ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರು ಯಾವತ್ತೂ ಸೈಡ್‌ಲೈನ್‌ ಆಗುವುದಿಲ್ಲ, ಅವರು ಹೋರಾಟದಿಂದಲೇ ಬಂದಿರುವುದರಿಂದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಹೇಳಿದ್ದಾರೆ. 

ಗಂಗಾವತಿಯ(Gangavati) ಪಂಪಾ ಸರೋವರಕ್ಕೆ ಭೇಟಿ ನೀಡಿದ್ದ ಅವರು, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಹಾಗೂ ಶ್ರೀರಾಮುಲು ಹೋರಾಟದಿಂದಲೇ ಬಂದಿರೋದೇ ಹೊರತು ಏಕಾಏಕಿ ಬೆಳೆದು ನಿಂತರವಲ್ಲ. ಹೀಗಾಗಿ, ಬಿಎಸ್‌ವೈ ಸೈಡ್‌ಲೈನ್‌ ಆಗುವ ಪ್ರಶ್ನೆಯೇ ಇಲ್ಲ ಎಂದರು.

ಸಿಂದಗಿ(Sindagi) ಮತ್ತು ಹಾನಗಲ್‌ನಲ್ಲಿ(Hanagal) ನಮ್ಮ ಪಕ್ಷದ(BJP) ಅಭ್ಯರ್ಥಿಗಳ ಗೆಲವು ನಿಶ್ಚಿತ. ಈಗಾಗಲೇ ಮತದಾರರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಬೆಂಬಲ ವ್ಯಕ್ತವಾಗುತ್ತಿದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಇಬ್ಬರೂ ಪ್ರಚಾರ ನಡೆಸುತ್ತಿದ್ದಾರೆ.

RSS ಬಗ್ಗೆ ಮಾತನಾಡೋ ಯೋಗ್ಯತೆ ಕಾಂಗ್ರೆಸ್‌, ಜೆಡಿಎಸ್‌ಗಿಲ್ಲ: ವಿಜಯೇಂದ್ರ

ಕುಮಾರಸ್ವಾಮಿ(HD Kumaraswamy) ಅವರು ಆರ್‌ಎಸ್‌ಎಸ್‌(RSS). ಕುರಿತು ನಾಲಿಗೆ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ಹೀಗಾಗಿ, ನಾನು ಅವರ ಹೇಳಿಕೆಗೆ ಪ್ರತಿಕ್ರಿಯೇ ನೀಡಲ್ಲ ಎಂದರು. ಟೀಕೆ ಮಾಡುವ ಭರದಲ್ಲಿ ಕುಮಾರಸ್ವಾಮಿ ಅವರು ಏನೆಲ್ಲಾ ಮಾತನಾಡುತ್ತಿದ್ದಾರೆ. ಹೀಗಾಗಿ, ಪ್ರತಿಕ್ರಿಯೇ ಬೇಡ ಅನಿಸುತ್ತಿದೆ ಎಂದರು.

ಆರ್‌ಎಸ್‌ಎಸ್‌ ಸಂಘಟನೆ ಏನು ಎನ್ನುವುದು ದೇಶಕ್ಕೆ ಗೊತ್ತಿದೆ. ಇವರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಸೈನ್ಯದಂತೆ ಅವರು ಕೆಲಸ ಮಾಡುತ್ತಾರೆ. ಆರ್‌ಎಸ್‌ಎಸ್‌ ಎನ್ನುವುದು ಸದಾ ಸ್ವಯಂ ಸೇವೆಗೆ ಸಿದ್ಧವಾಗಿರುತ್ತದೆ. ದೇಶಕ್ಕೆ ಕುತ್ತು ಬಂದಾಗ ಆರ್‌ಎಸ್‌ಎಸ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇವರ ಆರೋಪ ಮಾಡುತ್ತಾರೆ ಎಂದಾಕ್ಷಣ ಅದರ ಘನತೆಗೆ ಧಕ್ಕೆಯಾಗುವುದಿಲ್ಲ ಎಂದರು.

ಚುನಾವಣೆಯಲ್ಲಿ(Election) ರಾಜಕೀಯ(Politics) ಪಕ್ಷದ ಕುರಿತು ಟೀಕೆ ಮಾಡಬೇಕು. ಅದು ಬಿಟ್ಟು ಆರ್‌ಎಸ್‌ಎಸ್‌ ಬಗ್ಗೆ ಯಾಕೆ ಟೀಕೆ ಮಾಡುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಾನು ಯಾರ ವೈಯಕ್ತಿಕ ವಿಷಯದ ಕುರಿತು ಮಾತನಾಡುವುದಿಲ್ಲ. ನಮ್ಮ ಪ್ರಧಾನಮಂತ್ರಿಗಳ(Prime Minister) ಬಗ್ಗೆಯೂ ಅವರು ಮಾತನಾಡುವುದು ತಪ್ಪು ಎಂದರು.