ಕೃಷಿ ಕಾಯ್ದೆ ರದ್ದು, 10 ಲಕ್ಷ ಉದ್ಯೋಗ ಸೃಷ್ಟಿ: ಮಹಾಮೈತ್ರಿ ಪ್ರಣಾಳಿಕೆ!
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಇರಾದೆ| ‘ಬದಲಾವಣೆಯ ಸಂಕಲ್ಪ’ ಹೆಸರಿನ ಈ ಪ್ರಣಾಳಿಕೆ| ಕೃಷಿ ಕಾಯ್ದೆ ರದ್ದು, 10 ಲಕ್ಷ ಉದ್ಯೋಗ ಸೃಷ್ಟಿ: ಮಹಾಮೈತ್ರಿ ಪ್ರಣಾಳಿಕೆ|
ಪಟನಾ(ಅ.18): ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಇರಾದೆ ಹೊಂದಿರುವ ಆರ್ಜೆಡಿ ನೇತೃತ್ವದ ಮಹಾಮೈತ್ರಿ ಪಕ್ಷಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
‘ಬದಲಾವಣೆಯ ಸಂಕಲ್ಪ’ ಹೆಸರಿನ ಈ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದಲ್ಲಿ ರಾಜ್ಯದ 10 ಲಕ್ಷ ಯುವಕರಿಗೆ ಉದ್ಯೋಗ, ದೇಶಾದ್ಯಂತ ರೈತರ ಹೋರಾಟಕ್ಕೆ ಕಿಚ್ಚು ಹೊತ್ತಿಸಿರುವ ನೂತನ ಕೃಷಿ ಕಾಯ್ದೆಗಳ ರದ್ದತಿ ಸೇರಿದಂತೆ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದೆ.
ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಇತರ ಮಹಾಮೈತ್ರಿ ಕೂಟದ ಮುಖಂಡರು ಭಾಗವಹಿಸಿದ ಸಭೆಯಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ತೇಜಸ್ವಿ, ಗುತ್ತಿಗೆ ಶಿಕ್ಷಕರ ಹಲವು ದಿನಗಳ ಬೇಡಿಕೆಯಂತೆ ಸಮಾನ ಕೆಲಸಕ್ಕೆ ಸಮಾನ ವೇತನ, ಬಿಹಾರಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಮಹಾಮೈತ್ರಿಕೂಟ ಬದ್ಧವಾಗಿರಲಿದೆ ಎಂದಿದ್ದಾರೆ