ನಾನು ಯಾರಿಗೂ ಮೋಸ ಮಾಡಿ ಜೀವನ ಮಾಡುತ್ತಿಲ್ಲ, ನಮ್ಮ ತಂದೆಯವರ ಪಿತ್ರಾರ್ಜಿತ ಆಸ್ತಿ ಇದ್ದು ನಾವು ಗೌರವಯುತವಾಗಿ ಬದುಕುತ್ತಿದ್ದೇವೆ: ಶಾಸಕ ಬಾಲಕೃಷ್ಣ 

ಮಾಗಡಿ(ಫೆ.29): ನಾನು ಯಾರಿಗೂ ಮೋಸ ಮಾಡಿ ಜೀವನ ಮಾಡುತ್ತಿಲ್ಲ, ನಮ್ಮ ತಂದೆಯವರ ಪಿತ್ರಾರ್ಜಿತ ಆಸ್ತಿ ಇದ್ದು ನಾವು ಗೌರವಯುತವಾಗಿ ಬದುಕುತ್ತಿದ್ದೇವೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಎ.ಮಂಜುನಾಥ್ ಪ್ರತಿ ವರ್ಷವೂ ಚುನಾವಣೆ ಸಂದರ್ಭದಲ್ಲಿ ನನ್ನ ಆಸ್ತಿ ಏರಿಕೆ ಆಗುತ್ತಿದೆ. ಅವರು ಪಿಸ್ತಾ, ಗೋಡಂಬಿ ಬೆಳೆಯುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಯಾರಿಗೂ ಮೋಸ ಮಾಡದೆ ರಾಜಕೀಯ ಮಾಡುತ್ತಿದ್ದೇನೆ. ನನಗೆ ಪಿತ್ರಾರ್ಜಿತ ಆಸ್ತಿ ಇದೆ. ಆದರೆ ಕೆಲವರಿಗೆ ಆಸ್ತಿಯೇ ಇಲ್ಲ ಕಡ್ಲೆಬೀಜ ಇಲ್ಲದೆ ಎಣ್ಣೆ ತೆಗೆಯುತ್ತಾರೆ. ಅವರ ಆಸ್ತಿಯೂ ಪ್ರತಿ ವರ್ಷವೂ ಏರಿಕೆಯಾಗುತ್ತಿದೆ. ಇದರ ಅರ್ಥ ಅವರೇ ತಿಳಿಸಬೇಕು. ನನ್ನ ತಂದೆಯವರ ಪಿತ್ರಾರ್ಜಿತ ಆಸ್ತಿಯಲ್ಲಿ ನಾವೇನೋ ಮಾಡಿಕೊಳ್ಳುತ್ತೇವೆ. ಆದರೆ ಕೆಲವರು ಮೋಸ ಮಾಡಿಯೇ ಜೀವನ ಮಾಡುತ್ತಿದ್ದು, ಮೋಸ ಹೋದವರು ಮನೆ ಬಳಿ ಹೋಗಿ ಶಾಪ ಹಾಕುತ್ತಿದ್ದಾರೆ. ಆ ರೀತಿ ನಮ್ಮ ಮನೆಗೆ ಬಂದು ಯಾರೂ ಶಾಪ ಹಾಕುವ ಕೆಲಸ ಮಾಡಿಲ್ಲ. ನನ್ನದೇನಾದರೂ ಮೋಸ ಮಾಡಿರುವ ನಿದರ್ಶನವಿದ್ದರೆ ಸಾಕ್ಷಿ ಸಮೇತ ತಂದು ತೋರಿಸಲಿ, ಅದನ್ನು ಬಿಟ್ಟು ಸುಮ್ಮಸುಮ್ಮನೆ ಮಾತನಾಡುವುದು ಸರಿಯಲ್ಲ. ಎಷ್ಟು ಜನಕ್ಕೆ ಮೋಸ ಮಾಡಿದ್ದಾರೆಂಬ ಪಟ್ಟಿ ಬಿಡುಗಡೆ ಮಾಡುತ್ತೇನೆ. ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡುವುದು ಬಿಟ್ಟು, ಪಕ್ಕದ ತಟ್ಟೆಯಲ್ಲಿರುವ ನೊಣ ಓಡಿಸಲು ಬರಬಾರದು ಎಂದು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ: ಶೋಭಾ ಕರಂದ್ಲಾಜೆ

100 ಕೋಟಿ ಅನುದಾನ ಬಂದಿದೆ:

ಸಂಸದ ಡಿ.ಕೆ. ಸುರೇಶ್ ಅವರ ಶ್ರಮದಿಂದ ತಾಲೂಕಿಗೆ ಕೇವಲ 6 ತಿಂಗಳಲ್ಲಿ 100 ಕೋಟಿ ಅನುದಾನ ತಂದಿದ್ದೇವೆ. ಇನ್ನಷ್ಟು ಅನುದಾನಗಳು ಬರಲಿದ್ದು, ಎಂಪಿ ಚುನಾವಣೆ ಇನ್ನೂ ಒಂದು ವರ್ಷ ತಡವಾಗಿದ್ದರೆ ಯಾವ ರೀತಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂಬುದನ್ನು ತೋರಿಸುತ್ತಿದ್ದೆವು. ನಾನು ಉಡಾಫೆ ರಾಜಕಾರಣ ಮಾಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಜನ ನಮಗೆ ಐದು ವರ್ಷ ಅಧಿಕಾರ ಕೊಟ್ಟಿದ್ದು, ತಾವು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಅಭಿವೃದ್ಧಿಗೆ ಸಹಕಾರ, ಸಲಹೆ ನೀಡಲಿ. ಅದನ್ನು ಬಿಟ್ಟು ಈ ರೀತಿ ಕೊಂಕು ಮಾತಾಡುವುದು ಬಿಡಬೇಕು ಎಂದರು.

ತಾಲೂಕಿಗೆ ಹೇಮಾವತಿ ನೀರು ತರುತ್ತೇವೆ. ಅಪೂರ್ಣಗೊಂಡಿರುವ ಹೇಮಾವತಿ ಕಾಮಗಾರಿ, ಕೆಶಿಫ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ ಎಂದು ಮಾಗಡಿ ಶಾಸಕ ಬಾಲಕೃಷ್ಣ ತಿಳಿಸಿದ್ದಾರೆ. 

ಗೃಹಲಕ್ಷ್ಮಿ ಫಲಾನುಭವಿಗಳಿಂದ ಮಾಹಿತಿ ಪಡೆಯಿರಿ

ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗುವ ಕುರಿತು ಸಮಾವೇಶ ಮಾಡಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ವಿರೋಧ ಪಕ್ಷದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಯೋಜನೆಯ ಮಹತ್ವದ ಬಗ್ಗೆ ಫಲಾನುಭವಿಗಳಿಂದಲೇ ಮಾಹಿತಿ ಪಡೆದುಕೊಳ್ಳಲಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೂ ಆಹ್ವಾನ ನೀಡಿದ್ದು ಕಾರ್ಯಕ್ರಮಕ್ಕೆ ಬಂದು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಶಾಸಕ ಬಾಲಕೃಷ್ಣ ಮನವಿ ಮಾಡಿದರು.