ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಅಪರಿಚಿತರಿಬ್ಬರು ಸದನದೊಳಕ್ಕೆ ಹಾರಿ ಬಂದು ಬಣ್ಣಮಿಶ್ರಿತ ಗ್ಯಾಸ್‌ಬಾಂಬ್ ಹಾಕಿದ ಘಟನೆ ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಮಸಿ ಬಳಿಯುವ ಯತ್ನ ಎಂದು ಸಂಸದ ಎಸ್.ಮುನಿಸ್ವಾಮಿ ಖಂಡಿಸಿದರು. 

ಕೋಲಾರ (ಡಿ.14): ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಅಪರಿಚಿತರಿಬ್ಬರು ಸದನದೊಳಕ್ಕೆ ಹಾರಿ ಬಂದು ಬಣ್ಣಮಿಶ್ರಿತ ಗ್ಯಾಸ್‌ಬಾಂಬ್ ಹಾಕಿದ ಘಟನೆ ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಮಸಿ ಬಳಿಯುವ ಯತ್ನ ಎಂದು ಸಂಸದ ಎಸ್.ಮುನಿಸ್ವಾಮಿ ಖಂಡಿಸಿದರು. ಲೋಕಸಭೆಯಲ್ಲಿ ನಡೆದ ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಆರೋಪಿಗಳನ್ನು ಹಿಡಿಯುವಲ್ಲಿ ಸಹಕರಿಸಿದ ಕೋಲಾರ ಸಂಸದ ಎಸ್.ಮುನಿಸ್ವಾಮಿ ಘಟನೆ ಕುರಿತು ದೂರವಾಣಿ ಮೂಲಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೂನಲ್ಲಿದ್ದ ಗ್ಯಾಸ್‌ಬಾಂಬ್: ಸಂಸದರು ಹೇಳುವಂತೆ ಮಧ್ಯಾಹ್ನ 12:30 ರಿಂದ 1 ಗಂಟೆ ನಡುವಿನ ಅವಧಿಯಲ್ಲಿ ಏಕಾಏಕಿ ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ಧಾವಿಸಿ ಶೂನಲ್ಲಿಟ್ಟುಕೊಂಡಿದ್ದ ಬಣ್ಣದ ಗ್ಯಾಸ್‌ಬಾಬ್ ಸ್ಫೋಟಿಸಿದರು. ನಂತರ ಅವರನ್ನು ಹಿಡಿಯುವಲ್ಲಿ ನಾವು ಮುಂದಾದಾಗ ಸಂಸದರ ಟೇಬಲ್‌ಗಳ ಮೇಲೆಲ್ಲಾ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಂಧ್ರದ ಅನಂತಪುರಂ ಸಂಸದ ಹಾಗೂ ಮಾಜಿ ಪೊಲೀಸ್ ವೃತ್ತ ನಿರೀಕ್ಷಕರೂ ಆಗಿರುವ ಗೋರೆಂಟ್ಲ ಮಾಧವ ಅವರೊಂದಿಗೆ ತಾವು ಏಳೆಂಟು ಮಂದಿ ಆರೋಪಿಗಳನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾಗಿ ವಿವರಿಸಿದರು. 

ಭದ್ರತಾ ವೈಫಲ್ಯವೆಂದು ಬಿಂಬಿಸಲು ಯತ್ನ: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವಮಟ್ಟದ ನಾಯಕರಾಗಿ ಜನಪ್ರಿಯತೆ ಗಳಿಸಿದ್ದಾರೆ, ಇದನ್ನು ಸಹಿಸಲು ಆಗದ ಕೆಲವು ವಿದ್ರೋಹಿಗಳು, ದೇಶದಲ್ಲಿ ಆಂತರಿಕ ಭದ್ರತೆ ವೈಫಲ್ಯದಿಂದ ಕೂಡಿದೆ ಎಂದು ಬಿಂಬಿಸಲು ನಡೆಸಿರುವ ಷಡ್ಯಂತ್ರವಾಗಿದೆ ಎಂದು ಟೀಕಿಸಿದರು.ಇಂತಹ ಘಟನೆ ಮರುಕಳಿಸದಂತೆ ಲೋಕಸಭಾಧ್ಯಕ್ಷರು ಈಗಾಗಲೇ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ ಮತ್ತು ಸಂಸದರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಬಿ.ಎಸ್.ಯಡಿಯೂರಪ್ಪ ಸದನಕ್ಕೆ ಬಂದು ಮಾತಾಡಲಿ: ಡಿ.ಕೆ.ಶಿವಕುಮಾರ್ ಟಾಂಗ್

ಪಾಸ್ ನೀಡುವಾಗ ಎಚ್ಚರ ಅಗತ್ಯ: ಸಂಸದರನ್ನು ನೋಡಲು ಅವರ ಕ್ಷೇತ್ರದ ಜನರು ಬಂದಾಗ ಸಂಸತ್ತಿನ ವೀಕ್ಷಣೆಗೆ ಪಾಸ್ ನೀಡುವುದು ಸಾಮಾನ್ಯ, ಮತ ನೀಡಿದವರು ಅಷ್ಟು ದೂರದಿಂದ ಬಂದಾಗ ಜನಪ್ರತಿನಿಧಿಯಾದವರು ಪಾಸ್ ನೀಡಲೇಬೇಕಾಗುತ್ತದೆ. ಆದರೆ ಇನ್ನು ಮುಂದೆ ಪಾಸ್ ನೀಡುವಾಗಲು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.