ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಇನ್ನೊಂದು ಎರಡು ದಿನ ಅಥವಾ ಒಂದು ವಾರ ಕಾಯಿರಿ. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ನೀವು ನಮ್ಮ‌ ಪಕ್ಷಕ್ಕೆ ಬೇಕು ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನೀವು ಬೇಕು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಪಕ್ಷದ ಹೈಕಮಾಂಡ್‌ ನನಗೆ ಟಿಕೆಟ್‌ ಘೋಷಿಸಿದ ಕೂಡಲೇ ತಾಲೂಕುವಾರು ಸಭೆಗಳನ್ನು ನಡೆಸುವುದಾಗಿ ತಿಳಿಸಿದ ಸಂಸದೆ ಸುಮಲತಾ ಅಂಬರೀಶ್‌ 

ಮಂಡ್ಯ(ಮಾ.08): ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುವ ನಿರ್ಧಾರ ಮಾಡಿರುವುದು ಒಳ್ಳೆಯ ಬೆಳವಣಿಗೆ. ನಾನು ಅದನ್ನು ಸ್ವಾಗತಿಸುತ್ತೇನೆ. ನಾನಾದರೂ ಅಷ್ಟೇ. ಯಾರೇ ಅಭ್ಯರ್ಥಿಯಾದರೂ ಪಕ್ಷದ ಸೂಚನೆಯಂತೆ ಕೆಲಸ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಇಲ್ಲಿನ ಚಾಮುಂಡೇಶ್ವರಿ ನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾ ನಾಯಕರೊಂದಿಗೆ ಜೆಡಿಎಸ್ ಸಭೆ ನಡೆಸಿರುವುದು ಆ ಪಕ್ಷದ ಆಂತರಿಕ ವಿಚಾರದ. ಅದರಲ್ಲಿ ಮಧ್ಯಪ್ರವೇಶಿಸಿ ನಾನು ಮಾತನಾಡುವುದಿಲ್ಲ. ಮೈತ್ರಿ ಧರ್ಮ ಪಾಲಿಸುವ ನಿರ್ಧಾರ ಮಾಡಿರುವುದನ್ನು ಸ್ವಾಗತಿಸುವೆ ಎಂದರು.

ದೇವರ ಆಶೀರ್ವಾದವಿದ್ದರೆ ಮಂಡ್ಯದಲ್ಲಿ ಮನೆ ಕಟ್ಟುವೆ: ಸುಮಲತಾ ಅಂಬರೀಶ್

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಇನ್ನೊಂದು ಎರಡು ದಿನ ಅಥವಾ ಒಂದು ವಾರ ಕಾಯಿರಿ. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ನೀವು ನಮ್ಮ‌ ಪಕ್ಷಕ್ಕೆ ಬೇಕು ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನೀವು ಬೇಕು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಪಕ್ಷದ ಹೈಕಮಾಂಡ್‌ ನನಗೆ ಟಿಕೆಟ್‌ ಘೋಷಿಸಿದ ಕೂಡಲೇ ತಾಲೂಕುವಾರು ಸಭೆಗಳನ್ನು ನಡೆಸುವುದಾಗಿ ತಿಳಿಸಿದರು.

ಹನಕೆರೆ ಗ್ರಾಮದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ನಾನು ಎನ್‌ಎಚ್ಎ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ ಎಂದು ಹೇಳಿ ಪತ್ರ ಬರೆದಿದ್ದನ್ನ ಓದಿ ಹೇಳಿದ ಸಂಸದೆ, ಅಂಡರ್ ಪಾಸ್ ವಿಚಾರದಲ್ಲಿ ಸಂಸದರು ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದಿದ್ದ ಶಾಸಕ ರವಿಕುಮಾರ್‌ ಮಾತಿಗೆ ಕ್ರೆಡಿಟ್‌ಗಾಗಿ ನಾನು ಈ ಕೆಲಸ ಮಾಡ್ತಿಲ್ಲ. ಹಾಗೊಂದು ವೇಳೆ ಕ್ರೆಡಿಟ್ ತೆಗೆದುಕೊಳ್ಳಬೇಕೆಂದಿದ್ದರೆ ಇಂತಹ ಕೆಲಸ ಮಾಡಿದ್ದೇನೆ ಎಂದು ಎಲ್ಲಾ ಕಡೆ ಫೋಟೋ ಹಾಕಿಕೊಳ್ಳುತ್ತಿದ್ದೆ ಎಂದು ಅಣಕಿಸಿದರು.