Asianet Suvarna News Asianet Suvarna News

ಖರ್ಗೆ ಕೋಟೆ ಕೆಡವಿದಂತೆ, ಶರದ್ ಕೋಟೆ ಛಿದ್ರಗೊಳಿಸಲು ಬಿಜೆಪಿ ರಣತಂತ್ರ; ಬಾರಾಮತಿಯಲ್ಲಿ ಪವಾರ್ ವರ್ಸಸ್ ಪವಾರ್ ಫೈಟ್!

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಕೋಟೆಯನ್ನು ಕೆಡವಿದ ಮಾದರಿಯಲ್ಲಿಯೇ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಕೋಟೆ ಛಿದ್ರಗೊಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಹೀಗಾಗಿ, ಪವಾರ್ ಕುಟುಂಬಕ್ಕೆ ಸೆಡ್ಡು ಹೊಡೆಲು ಪವಾರ್ ಫ್ಯಾಮಿಲಿ ಸದಸ್ಯರನ್ನೇ ಕಣಕ್ಕಿಳಿಸಲಾಗಿದೆ. 

Maharashtra Baramati constituency election BJP create strategy for Sharad Pawar family defeat sat
Author
First Published Mar 31, 2024, 6:30 PM IST

ವರದಿ- ಯಲ್ಲಪ್ಪ ಹಾನಗಲ್, ಬುಲೆಟಿನ್ ಪ್ರೊಡ್ಯೂಸರ್, ಏಷ್ಯಾನೆಟ್ ಸುವರ್ಣ ನ್ಯೂಸ್
ನವದೆಹಲಿ (ಮಾ.31):
ಅದು 2019ರ ಲೋಕಸಭಾ ಚುನಾವಣೆ ಸಮಯ. ಆ ವೇಳೆ ಬಾಲಾಕೋಟ್​ ಏರ್‌ ಸ್ಟ್ರೈಕ್ ಬಳಿಕ ಬಿಜೆಪಿ ಜನಪ್ರಿಯತೆ ಉತ್ತುಂಗದಲ್ಲಿತ್ತು. ವಿಪಕ್ಷಗಳ ಘಟಾನುಟಿಗಳಿಗೆಲ್ಲಾ ಸೋಲಿನ ಆತಂಕ ಮನೆ ಮಾಡಿತ್ತು.. ಈ ವೇಳೆ ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಸರಣಿ ರ್‍ಯಾಲಿ ನಡೆಸಿದ್ರು. ಕಾರಣ ಎನ್‌ಸಿಪಿ ಅಭ್ಯರ್ಥಿ. ಶರದ್​ ಪವಾರ್​ ಪುತ್ರಿ ಸುಪ್ರಿಯಾ ಸುಳೆ ಅವರನ್ನೂ ಸೋಲಿಸಲೇಬೇಕು ಎಂದು ಕೇಸರಿ ಪಡೆ ರಣತಂತ್ರ ಹೂಡಿತ್ತು. ಆದ್ರೆ ಫಲಿತಾಂಶ ಹೊರ ಬಿದ್ದಾಗ ಬಿಜೆಪಿ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿತ್ತು. ಬರೋಬ್ಬರಿ 1. 55 ಲಕ್ಷ ಮತಗಳಿಂದ ಶರದ್ ಪವಾರ್​ ಪುತ್ರಿ ಗೆದ್ದು ಬೀಗಿದ್ದರು.

ಸುಪ್ರಿಯಾ ವರ್ಸಸ್​ ಸುನೇತ್ರಾ: ಈಗ ಮಹಾರಾಷ್ಟ್ರದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿವೆ. 2019ರವರೆಗೂ ಶರದ್​ ಪವಾರ್​ ಬಲಗೈನಂತಿದ್ದ ಅಜಿತ್ ಪವಾರ್ ಬರೋಬ್ಬರಿ 40 ಶಾಸಕರೊಂದಿಗೆ ಎನ್‌ಡಿಎ ಮೈತ್ರಿಕೂಟ ಸೇರಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಆದರು. ಈ ಬಾರಿ ಸುಪ್ರಿಯಾ ಸುಳೆ ವಿರುದ್ಧ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್​ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಮೊನ್ನೆಯಷ್ಟೇ ಎನ್‌ಸಿಪಿ ಬಣದಿಂದ 5 ಕ್ಷೇತ್ರಕ್ಕೆ ಹೆಸರು ಘೋಷಿಸಲಾಯ್ತು. ಅದೇ ಪಟ್ಟಿಯಲ್ಲಿ ಬಾರಾಮತಿ ಕ್ಷೇತ್ರದಿಂದ ಸುಪ್ರಿಯಾ ಸುಳೆಗೆ 4ನೇ ಬಾರಿ ಟಿಕೆಟ್ ಘೋಷಣೆಯಾಗಿದೆ. ಸುಪ್ರಿಯಾ ಸುಳೆ ಹೆಸರು ಘೋಷಣೆ ಆಗುತ್ತಿದ್ದಂತೆಯೇ, ಸುದ್ದಿಗೋಷ್ಠಿ ನಡೆಸಿದ ಎನ್‌ಸಿಪಿ ಅಜಿತ್ ಘಟಕದ ಅಧ್ಯಕ್ಷ ಸುನೀಲ್ ಕಾಟ್ಕರೇ, ಬಾರಾಮತಿ ಕ್ಷೇತ್ರಕ್ಕೆ ಸುನೇತ್ರಾ ಪವಾರ್​ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಈ ಬಾರಿ ಬಾರಾಮತಿ ಅಖಾಡದಲ್ಲಿ ನಾದಿನಿ,​ ಅತ್ತಿಗೆ ನಡುವೆ ಚುನಾವಣಾ ಹಣಾಹಣಿ ನಡೆಯಲಿದೆ.

ಪಂಜಾಬ್‌ನಲ್ಲಿ ಏಕಾಂಗಿಯಾಗಿರೋ ಬಿಜೆಪಿಗೆ ಕಾಂಗ್ರೆಸ್ ಮತ್ತು ಆಪ್ ಸಂಸದರು ಸೇರಿದ್ದೇಕೆ?

ಶರದ್ ಪವಾರ್ ಪುತ್ರಿ ಸೋಲಿಸುವುದು ಸಲೀಸಾ?: ಬಾರಾಮತಿ ಲೋಕಸಭಾ ಕಣದಲ್ಲಿ ಶರದ್​ ಪವಾರ್ ಪುತ್ರಿ ಸೋಲಿಸುವುದು ಅಷ್ಟು ಸಲೀಸಲ್ಲ. 1984ರಿಂದಲೇ ಬಾರಾಮತಿ ಮೇಲೆ ಶರದ್ ಪವಾರ್ ಅವರಿಗೆ ಹಿಡಿತವಿದೆ. ಕಾಂಗ್ರೆಸ್‌ನಿಂದ 1984, 1991, 1996 ಹಾಗೂ 1998ರ ಚುನಾವಣೆಗಳಲ್ಲಿ ಶರದ್ ಪವಾರ್​ ಗೆದ್ದಿದ್ದರು. 1999 ರಿಂದ 2004ರವರೆಗೂ ಮತ್ತೆರಡು ಬಾರಿ ಎನ್‌ಸಿಪಿ ಪಕ್ಷ ಸ್ಥಾಪಿಸಿದ ಪವಾರ್ ಆಗಲೂ ಗೆದ್ದಿದ್ದರು. ಈ ಕ್ಷೇತ್ರದಲ್ಲಿ ಬರೋಬ್ಬರಿ 8 ಬಾರಿ ಪವಾರ್ ಸಂಸದರಾಗಿದ್ದಾರೆ. ಆ ಬಳಿಕ 2009, 2014, 2019ರ ಚುನಾವಣೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಗೆದ್ದಿದ್ದಾರೆ. ಹೀಗಾಗಿ, ಬಾರಾಮತಿ ಕೋಟೆ ಮೇಲೆ ಪವಾರ್​ ಕುಟುಂಬಕ್ಕೆ ತನ್ನದೇ ಹಿಡಿತ ಇರುವುದು ಸುಳ್ಳಲ್ಲ.

ಮ್ಯಾಜಿಕ್ ಮಾಡ್ತಾರಾ ಅಜಿತ್ ಪವಾರ್ ಪತ್ನಿ: ಅಜಿತ್ ಪವಾರ್ ಪತ್ನಿ ಸುನೇತ್ರಾ ಚುನಾವಣಾ ರಾಜಕೀಯಕ್ಕೆ ಹೊಸಬರು. ಆದ್ರೆ ರಾಜಕೀಯ ಕ್ಷೇತ್ರ ಹೊಸದಲ್ಲ. ಬಾರಾಮತಿ ಕ್ಷೇತ್ರ ಅಜಿತ್ ಪವಾರ್​ ಕುಟುಂಬಕ್ಕೂ ಹೊಸದಲ್ಲ. 1991ರಲ್ಲಿ ಅಜಿತ್ ಪವಾರ್​ ಇದೇ ಕ್ಷೇತ್ರದಿಂದಲೇ ಒಂದು ಬಾರಿ ಸಂಸದ ಕೂಡ ಆಗಿದ್ದರು. ಇದೇ ಬಾರಾಮತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅಜಿತ್ ಪವಾರ್. ರಾಜಕೀಯ ಪಂಡಿತರು ಶರದ್​ ಪವಾರ್​ ಅಷ್ಟೇ ಅಜಿತ್ ಪವಾರ್‌ಗೂ ಇಲ್ಲಿ ಹಿಡಿತ ಇದೆ. ಬಾರಾಮತಿ ಲೋಕಸಭಾ ಕ್ಷೇತ್ರದ 6 ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಎನ್‌ಸಿಪಿ, ಇಬ್ಬರು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್​ ಶಾಸಕರಿದ್ದಾರೆ. ಆದರೆ, ಎನ್‌ಸಿಪಿಯ ಇಬ್ಬರು ಶಾಸಕರು ಅಜಿತ್ ಪವಾರ್​ ಬಣದಲ್ಲಿದ್ದಾರೆ. ಎನ್‌ಡಿಎ ಮೈತ್ರಿ ಕಾರಣದಿಂದಾಗಿ ಬಿಜೆಪಿ ಶಾಸಕರು ಸುನೇತ್ರಾ ಪವಾರ್ ಅವರನ್ನ​ ಬೆಂಬಲಿಸ್ತಾರೆ. ಜತೆಗೆ ಮೋದಿ ಜನಪ್ರಿಯತೆ ಬಳಸಿಕೊಂಡು ಶರದ್ ಪವಾರ್ ಪುತ್ರಿ ಸೋಲಿಸಲು ಲೆಕ್ಕಾಚಾರ ನಡೆದಿವೆ.

2019ರ ಚುನಾವಣೆಯ ಬದ್ಧ ವೈರಿ, 2024ರಲ್ಲಿ ಮೈತ್ರಿ ಸ್ನೇಹಿತರು; ಸುಮಲತಾ ಭೇಟಿಯಾದ ಕುಮಾರಸ್ವಾಮಿ

ಖರ್ಗೆ ಸೋಲಿಸಿದಂತೆ ಶರದ್ ಪವಾರ್ ಪುತ್ರಿ ಸೋಲಿಸಲು ತಂತ್ರ: ಕರ್ನಾಟಕದ ಕಲುಬರಗಿಯಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ಕಾಂಗ್ರೆಸ್‌ ಪ್ರಬಲ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಖರ್ಗೆ ಹಣಿಯಲು ಬಿಜೆಪಿ ಮಾಡಿದ ರಣತಂತ್ರ ಒಂದೆರಡಲ್ಲ. ಕಾಂಗ್ರೆಸ್​ ಶಾಸಕ ಉಮೇಶ್ ಜಾಧವ್‌ ಅವರನ್ನೇ ಬಿಜೆಪಿಗೆ ಸೇರಿಸಿಕೊಂಡು, ಅಭ್ಯರ್ಥಿಯಾಗಿಸಿ ಗೆಲ್ಲುವಲ್ಲಿ ಸಕ್ಸಸ್ ಆಗಿತ್ತು. ಇದೀಗ ಬಾರಾಮತಿ ಕೋಟೆಯಲ್ಲೇ ಶರದ್ ಪುತ್ರಿ ಸೋಲಿಸಲೂ ಇದೇ ರಣತಂತ್ರ ನಡೆದಿದೆ. ಅಜಿತ್ ಪವಾರ್​ ಪತ್ನಿಯನ್ನೇ ಇಲ್ಲಿ ಕಣಕ್ಕಿಳಿಸಲಾಗಿದೆ. ಶರದ್ ಪವಾರ್​ ಪುತ್ರಿ ಸೋಲಿಸಿ, ದೇಶಾದ್ಯಂತ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹೊಡೆತ ಕೊಡೋದು ಅಮಿತ್ ಶಾ ಲೆಕ್ಕಾಚಾರವಾಗಿದೆ.

Follow Us:
Download App:
  • android
  • ios